ರೋಹಿತ ಕೊಲೆ ಪ್ರಕರಣ: ಅಪ್ರಾಪ್ತ ಸೇರಿ ನಾಲ್ವರ ಬಂಧನ
ವಿಜಯಪುರ,ಮೇ.22:ಯುವಕ ರೋಹಿತ್ ಪವಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಅಪ್ರಾಪ್ತ ಬಾಲಕ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಕದಾಸ ಬಡಾವಣೆ ನಿವಾಸಿ ಮುಜ್‍ಮಿಲ್ ಹಾಸೀಮ್‍ಖಾದ್ರಿ ಇನಾಮದಾರ (22), ರಾಜಾಜಿನಗರ ನಿವಾಸಿ ಸಾಯಿನಾಥ ಪರಶುರಾಮ ಪವಾರ (20), ಗಚ್ಚಿನಕಟ್ಟಿ ಕಾಲೊನಿ ನಿವಾಸಿ ಶರಣು ಶಿವಾನಂದ ಕುರಿ ಬಂಧಿತ ಆರೋಪಿಗಳು ಎಂದು ಹೇಳಿದ್ದಾರೆ.
ಸಿಪಿಐ ಮಲ್ಲಯ್ಯ ಮಠಪತಿ ಅವರ ನೇತೃತ್ವದ ವಿಶೇಷ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕಳೆದೆರಡು ದಿನಗಳ ಹಿಂದೆ ಇಂಡಿ ರಸ್ತೆಯ ಬಂಬಳ ಅಗಸಿ ನಿವಾಸಿ ರೋಹಿತ್ ಸುಭಾಸ ಪವಾರ ಎಂಬಾತನನ್ನು ಈ ಆರೋಪಿಗಳು ಕೊಲೆ ಮಾಡಿದ್ದರು ಎಂದು ಗಣೇಶ ಪವಾರ ದೂರು ನೀಡಿದ್ದರು. ಈ ದೂರಿನನ್ವಯ ಪ್ರಕರಣ ಬೇಧಿಸಲು ವಿಶೇಷ ತಂಡ ರಚನೆ ಮಾಡಲಾಗಿತ್ತು, ಈ ತಂಡ ತನಿಖಾ ಕಾರ್ಯಾಚರಣೆಯಲ್ಲಿದ್ದ ಸಂದರ್ಭದಲ್ಲಿ ಸಿಂದಗಿ ತಾಲೂಕಿನ ಮೋರಟಗಿ ಬಸ್ ನಿಲ್ದಾಣದಲ್ಲಿ ಇವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ಆರೋಪಿ, ಖಾಲೀದ ಇನಾಮದಾರ ಕುಮ್ಮಕ್ಕಿನಿಂದ ರೋಹಿತ್‍ನನ್ನು ಕೊಲೆ ಮಾಡಿದ್ದಾಗಿ ಹೇಳಿದ್ದಾನೆ ಎಂದು ಎಸ್.ಪಿ. ತಿಳಿಸಿದರು.
ಆರೋಪಿ ಮುುಜ್‍ಮಿಲ್ ಇನಾಮದಾರ 2 ಲಕ್ಷ ಮತ್ತು ಸಾಯಿನಾಥ ಪವಾರ 88 ಸಾವಿರ ರೂ. ಹಣವನ್ನು ಆನಂದನಗರದ ವಸಂತ ಚವ್ಹಾಣ ಬಳಿ ತಿಂಗಳಿಗೆ 10 ರೂ. ಬಡ್ಡಿ ದರದಂತೆ ಪಡೆದುಕೊಂಡಿದ್ದರು. ಆದರೆ ಈ ಆರೋಪಿಗಳು ಅಸಲು ಮತ್ತು ಬಡ್ಡಿ ಹಣವನ್ನು ವಸಂತನಿಗೆ ಮರಳಿಸುತ್ತಿರಲಿಲ್ಲ. ಇದರಿಂದ ನೊಂದ ವಸಂತ, ಕೊಲೆಗೀಡಾದ ರೋಹಿತನಿಗೆ ಅಸಲಿ ಹಣ ಹಾಗೂ ಹೆಚ್ಚಿನ ಬಡ್ಡಿ ವಸೂಲಿ ಮಾಡಿಕೊಡಲು ಹೇಳಿದ್ದ.
ವಸಂತನ ಮಾತು ಕೇಳಿ ಕೊಲೆಗೀಡಾದ ರೋಹಿತ್, ಹಣ ಹಾಗೂ ಬಡ್ಡಿ ನೀಡಲು ಆರೋಪಿಗಳಿಬ್ಬರಿಗೆ ಸತಾಯಿಸುತ್ತಿದ್ದ. ಅಲ್ಲದೇ, ಹೊಡೆದು, ಬಡಿದು, ಧಮಕಿ ನೀಡುತ್ತಿದ್ದ. ಇದಕ್ಕೆ ಸಿಟ್ಟಾದ ಆರೋಪಿಗಳೆಲ್ಲರೂ, ಈ ವಿಷಯವನ್ನು ಇನ್ನೊಬ್ಬ ಆರೋಪಿ ಖಾಲೀದ ಇನಾಮದಾರಗೆ ತಿಳಿಸಿದ್ದಾರೆ. ಆಗ ಖಾಲಿದ್, ಹಾಗಾದರೆ ರೋಹಿತನನ್ನೇ ಕೊಲೆ ಮಾಡಿ ಬಿಡಿ ಎಂದು ಕುಮ್ಮಕ್ಕು ನೀಡಿದ್ದರು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ ಎಂದರು.
ಈ ಕೊಲೆ ಸಂಚು ರೂಪಿಸಿ ರೋಹಿತ್ ಕಣ್ಣಿಗೆ ಖಾರದ ಪುಡಿ ಎರಚಿ, ಮೈತುಂಬಾ ಚಾಕುವಿನಿಂದ ಇರಿದು, ಬಳಿಕ ತಲೆ ಮೇಲೆ ಕಲ್ಲು ಎತ್ತಿ ಹಾಕಿ, ಕೊಲೆ ಮಾಡಿದ್ದಲ್ಲದೇ, ಬಳಿಕ ರೋಹಿತ್ ಶವವನ್ನು ಮುಳ್ಳುಕಂಟಿಯಲ್ಲಿ ಬಿಸಾಕಿ ಪರಾರಿಯಾಗಿದ್ದಾರೆ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದರು.