ಜೀವನ ನಿರ್ವಹಣಾ ಕೌಶಲ್ಯ ಜ್ಞಾನಕ್ಕೆ ಒತ್ತು ನೀಡಿ:ಸಂತೋಷ ಬಂಡೆ
ವಿಜಯಪುರ,ಮೇ.25: ಶಿಸ್ತು, ಸಮಯ ಪ್ರಜ್ಞೆ, ಆತ್ಮವಿಶ್ವಾಸವು ವಿದ್ಯಾರ್ಥಿ ಜೀವನದ ಯಶಸ್ಸಿನ ಕೀಲಿಕೈಯಾಗಿದ್ದು, ಮಕ್ಕಳು ಅವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಶಿಕ್ಷಣದ ಸಾರ್ಥಕತೆ ಪಡೆಯಬೇಕು ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಶುಕ್ರವಾರದಂದು ನಗರದ ಷಣ್ಮುಖಾರೂಢ ಮಠದಲ್ಲಿ ಅಭಿನವಶ್ರೀ ಕೋಚಿಂಗ್ ಕ್ಲಾಸಿಸ್ ನ ಬೇಸಿಗೆ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ವಿಶೇಷ ಉಪನ್ಯಾಸಕರಾಗಿ ಅವರು ಮಾತನಾಡಿದರು.
ಮಕ್ಕಳು ಸಮಯದ ಸದುಪಯೋಗ ಮಾಡಿಕೊಂಡಾಗ ಉತ್ತಮ ಕಲಿಕೆ ಸಾಧ್ಯವಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಮತ್ತು ಆಧುನಿಕ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಜೀವನ ನಿರ್ವಹಣಾ ಕೌಶಲ್ಯ ಜ್ಞಾನ ಹೊಂದಬೇಕು ಎಂದು ಹೇಳಿದರು.
ಕನ್ನಡ ಶಿಕ್ಷಕ ಮಲ್ಲಿಕಾರ್ಜುನ ಪಡಂದರ ಮಾತನಾಡಿ,
ಮಾನವೀಯ ಮೌಲ್ಯಗಳನ್ನು ಬೆಳೆಸುವುದೇ ನಿಜವಾದ ಶಿಕ್ಷಣ. ಮಕ್ಕಳನ್ನು ಮೊಬೈಲ್ ಗಳಿಂದ ದೂರವಿರಿಸಿ ಅವರಿಗೆ ಪುಸ್ತಕದ ಪ್ರೀತಿಯನ್ನು ಹೆಚ್ಚಿಸಬೇಕು. ಓದುವ ಹವ್ಯಾಸವು ಮಕ್ಕಳಿಗೆ ಹೊಸ ಜಗತ್ತನ್ನು ನೀಡಬಲ್ಲದು ಎಂದರು.
ಉಪನ್ಯಾಸಕ ಅಮರೇಶ ಸಾಲಕ್ಕಿ ಮಾತನಾಡಿ,
ವಿದ್ಯೆಯು ಬಳಸಿದಷ್ಟು ಸಮೃದ್ಧವಾಗಿ ಬೆಳೆಯುವ, ಎಲ್ಲ ಸಂಪತ್ತಿಗಿಂತ ಮಿಗಿಲಾದದ್ದು. ಆದ್ದರಿಂದ ತಾಯಂದಿರು ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಿ ಮಕ್ಕಳ ಜ್ಞಾನ ಪ್ರೌಢಿಮೆ ಹೆಚ್ಚಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಭಿನವಶ್ರೀ ಕೋಚಿಂಗ್ ಕ್ಲಾಸಿಸ್ ಮುಖ್ಯಸ್ಥ ಅಶೋಕ ಬಿರಾದಾರ ಮಾತನಾಡಿ, ಮಕ್ಕಳು ಸಾಧನೆಯ ಗುರಿಯನ್ನು ಇಟ್ಟುಕೊಂಡು ನಿರಂತರವಾಗಿ ಅಭ್ಯಸಿಸಿ ಆ ಗುರಿಯತ್ತ ಮುನ್ನಡೆಯಬೇಕು. ನಿರಂತರ ಅಭ್ಯಾಸ ಮಾತ್ರ ಮಕ್ಕಳನ್ನು ಬೆಳೆಸಬಲ್ಲದು ಎಂದು ಹೇಳಿದರು.
ಶಿಕ್ಷಕಿ ಮಾಯಾ ನೈತಿಕ ಮೌಲ್ಯಗಳ ಕುರಿತು ಮಾತನಾಡಿದರು.
ವಿವಿಧ ವರ್ಗದ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಮಾಡಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಜರುಗಿದವು.
ಶಿಕ್ಷಕರಾದ ಎಸ್.ಬಿ. ಗುಲಗಂಜಿ, ರಾಜು ಕೆಂಗಲಗುತ್ತಿ, ಅಲ್ಲಾಭಕ್ಷ ಇನಾಮದಾರ, ಗೌಡಪ್ಪ ಬಿರಾದಾರ, ಶ್ರೀಶೈಲ ಯಂಕಂಚಿ, ಈಶ್ವರ ಹಡಗಿನಾಳ, ಮಹಾದೇವ ದೇವತಿ, ವಿಶಾಲ ಪಾಟೀಲ, ರೂಪಾ ಬಿರಾದಾರ, ಲಕ್ಷ್ಮೀ ಬಿರಾದಾರ, ರೇಣುಕಾ ಕೊಡೆಕಲ್ಲ, ಭುವನೇಶ್ವರಿ, ಪೂಜಾ ಕಾಂಬಳೆ, ಪ್ರಿಯಾಂಕ ಬೀಳಗಿ ಹಾಗೂ ಪಾಲಕ ಪ್ರತಿನಿಧಿ ಹನಮಂತರಾಯ ಪಾಟೀಲ ಸೇರಿದಂತೆ ಅನೇಕ ಪಾಲಕರು, ಮಕ್ಕಳು ಉಪಸ್ಥಿತರಿದ್ದರು.