ಕರಾಟೆ ಆತ್ಮ ರಕ್ಷಣೆಗೆ ಬಹು ಮುಖ್ಯ: ಬಿರಾದಾರ
ವಿಜಯಪುರ,ಸೆ.23: ಕರಾಟೆ ಒಂದು ಕಲೆ. ನಮ್ಮ ಆತ್ಮರಕ್ಷಣೆಗೆ ಬಹು ಮುಖ್ಯ ಎಂದು ವಿಜಯಪುರ ನಗರ ವಲಯದ ದೈಹಿಕ ಶಿಕ್ಷಣಾಧಿಕಾರಿ ಎಸ್.ಜೆ. ಬಿರಾದಾರ ಹೇಳಿದ್ದಾರೆ.
ಶುಕ್ರವಾರ ನಗರದ ಡಾ. ಬಿ. ಆರ್. ಅಂಬೇಡ್ಕರ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ನಗರ ವಲಯ ಹಾಗೂ ಬಿ.ಎಲ್.ಡಿ.ಇ ಸಂಸ್ಥೆಯ ಸಮನ್ವಯ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರಸಕ್ತ ಶೈಕ್ಷಣಿಕ ವರ್ಷದ ತಾಲೂಕು ಮಟ್ಟದ ಕರಾಟೆ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆ ಇಲ್ಲದ ಜೀವನ ಕೀಡೆ ಇದ್ದ ಹಣ್ಣಿನಂತೆ. ಇಂದಿನ ಮಕ್ಕಳು ಪಾಠದ ಜೊತೆಗೆ ಆಟಗಳಲ್ಲಿ ಪಾಲ್ಗೊಂಡು ದೈಹಿಕವಾಗಿ ಸದೃಢರಾಗಬೇಕು. ಎಂದು ಅವರು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕ ಎಸ್. ಸಿ. ಬಿರಾದಾರ ಮಾತನಾಡಿ, ಕರಾಟೆಯ ಮಹತ್ವ ತಿಳಿಸಿದರು. ಅಲ್ಲದೇ, ವಿದ್ಯಾರ್ಥಿಗಳು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಕ್ರೀಡೆಯಲ್ಲಿ ಆಸಕ್ತಿ ತೋರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಶಿಕ್ಷಣಾಧಿಕಾರಿ ಪ್ರೇಮಾ ಹಿರೇಮಠ ಮತ್ತು ವಿ. ಬಿ. ಪಾಟೀಲ, ಕರಾಟೆ ಶಿಕ್ಷಕರಾದ ಎ. ಎಸ್. ಪಟೇಲ, ವಿಜಯಕುಮಾರ ರಾಠೋಡ, ಅಬ್ಬಾಸಲಿ ಸನದಿ, ಎ.ಎಂ. ಕುದನಪುರ, ಎಂ.ಜಿ. ಕೋಟ್ಯಾಳ, ಖಾಜಾಪಟೇಲ ದೊಡಮನಿ. ದೀಪಕ ಬಾವಿ, ಮೇಘಾ ಗಾಡಿವಡ್ಡರ, ಕವಿತಾ ಉಗಾರೆ, ಎ.ಆರ್. ವಾಲಿಕಾರ, ಶಿವು ಉಳ್ಳಾಗಡ್ಡಿ, ಸಾಗರ ವಡ್ಡರ ಉಪಸ್ಥಿತರಿದ್ದರು.