ನಿರಂತರ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.23: ಕಳೆದ ಒಂದು ವಾರದಿಂದ ನಿತ್ಯ ರಾತ್ರಿ ವೇಳೆ ಸುರಿಯುತ್ತಿರುವ ನಿರಂತರ ಮಳೆ ಭೀಕರ ಬರಗಾಲದಿಂದ ನಲುಗಿದ್ದ ತಾಲೂಕಿನ ರೈತ ಸಮುದಾಯದಲ್ಲಿ ಸಂತಸದ ನಗೆ ಮೂಡಿಸಿದೆ.
ಮಳೆಯಿಲ್ಲದೆ ತಾಲೂಕು ತೀವ್ರವಾದ ಬರಗಾಲದ ಸುಳಿಗೆ ಸಿಲುಕಿತ್ತು. ಅಂತರ್ಜಲ ಕುಸಿದು ರೈತರ ಕೃಷಿ ಪಂಪ್ ಸೆಟ್ಟುಗಳು ಸ್ಥಗಿತಗೊಂಡಿದ್ದವು. ನೀರಿಲ್ಲದೆ ಸಾವಿರಾರು ರೈತ ಕುಟುಂಬಗಳಿಗೆ ಸೇರಿದ ಕಬ್ಬು, ತೆಂಗು, ಅಡಿಕೆ ಮುಂತಾದ ಬೆಳೆಗಳು ಒಣಗಲಾರಂಭಿಸಿದ್ದವು. ಕೆರೆ ಕಟ್ಟೆಗಳು ಬರಿದಾಗಿದ್ದು ಜನ ? ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗಿತ್ತು. ತಾಲೂಕಿನ 14 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತಿತ್ತು. ಇದೀಗ ನಿತ್ಯ ಸಂಜೆ ಆರಂಭಂವಾಗಿ ರಾತ್ರಿ ವೇಳೆ ಸುರಿಯುತ್ತಿರುವ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಅಂತರ್ಜಲ ಮಟ್ಟದಲ್ಲಿ ಹೆಚ್ಚಳವಾದ ಪರಿಣಾಮ ಕುಡಿಯುವ ನೀರು ಪೂರೈಕೆಗೆ ಜಲ ಸುಧಾರಣೆ ಕಂಡಿದ್ದು ಗ್ರಾಮೀಣ ಅಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆ ನಿಟ್ಟುಸಿರು ಬಿಟ್ಟಿದೆ. ನಿರಂತರ ಮಳೆಯಿಂದ ತಾಲೂಕಿನ ಒಂದೆರಡು ಭಾಗದಲ್ಲಿ ರಸ್ತೆ ಬದಿಯ ಮರಗಳು ಮುರಿದು ಬಿದ್ದು ಒಂದಷ್ಟು ಕಾಲ ಸಂಚಾರಕ್ಕೆ ವ್ಯತ್ಯವಾದುದು ಬಿಟ್ಟರೆ ಯಾವುದೇ ಗಂಭೀರ ಸಮಸ್ಯೆ ಸೃಷ್ಠಿಯಾಗಿಲ್ಲ. ನಿರಂತರ ಮಳೆಯಿಂದ ಬತ್ತಿ ಹೋಗಿದ್ದ ತಾಲೂಕಿನ ಹಳ್ಳಕೊಳ್ಳಗಳಿಗೆ ಮರು ಜೀವ ಬಂದಿದ್ದರೆ ಕೆರೆಗಳಿಗೆ ಅಲ್ಪಸ್ವಲ್ಪ ನೀರು ಬಂದಿದೆ. ಹೊಲಗದ್ದೆಗಳಲ್ಲಿ ನೀರು ನಿಂತಿದ್ದು ಭೂದೇವಿಯ ಒಡಲು ತಣಿಯುತ್ತಿದೆ.
ತಾಲೂಕಿನ ಶೀಳನೆರೆ ಗ್ರಾಮದ ಚಿಕ್ಕ ಕೆರೆ ಸೇರಿದಂತೆ ಒಂದೆರಡು ಸಣ್ಣಪುಟ್ಟ ಕೆರೆಗಳು ಭರ್ತಿಯಾಗಿದ್ದು ಜಲರಾಶಿಯಿಂದ ತುಳುಕಾಡುತ್ತಿವೆ. ತಾಲೂಕಿನ ನಾರಾಯಣದುರ್ಗ ಅರಣ್ಯ ಪ್ರದೇಶದಲ್ಲಿ ಹುಟ್ಟಿ ಕೊಡಲಕುಪ್ಪೆ ಬಳಿ ಹೇಮಾವತಿ ಒಡಲು ಸೇರುವ ತೊರೆಹಳ್ಳ ಮರು ಜೀವ ಪಡೆದಿದ್ದು ಹಳ್ಳದ ನೀರಿನಿಂದ ಹೊಸಹೊಳಲಿನ ದೊಡ್ಡಕೆರೆಗೆ ಅಪಾರ ಪ್ರಮಾಣದ ನೀರು ಬಂದು ಸೇರುತ್ತಿದೆ. ಒಟ್ಟಾರೆ ಮುಂಗಾರು ಪೂರ್ವ ಮಳೆ ತಾಲೂಕಿನಾದ್ಯಂತ ಜನರ ಮನದಲ್ಲಿ ಸಂತಸ ತಂದಿದೆ.