ಮಳೆ, ಬೆಳೆಯಾಗಿ ದೇಶ ಸುಭಿಕ್ಷವಾಗಲಿ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.25:- ಕ್ರೋಧ, ಮತ್ಸರ, ಕಷ್ಟ ಕೋಟಲೆಗಳು ದೂರವಾಗಿ ಕಾಲ, ಕಾಲಕ್ಕೆ ಮಳೆ, ಬೆಳೆಯಾಗಿ ದೇಶ ಸುಭಿಕ್ಷವಾಗಲಿ ಎಂದು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಪ್ರಾರ್ಥಿಸಿದರು.
ಶ್ರೀ ದತ್ತ ವೆಂಕಟೇಶ್ವರ ಕ್ಷೇತ್ರದ 25ನೇ ವಾರ್ಷಿಕೋತ್ಸವ ಹಾಗೂ ಬ್ರಹ್ಮೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಕುಂಭಾಭಿಷೇಕ ಕಾರ್ಯಕ್ರಮದ ವೇಳೆ ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದ ಶ್ರೀಗಳು, ಜನರ ದುಃಖ ಕಡಿಮೆಯಾಗಲಿ ಸಮಸ್ತ ಜೀವಿಗಳಿಗೂ ಸುಖ ಪ್ರಾಪ್ತಿಯಾಗಲಿ. ರಾಜ್ಯ, ದೇಶ ಅಭಿವೃದ್ದಿಯಾಗಲಿ. ಪ್ರಜೆಗಳು ಮತ್ತು ಪ್ರಜಾ ಪ್ರತಿನಿಧಿಗಳಿಗೆ ಮನಃಶಾಂತಿ ಸಿಗಲಿ, ಜನರ ಕಷ್ಟ ನೋಡಿ ಅವುಗಳನ್ನು ಪರಿಹರಿಸಲಿ ಎಂದು ಆ ವೆಂಕಟರಮಣನಲ್ಲಿ ಪ್ರಾರ್ಥಿಸುತ್ತೇನೆ ಎಂದು ನುಡಿದರು.
ಜನರಲ್ಲಿ ಕ್ರೋಧ ಹೆಚ್ಚಾಗುತ್ತಿದೆ, ಶಾಂತಿ ಇಲ್ಲದಂತಾಗಿದೆ. ಕಲಿಯುಗದ ದೇವರು ವೆಂಕಟರಮಣ, ಅವನನ್ನು ಪ್ರಾರ್ಥಿಸಿದರೆ ಸುಖ, ಐಶ್ವರ್ಯ, ಶಾಂತಿ ಸಿಗಲಿದೆ, ಕಡು ಬಡವರು ಕೂಡಾ ಶ್ರೀಮಂತರಾಗುತ್ತಾರೆ. ಆದರೆ, ಆ ದೇವನಿಗೆ ನೆಮ್ಮದಿಯಿಂದ ಪ್ರಾರ್ಥನೆ ಮಾಡಿ, ಅವನ ಸ್ಮರಣೆ ಮಾಡಿ ಎಂದು ಹೇಳಿದರು.
ಇನ್ನಾದರೂ ಜಾಗೃತರಾಗಿ, ಎದ್ದೇಳಿ. ದೇವರ ಸ್ಮರಣೆ ಮಾಡಿ ಆಯಸ್ಸು, ಆರೋಗ್ಯ, ಸಂಪತ್ತು ಕರುಣಿಸುತ್ತಾನೆ. ಕಲಿಯುಗದ ದೈವ ವೆಂಕಟರಮಣ ಅವನನ್ನು ನೆನೆಯಿರಿ. ನಾನೂ ಕೂಡಾ ಅವನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ತಿಳಿಸಿದರು.
ಅವಧೂತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ದತ್ತ ವೆಂಕಟೇಶ್ವರ ಸನ್ನಧಿಯಲ್ಲಿ ಕುಂಭಾಭಿಷೇಕ ವಿಜೃಂಬಣೆಯಿಂದ ನೆರವೇರಿತು. ಇದಕ್ಕೂ ಮೊದಲು ವಜ್ರೋತ್ಸವ ಯಾಗಮಂಟಪದಲ್ಲಿ ಪ್ರಧಾನಯಾಗ ನೆರವೇರಿಸಲಾಯಿತು. ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಮತ್ತು ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಹೋಮ ಕಾರ್ಯದಲ್ಲಿ ಪಾಲ್ಗೊಂಡು ಪೂರ್ಣಾಹುತಿ ಸಮರ್ಪಿಸಿದರು.
ನಂತರ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ದತ್ತ ವೆಂಕಟೇಶ್ವರ ದೇವಾಲಯದ ಮೇಲ್ಬಾಗಕ್ಕೆ ತೆರಳಿ ಆಗಮಪಂಡಿತರ ಸಮ್ಮುಖದಲ್ಲಿ ವಿವಿಧ ನದಿಗಳಿಂದ ತರಲಾಗಿದ್ದ ಶುದ್ದ ಜಲದಿಂದ ದೇವಾಲಯಗಳ ಶಿಖರಗಳಿಗೆ ಮಹಾ ಕುಂಭಾಭಿಷೇಕ ನೆರವೇರಿಸಿದರು. ನಂತರ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಕೂಡಾ ಮೇಲ್ಬಾಗದಲ್ಲಿ ಕುಂಭಾಭಿಷೇಕ ನೆರವೇರಿಸಿದರು. ನಂತರ ಗಣಪತಿ ಶ್ರೀಗಳು ದೇವತಾ ಮೂರ್ತಿಗಳಿಗೆ ಬ್ರಹ್ಮಕಲಶ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದರು.