ದತ್ತ ವೆಂಕಟೇಶ್ವರ ಕ್ಷೇತ್ರದ 25ನೇ ವಾರ್ಷಿಕೋತ್ಸವ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.24:- ಅವಧೂತ ದತ್ತಪೀಠ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣದಲ್ಲಿರುವ ಶ್ರೀ ದತ್ತ ವೆಂಕಟೇಶ್ವರ ಕ್ಷೇತ್ರದ 25ನೇ ವಾರ್ಷಿಕೋತ್ಸವ ಹಾಗೂ ಬ್ರಹ್ಮೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಗುರುವಾರ ನಡೆದವು.
ಮುಂಜಾನೆಯಿಂದಲೇ ಹೋಮ, ಹವನ ನೆರವೇರಿದವು. ನಂತರ ವಿವಿಧ ನದಿಗಳಿಂದ ತರಲಾದ ಜಲದಿಂದ ಶ್ರೀದತ್ತ ವೆಂಕಟೇಶ್ವರ ಸ್ವಾಮಿಗೆ ಅಭಿಷೇಕ ನೆರವೇರಿಸಲಾಯಿತು, ನಂತರ ಕ್ಷೀರಾಭಿಷೇಕ ನೆರವೇರಿಸಿ ಗಣಪತಿ ಶ್ರೀಗಳು ಮಂಗಳಾರತಿ ಮಾಡಿದರು. ನಂತರ ಕಾರ್ಯ ಸಿದ್ದಿ ಹನುಮಾನ್ ಮಂದಿರದ ಮುಂಭಾಗ ಸ್ಥಾಪಿಸಿರುವ ಸ್ವಾಮಿಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅರ್ಚನೆ ಮತ್ತು ಪೂಜಾ ಕಾರ್ಯ ನೆರವೇರಿಸಿದರು. ಶ್ರೀಗಳಿಗೆ ಕಿರಿಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ನೆರವಾದರು.
ಇದೇ ಸಂದರ್ಭದಲ್ಲಿ ಪ್ರವಚನಕಾರ ಅರಳು ಮಲ್ಲಿಗೆ ಪಾರ್ಥಸಾರಥಿ ಆಧ್ಯಾತ್ಮಿಕ ಪ್ರವಚನ ನಡೆಸಿಕೊಟ್ಟರು. ಕಲಿಯುಗದಲ್ಲಿ ಆ ವೆಂಕಟೇಶ್ವರನ ಸ್ಮರಣೆಯೊಂದೇ ನಮಗೆಲ್ಲರಿಗೂ ಆಸರೆ. ನಾವೆಲ್ಲರೂ ಗೊತ್ತಿದ್ದೋ, ಗೊತ್ತಿಲ್ಲದೆಯೋ ಪಾಪ ಕಾರ್ಯಗಳನ್ನು ಮಾಡಿರುತ್ತೇವೆ. ಹಾಗಾಗಿಯೇ ಇಂದು ತೊಂದರೆ, ಸಂಕಟ ಅನುಭವಿಸುತ್ತಿದ್ದೇವೆ. ಈ ಪಾಪಗಳು ಹೋಗಬೇಕಾದರೆ ವೆಂಕಟರಮಣನಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ಪ್ರತಿಕ್ಷಣ ಪರಮಾತ್ಮನ ಸ್ಮರಣೆ ಮಾಡಬೇಕು, ದುರ್ಜನರ ಸಂಘ ಬಿಡಬೇಕು, ಕೆಟ್ಟತನ ಬಿಟ್ಟು ಸತ್ಸಂಗ ಹಿಡಿಯಬೇಕು ಬೇರೆಯವರ ಬಗ್ಗೆ ಅನಾವಶ್ಯಕವಾಗಿ ಚಿಂತನೆ ಮಾಡದೆ ಸದಾ ಪತಮಾತ್ಮನ ದ್ಯಾನ ಮಾಡಬೇಕು ಎಂದು ತಿಳಿ ಹೇಳಿದರು.
ಇತ್ತೀಚಿನ ದಿನಗಳಲ್ಲಿ ಟಿವಿ, ಸೋಷಿಯಲ್ ಮೀಡಿಯಾ, ಪತ್ರಿಕೆಗಳಿಂದಾಗಿ ಕೇವಲ ಕೆಟ್ಟದ್ದನ್ನೇ ಕೇಳಿ ಎಲ್ಲರ ಮನಸ್ಸು ವಿಕಾರಗೊಂಡಿದೆ. ಎಲ್ಲರೂ ಅಸೂಯಾಪರರಾಗಿ ಬಿಟ್ಟಿದ್ದಾರೆ ಎಲ್ಲೂ ಶಾಂತಿ, ನೆಮ್ಮದಿ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂತಹ ಕೆಟ್ಟ ಸಂದರ್ಭದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸದಾಚಾರ ತಿಳಿಸಿಕೊಡುತ್ತಿದ್ದಾರೆ. ಅವರ ದರ್ಶನದಿಂದ ಜೀವನದಲ್ಲಿ ಧನ್ಯತೆ ಸಿಗುತ್ತದೆ. ದೇವರ ಸ್ಮರಣೆ ನಿತ್ಯಸ್ಮರಣೆ ಆಗಬೇಕು. ಓಂ ನಮೋ ವೆಂಕಟೇಶ್ವರಾಯ ನಮಃ ಪಠಿಸಬೇಕು ಆಗ ಶ್ರೀ ದತ್ತ ವೆಂಕಟೇಶ್ವರ ಎಲ್ಲ ಪಾಪ ತೊಡೆದು ಹಾಕುತ್ತಾನೆ ಎಂದು ತಿಳಿಸಿದರು.ಇಂದು ವ್ಯಾಸ ಹುಣ್ಣಿಮೆ. ಅತ್ಯಂತ ಪವಿತ್ರÀ ದಿನ, ಪವಿತ್ರ ಭಾಗವತ ಗ್ರಂಥವನ್ನು ವ್ಯಾಸರು ಕೊಟ್ಟಿದ್ದಾರೆ. ಇದರ ಪ್ರತಿ ಪದದಲ್ಲೂ ಪರಮಾತ್ಮನಿದ್ದಾನೆ. ಇಂತಹ ಭಾಗವತವನ್ನು ಶ್ರೀಗಳು ಮತ್ತು ಕಿರಿಯ ಶ್ರೀಗಳು ನಿರರ್ಗಳವಾಗಿ ಹೇಳುತ್ತಾರೆ. ಅದನ್ನು ಕೇಳುವುದೇ ಪುಣ್ಯ ಎಂದು ತಿಳಿಸಿದರು.
ಗಣಪತಿ ಶ್ರೀಗಳು ಇಡೀ ಪ್ರಪಂಚ ಸುತ್ತಿದ್ದಾರೆ. ಎಲ್ಲಾ ಕಡೆ ನಮ್ಮ ಸಂಸ್ಕೃತಿಯನ್ನು ಮತ್ತು ಭಗವದ್ಗೀತೆಯನ್ನು ಪ್ರಚಾರ ಮಾಡಿದ್ದಾರೆ. ಅಮೇರಿಕಾದ ಡಲ್ಲಾಸ್‍ನಲ್ಲಿ 10 ಸಾವಿರ ಮಂದಿ ಒಂದೇ ವೇದಿಕೆಯಲ್ಲಿ ಭಗವದ್ಗೀತಾ ಪಠಣ ಮಾಡಿದ್ದು ಇತಿಹಾಸ ಸೃಷ್ಟಿ ದಾಖಲೆ ನಿರ್ಮಿಸಿದೆ ಎಂದು ಶ್ರೀಗಳ ಸಾಧನೆ ಕೊಂಡಾಡಿದರು.
ಶ್ರೀಗಳು ನಮ್ಮ ದೇಶವಷ್ಟೇ ಅಲ್ಲಾ ಇಡೀ ಪ್ರಪಂಚಕ್ಕೆ ಆಧ್ಯಾತ್ಮಿಕ ಜ್ಞಾನ ನೀಡುತ್ತಿದ್ದಾರೆ. ಅವರು ಸಂತರು, ಅವಧೂತರು. ಎಲ್ಲವೂ ಅವರಿಗೆ ತಿಳಿಯುತ್ತದೆ ಅವರಲ್ಲೇ ನಾವು ಸ್ವಾಮಿಯನ್ನು ಕಾಣಬಹುದು ಎಂದು ತಿಳಿಸಿದರು.
ಕಲಿಯುಗದಲ್ಲಿ ಜನರು ಪಾಪ ಕರ್ಮ ಮಾಡುತ್ತಾರೆ. ಈ ಕರ್ಮಗಳು ತೊಲಗಲು ಸುಲಭ ಮಾರ್ಗ ತಿಳಿಸಬೇಕೆಂದು ಧರ್ಮರಾಜ ಭೀಷ್ಮರಲ್ಲಿ ಕೇಳಿದಾಗ ಮಹಾವಿಷ್ಣುವಿನ ಸಹಸ್ರ ನಾಮ ಪಠಿಸಿದರೆ ಸಕಲ ಪಾಪ, ಜನ್ಮಾಂತರ ಕರ್ಮ ನಾಶವಾಗುತ್ತದೆ. ಯಶಸ್ಸು, ಸಂತೋಷ, ಸಮೃದ್ಧಿ ಸಿಗುತ್ತದೆ ಎಂದು ತಿಳಿಸಿಕೊಟ್ಟರು. ಅದರಂತೆ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸದಾ ಭಗವದ್ಗೀತೆ, ವಿಷ್ಣು ಸಹಸ್ರನಾಮ ಪಠಣೆಯಾಗುತ್ತದೆ. ಇಂತಹ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡುವುದೇ ನಮ್ಮೆಲ್ಲರ ಪುಣ್ಯ ಎಂದು ಹೇಳಿದರು.
ಕೋಟಿ, ಕೋಟಿ ಭಕ್ತರನ್ನು ಸಾತ್ವಿಕತೆಯ ಕಡೆಗೆ ಶ್ರೀ ಗಳು ಕರೆದೊಯ್ಯುತ್ತಿದ್ದಾರೆ. ಜಗತ್ತಿನಾದ್ಯಂತ ಆಶ್ರಮಗಳನ್ನು, ದೇವಾಲಯಗಳನ್ನು ನಿರ್ಮಿಸಿದ್ದಾರೆ, ಶ್ರೀ ಪ್ರಭುಪಾದರಂತೆ ದೇಶ ಪರ್ಯಟನೆ ಮಾಡುತ್ತಿದ್ದಾರೆ. ಗೀತೆ ಪ್ರಚಾರ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಲು ಸ್ವಾಮೀಜಿಗಳಿಗೆ ಸಾಧ್ಯವಾಗಿರುವುದು ಅವರಿಗೆ ಒಲಿದಿರುವ ಸಿದ್ದಿ, ಶ್ರೀಗಳು ಮಹಾನ್ ಸಂತರು, ವೇದವ್ಯಾಸರಂತೆಯೇ ಇವರೂ ಕೂಡಾ ನಿಜವಾದ ಗುರುಗಳು ಎಂದು ಬಣ್ಣಿಸಿದರು.