ಇಂಡಿಗನತ್ತ ಗ್ರಾಮಕ್ಕೆ ಬಿಜೆಪಿ ಮುಖಂಡರ ಭೇಟಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ.21- ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಗ್ರಾಮ ಪಂಚಾಯತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕೊಡಬೇಕಾಗಿರುವುದು ನಾಗರೀಕ ಸರ್ಕಾರದ ಜವಾಬ್ದಾರಿಯಾಗಿದೆ. ನೀತಿ ಸಂಹಿತೆ ಮುಗಿದ ನಂತರ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡುವಂತೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್ ಮಹೇಶ್ ಒತ್ತಾಯಿಸಿದರು.
ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಕಳೆದ ಏಪ್ರಿಲ್ ತಿಂಗಳಿನಲ್ಲಿ ನಡೆದ ಮತಗಟ್ಟೆ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಮಹಿಳೆಯರು ಜಾಮೀನಿನ ಮೇಲೆ ಬಂದನಂತರ ಅವರ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ಭಾನುವಾರದಂದು ಗ್ರಾಮಕ್ಕೆ ಅವರು ಭೇಟಿ ನೀಡಿ ಮಾತನಾಡಿದರು.
“ಮಲೆ ಮಹದೇಶ್ವರ ಬೆಟ್ಟ ಕಾಡಂಚಿನ ಗ್ರಾಮಗಳಲ್ಲಿನ ಜನರು ಮೂಲಭೂತ ಸೌಕರ್ಯಗಳಿಲ್ಲದೇ ಕಾಡುಪ್ರಾಣಿಗಳಿಗಿಂತ ಹೀನಾಯವಾಗಿ ಬದುಕುತ್ತಿದ್ದಾರೆ. ಸರ್ಕಾರ ಮತ್ತು ಜಿಲ್ಲಾಧಿಕಾರಿಗಳು ನೀತಿ ಸಂಹಿತೆ ಮುಗಿದ ತಕ್ಷಣ ಗ್ರಾಮಕ್ಕೆ ಸುಸಜ್ಜಿತ ರಸ್ತೆ, ವಿದ್ಯುತ್, ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು. ಗ್ರಾಮದ ಶಾಲೆಗೆ ಇನ್ನಷ್ಟು ಶಿಕ್ಷಕರುಗಳನ್ನು ನಿಯೋಜನೆ ಮಾಡಬೇಕು. ನೀವು ಈ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿ ಕೊಟ್ಟರೆ ಅವರೇ ಮುಂದಿನ ಚುನಾವಣೆಗಳಲ್ಲಿ ಮತದಾನ ಮಾಡುತ್ತಾರೆ. ಗ್ರಾಮಸ್ಥರಿಗೆ ನಾಗರಿಕ ಸೌಲಭ್ಯ ಸಿಕ್ಕಿಲ್ಲವಾದರೆ ಮುಂದಿನ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಚುನಾವಣಾ ಬಹಿμÁ್ಕರಕ್ಕೆಕರೆ ನೀಡಿದರೆ ನಾನು ಸಹ ಮೊದಲಿಗನಾಗಿ ಅವರ ಜೊತೆ ಕೈಜೋಡಿಸುತ್ತೇನೆ. ಆಗ ನೀವು ನನ್ನನ್ನು ಬಂಧಿಸಲಿ ನೋಡೋಣ” ಎಂದರು.
“ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಬಹಳ ಶ್ರೇಷ್ಠವಾದ ಹಕ್ಕು, ಇದು ಚಲಾವಣೆಯಾಗಬೇಕೆಂದರೆ ಮೂಲಭೂತ ಸೌಲಭ್ಯಗಳನ್ನು ಕೊಡಿ. ಸಮಸ್ಯೆಗಳನ್ನು ಉಲ್ಬಣ ಮಾಡಬೇಡಿ ಇದು ರಾಜ್ಯ ಹಾಗೂ ಜಿಲ್ಲೆಗೆ ಹಬ್ಬುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬೇಡಿ ಕಾಡಂಚಿನ ಗ್ರಾಮಗಳ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ನಾಗರಿಕ ಸರಕಾರ ಎಂಬುದನ್ನು ಸಾಬೀತು ಮಾಡಿ” ಎಂದು ಸವಾಲು ಎಸೆದರು.
ವಿದ್ಯಾರ್ಥಿಗಳನ್ನು ಹಾಸ್ಟೆಲ್‍ಗೆ ಸೇರಿಸಿ: ಇಂಡಿಗನತ್ತ ಗ್ರಾಮದಲ್ಲಿ ಒಂದನೇ ತರಗತಿಯಿಂದ 5ನೇ ತರಗತಿಯವರೆಗೆ ಮಾತ್ರ ಶಿಕ್ಷಣಕ್ಕೆ ಅವಕಾಶ ಇರುವುದರಿಂದ ಉನ್ನತ ವ್ಯಾಸಂಗಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ತಮ್ಮ ಮಕ್ಕಳನ್ನು ಹಾಸ್ಟೆಲ್‍ನಲ್ಲಿ ಸೇರಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಈ ನಿಟ್ಟಿನಲ್ಲಿ ನಿಮಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ಇವಿಎಂ ಧ್ವಂಸ ಮಾಡ ಬಾರದಿತ್ತು: ಗ್ರಾಮಸ್ಥರು ಇವಿಎಂ ಮತಯಂತ್ರವನ್ನು ಧ್ವಂಸ ಮಾಡಬಾರದಿತ್ತು, ಬಿಳಿ ಪಂಚೆ ಬಿಳಿ ಪ್ಯಾಂಟ್ ಹಾಕಿಕೊಂಡು ಬರುವಂತಹ ನಮ್ಮಂತಹ ಜನಪ್ರತಿನಿಧಿಗಳನ್ನು ಪ್ರಶ್ನೆ ಮಾಡಿದ್ದರೆ ಈ ಸಮಸ್ಯೆಗಳೇ ಬರುತ್ತಿರಲಿಲ್ಲ. ಕಳೆದ 70 ವರ್ಷಗಳಿಂದ ನಮಗೆ ಮೂಲಭೂತ ಸೌಲಭ್ಯ ಕೊಡದೆ ಜೀವನ ನಡೆಸಿದ್ದೇವೆ. ನಾವು ಏಕೆ ಮತ ಹಾಕಬೇಕು ಎಂದು ಆತ್ಮಾವ ಲೋಕನ ಮಾಡಿಕೊಂಡಿದ್ದರೆ ಅವರ ನಿರ್ಧಾರಕ್ಕೆ ನನ್ನ ಬೆಂಬಲವಿದೆ ಎಂದು ಎನ್. ಮಹೇಶ್ ಸಹಮತ ವ್ಯಕ್ತಪಡಿಸಿದರು.
ಬಿಜೆಪಿ ಒಬಿಸಿ ಜಿಲ್ಲಾಧ್ಯಕ್ಷ ಜನಧ್ವನಿ ಬಿ ವೆಂಕಟೇಶ್ ಅವರು ಮಾತನಾಡಿ, ಇಂಡಿಗನತ್ತ ಮತಗಟ್ಟೆ ಧ್ವಂಸ ಪ್ರಕರಣ ಉದ್ದೇಶ ಪೂರ್ವಕವಾಗಿ ನಡೆದಿಲ್ಲ. ಗ್ರಾಮಸ್ಥರು ಅಮಾಯಕರು ಹಾಗೂ ಮುಗ್ಧರಾಗಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ 46 ಜನರ ಮೇಲೆ ಪ್ರಕರಣ ದಾಖಲಾಗಿ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ. ಇವರಿಗೆ ನಾನು ಎಲ್ಲಾರೀತಿಯ ಸಹಕಾರ ನೀಡುತ್ತೇನೆ. ಕೆಲವು ನಿರಪರಾಧಿಗಳನ್ನು ಸಹ ಈ ಪ್ರಕರಣದಲ್ಲಿ ಸೇರಿಸಲಾಗಿದೆ. ಇವರಿಗೆ ನ್ಯಾಯಕೊಡಿಸುವ ನಿಟ್ಟಿನಲ್ಲಿ ಮೊದಲಿಗನಾಗಿರುತ್ತೇನೆ. ಮುಂದಿನ ದಿನಗಳಲ್ಲಿ ನಿಮ್ಮ ವಿದ್ಯಾರ್ಥಿಗಳ ಶಾಲಾ ಶುಲ್ಕವನ್ನು ನಾನೇ ಭರಿಸುತ್ತೇನೆ ನಿಮಗೆ ಯಾವುದೇ ಸಂದರ್ಭದಲ್ಲಿ ಯಾವುದೇ ರೀತಿಯ ಸೌಲಭ್ಯಗಳು ಬೇಕಿದ್ದರೂ ನನ್ನನ್ನು ನೇರವಾಗಿ ಸಂಪರ್ಕಿಸಿ ನಿಮ್ಮ ಧ್ವನಿಯಾಗಿರುತ್ತೇನೆ” ಎಂದು.
ಇಂಡಿಗನತ್ತ ಹಾಗೂ ಮೆಂದಾರೆ ಗ್ರಾಮದವರು ಕಾರೆಯ್ಯ ಬಿಲ್ಲಯ್ಯರಂತೆ ಅಣ್ಣತಮ್ಮಂದಿರಂತೆ ಇದುವರೆಗೂ ಜೀವನ ಮಾಡಿಕೊಂಡು ಬಂದಿದ್ದೀರಿ. ಮುಂದಿನ ದಿನಗಳಲ್ಲಿಯೂ ನೀವು ಅದೇ ರೀತಿ ಹೊಂದಾಣಿಕೆಯಿಂದ ಶಾಂತಿ ಸಹ ಬಾಳ್ವೆಯಿಂದ ಜೀವನ ನಡೆಸಬೇಕು. ಅವರು ನೀಡಿರುವ ದೂರನ್ನು ವಾಪಸು ತೆಗೆಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ಸಂಬಂಧ ಆದಿವಾಸಿ ಜನಾಂಗದ ಮುಖಂಡರುಗಳು ಹಾಗೂ ಗ್ರಾಮದ ಮುಖಂಡರುಗಳನ್ನು ಮನವಿ ಮಾಡುತ್ತೇನೆ. ಈ ಸಮಸ್ಯೆಯನ್ನು ಮರೆತು ಒಂದಾಗಿ ಬಾಳಿ ಎಂದು ಕರೆ ನೀಡಿದರು.
ಸರ್ಕಾರ ವಿಶೇಷ ಪ್ರಕರಣ ಎಂದು ಪರಿಗಣಿಸಬೇಕು: ಇಂಡಿಗನತ್ತ ಗ್ರಾಮದಲ್ಲಿ ಇರುವ ಗ್ರಾಮಸ್ಥರು ಕಾನೂನು ತಿಳುವಳಿಕೆ ಇಲ್ಲದಿರುವರು, ಮುಗ್ಧರು. ಈ ಘಟನೆ ನಡೆಯ ಬಾರದಿತ್ತು ನಡೆದು ಹೋಗಿದೆ ಆದರೆ ಘನ ಸರ್ಕಾರ ಈ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಈ ಪ್ರಕರಣವನ್ನುರದ್ದು ಮಾಡಬೇಕು ಎಂದು ಮನವಿ ಮಾಡಿದರು.
ಜೈಲಿನಿಂದ ಬಂದು ಮುಡಿಕೊಟ್ಟ ಮಹಿಳೆ: ಇಂಡಿಗನತ್ತ ಗ್ರಾಮದ ಮತಗಟ್ಟೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಕ್ಷೇತ್ರ ಮಲೆಮಾದೇಶ್ವರ ಬೆಟ್ಟದ ಸರದಿ ಅರ್ಚಕರಾಗಿ ಪೂಜೆ ಮಾಡುವತಮ್ಮಯ್ಯ ಪತ್ನಿ ಮಹಾದೇವಮ್ಮ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಜೈಲಿನಲ್ಲಿ ಇದ್ದರಿಂದ ಮೈಲಿಗೆ ಆಗಿದ್ದೇನೆ ಎಂದು ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಕೇಶ ಮುಂಡನೆ ಮಾಡಿಸಿಕೊಂಡು ವಿಶೇಷ ಪೂಜೆ ಮಾಡುವ ಮೂಲಕ ತಮ್ಮ ಹರಕೆ ಸಮರ್ಪಿಸಿದ್ದಾರೆ.
ಒಟ್ಟಾರೆ ಇಂಡಿಗನತ್ತ ಗ್ರಾಮ ನಿಧಾನಕ್ಕೆ ಸಹಜ ಜೀವನ ದತ್ತ ಮರಳುತ್ತಿದ್ದು, ಮೂಲಸೌಕರ್ಯಕ್ಕಾಗಿ ಸರ್ಕಾರದತ್ತ ನೋಡುತ್ತಿದ್ದಾರೆ.