ಪ್ರಭಾ ಬೋರಗಾಂವಕರ ಅವರ “ಹೆಣ್ಣು ಹುಣ್ಣಲ್ಲ, ಹೂವು” ಎಂಬ ಕೃತಿ ಲೋಕಾರ್ಪಣೆ
ಅಥಣಿ : ಮೇ.25:ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿದಂತೆ ಎಂಬ ಭಾವನೆಯ ಒಂದು ಕಾಲವಿತ್ತು. ಆದರೆ ಇಂದು ಮಹಿಳೆ ಶಿಕ್ಷಣ ಪಡೆಯುವುದರ ಜೊತೆಗೆ ಎಲ್ಲ ಕ್ಷೇತ್ರಗಳಲ್ಲಿ ಪುರುಷನಷ್ಟೇ ಸಮಾನವಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಮಹಿಳೆ ಅಬಲೆಯಲ್ಲ ಸಬಲೆ ಎಂಬುದನ್ನು ಸಾಧಿಸಿದ್ದಾಳೆ ಎಂದು ಬೆಳಗಾವಿಯ ಸಾಹಿತಿ ಸುನಂದಾ ಎಮ್ಮಿ ಹೇಳಿದರು.
ಅವರು ಅಥಣಿ ಪಟ್ಟಣದ ಜಾಧವಜಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಸಾಹಿತ್ಯ ಮತ್ತು ಸಾಂಸ್ಕøತಿಕ ಸಂಘ ಅಥಣಿ ಹಾಗೂ ಸುಶೀಲ್ ಪ್ರಕಾಶನ ತೇರದಾಳ ಇವರ ಸಹಯೋಗದಲ್ಲಿ ಹಿರಿಯ ಸಾಹಿತಿ ಡಾ. ಜೆ. ಪಿ. ದೊಡಮನಿ ಅವರ ” ಭರವಸೆ ” ಎಂಬ ಕವನ ಸಂಕಲನ , ಮಹಿಳಾ ಸಾಹಿತಿ ಪ್ರಭಾ ಬಾಳಕೃಷ್ಣ ಬೋರಗಾಂವಕರ ಅವರ ” ಹೆಣ್ಣು ಹುಣ್ಣಲ್ಲ ಹೂವು ಮತ್ತು ಇತರ ಲೇಖನಗಳು ಎಂಬ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಪೂಜ್ಯನೀಯ ಸ್ಥಾನವಿದೆ. ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿತು ಎನ್ನುವ ಕಾಲ ಈಗ ಬದಲಾಗಿದೆ. ಮಹಿಳೆಯರು ತಮ್ಮ ಜೀವನದಲ್ಲಿ ಎದುರಿಸುವ ಅನೇಕ ಸಮಸ್ಯೆ ಮತ್ತು ಸವಾಲುಗಳನ್ನು ಈ ಲೇಖನಗಳಲ್ಲಿ ಬಿಂಬಿಸಲಾಗಿದ್ದು, ಸಮಾಜದಲ್ಲಿ ಇಂದು ನಡೆಯುತ್ತಿರುವ ಶೋಷಣೆ, ಸವಾಲುಗಳನ್ನ ಎದುರಿಸಿ ಸಾಧನೆ ಮಾಡಿದ ಸಾಧನೆ, ಸಮಾಜದಲ್ಲಿ ಇಂದು ಹೇಗೆ ಇರಬೇಕೆಂಬ ಸಲಹೆಗಳನ್ನು ಕೂಡ ಈ ಕೃತಿಯಲ್ಲಿ ನೀಡಲಾಗಿದೆ. ಒಟ್ಟಾರೆ ಹೆಣ್ಣು ಮಕ್ಕಳ ಸಾಧಕ ಬಾದಕ ಚಿತ್ರಣವನ್ನು ಈ ಲೇಖನಗಳಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ಲೇಖಕಿ ಪ್ರಭಾ ಬೋರಗಾಂವಕರ ಮಾಡಿದ್ದಾರೆ. 60ಕ್ಕೂ ಅಧಿಕ ವಿಶೇಷ ಲೇಖನಗಳಿರುವ ಹೆಣ್ಣು ಹುಣ್ಣಲ್ಲ ಹೂವು ಎಂಬ ಕೃತಿಯನ್ನು ಪ್ರತಿಯೊಬ್ಬರೂ ಓದಲೇಬೇಕಾದ ಗ್ರಂಥವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕನ್ನಡ ಉಪನ್ಯಾಸಕ ಡಾ. ವಿಜಯ ಕಾಂಬಳೆ ಮಾತನಾಡಿ ಸಾಹಿತಿ ಡಾ. ಜೆ ಪಿ ದೊಡಮನಿ ಅವರು ರಚಿಸಿದ ಭರವಸೆ ಎಂಬ ಕವನ ಸಂಕಲನದಲ್ಲಿ ಸಾಮಾಜಿಕ ವ್ಯವಸ್ಥೆಯಲ್ಲಿರುವ ಮೂಢನಂಬಿಕೆ, ಕಂದಾಚಾರ, ಜಾತಿ ವ್ಯವಸ್ಥೆಯನ್ನ ಹೋಗಲಾಡಿಸುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವ ಕವನಗಳನ್ನು ಈ ಸಂಕಲನದಲ್ಲಿ ಪ್ರಸ್ತುತಪಡಿಸಲಾಗಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಹಿತ್ಯ ಸಂಸ್ಕೃತಿಕ ಸಂಘದ ಅಧ್ಯಕ್ಷ ಡಾ. ಪ್ರಿಯಂವದಾ ಹುಲಗಬಾಳಿ ಅವರು ಮಾತನಾಡಿ ಸಾಹಿತ್ಯ ಸಾಂಸ್ಕೃತಿಕ ಸಂಘವು ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವೆಯನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ನಾಡಿನ ವಿಶ್ವವಿಖ್ಯಾತ ಕನ್ನಡ ಸಾಹಿತಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ನಮ್ಮ ಸಂಘದ ಕಾರ್ಯಕ್ರಮಗಳಿಗೆ ಆಗಮಿಸಿರುವುದು ನಮ್ಮೆಲ್ಲರಿಗೆ ಹೆಮ್ಮೆ. ಇಂದು ಅಥಣಿಯ ಹಿರಿಯ ಸಾಹಿತಿಗಳಾದ ಡಾ. ಜೆ ಪಿ ದೊಡಮನಿ ಹಾಗೂ ಪ್ರಭಾ ಬೋರಗಾಂವಕರ ಅವರ ಕೃತಿಗಳನ್ನು ಲೋಕಾರ್ಪಣೆ ಗೊಳಿಸುವುದು ನಮ್ಮೆಲ್ಲರಿಗೆ ಸಂತಸ. ಈ ದಂಪತಿಗಳ ಸಾಹಿತ್ಯ ಕೃಷಿ ಇದೇ ರೀತಿ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಡಾ. ಬಾಳಾಸಾಹೇಬ ಲೋಕಾಪುರ, ನಾರಾಯಣ ಆನೆಕಿoಡಿ, ಎಸ್ ಕೆ ಹೊಳೆಪ್ಪನವರ, ಡಾ. ಆರ್ ಎಸ್ ದೊಡ್ಡನಿಂಗಪ್ಪಗೋಳ, ದೇವೆoದ್ರ ಬಿಸ್ವಾಗರ, ಶ್ರೀಶೈಲ ಪಾಟೀಲ, ಡಿ. ಎಸ್ ದೊಡಮನಿ, ಭೀಮನಗೌಡ ಪೀರಗೊಂಡ, ಹಣಮಂತ ಕೋತ, ಜಯಶ್ರೀ ಕೆ ವಿ, ಬಿಎಸ್ ಲೋಕುರ, ವಿಶಾಲ ಭಾಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಡಾ. ಜೆ. ಪಿ. ದೊಡಮನಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಕು. ಅರ್ಚನಾ ಪಾಟೀಲ ಮತ್ತು ವಿದ್ಯಾ ಬುರ್ಲಿ ಕಾರ್ಯಕ್ರಮ ನಿರೂಪಿಸಿದರು. ಪ್ರಭಾ ಬೋರಗಾಂವಕರ ವಂದಿಸಿದರು.