ಮಕ್ಕಳ ಜೀವನದ ಔನ್ನತ್ಯಕ್ಕೆ ಶಿಕ್ಷಣ-ಉತ್ತಮ ಸಂಸ್ಕಾರ ಮುಖ್ಯ:ಸಂತೋಷ ಬಂಡೆ
ವಿಜಯಪುರ,ಮೇ.20: ವಿದ್ಯೆಗೆ ವಿನಯವೇ ಭೂಷಣವಾಗಿದ್ದು, ವಿದ್ಯಾರ್ಥಿಗಳು ಶ್ರದ್ಧಾಭಕ್ತಿಯಿಂದ ಕಲಿಯುವ ಜತೆಗೆ ಗುರು ಹಿರಿಯರನ್ನು ಗೌರವಿಸುವ ಸಂಸ್ಕಾರ ಬೆಳೆಸಿಕೊಳ್ಳಬೇಕು. ಶಿಕ್ಷಣದಿಂದ ಸಾಧನೆ ಸಾಧ್ಯವಾಗಲಿದ್ದು, ಕಲಿಕೆಗೆ ಶ್ರದ್ಧೆ ಮತ್ತು ಪರಿಶ್ರಮ ಮುಖ್ಯ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ರವಿವಾರ ನಗರದ ಆಲಕುಂಟೆ ಬಡಾವಣೆಯ ಕನಕ ಕೋಚಿಂಗ್ ಕ್ಲಾಸ್ ನಲ್ಲಿ ಕರ್ನಾಟಕ ಕನಕದಾಸ ಶಿಕ್ಷಣ ಸಂಸ್ಥೆ ಹಾಗೂ ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ “ಮುದ್ದು ಮನಸ್ಸುಗಳಿಗೆ ವಿವೇಕದ ಮಾತುಗಳು-ವ್ಯಕ್ತಿತ್ವ ವಿಕಸನ” ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಜೀವನದ ಔನ್ನತ್ಯಕ್ಕೆ ಶಿಕ್ಷಣ ಮತ್ತು ಉತ್ತಮ ಸಂಸ್ಕಾರ ಬಹು ಮುಖ್ಯ. ಮಕ್ಕಳು ಆತ್ಮವಿಶ್ವಾಸ, ಬದ್ಧತೆ, ದಕ್ಷತೆ, ಸ್ಥಿರತೆ-ಈ ನಾಲ್ಕು ಅಂಶಗಳನ್ನು ತಮ್ಮ ಜೀವನದಲ್ಲಿ ಅನುಪಾಲಿಸಬೇಕು. ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಪಡೆಯಲು ಸಾಧ್ಯ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಫೌಂಡೇಶನ್ ಅಧ್ಯಕ್ಷ ಸುನೀಲ ಜೈನಾಪುರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ನಿಷ್ಠೆಯಿದ್ದರೆ ಮಾತ್ರ ವಿದ್ಯೆ ಒಲಿಯುತ್ತದೆ. ಶಿಸ್ತು?ಮೈಗೂಢಿಸಿಕೊಂಡು ಸಮಯ ಪ್ರಜ್ಞೆಯಿಂದ ಕಲಿತರೆ?ಸಾಧನೆ ಮಾಡುವುದು ಕಷ್ಟವಲ್ಲ. ಬದುಕಿನಲ್ಲಿ ಮಾನವೀಯತೆ ಹಾಗೂ ದೇಶಭಕ್ತಿ ರೂಢಿಸಿಕೊಂಡು ಸತ್ಪ್ರಜೆಗಳಾಗಬೇಕು ಎಂದು ಹೇಳಿದರು.
ಶಿಕ್ಷಕ ಸಂತೋಷ ಜಿಂಗಾಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂಬಂತೆ ಬಾಲ್ಯದಿಂದಲೇ ಮಕ್ಕಳಿಗೆ ಜೀವನದ ಮೌಲ್ಯಗಳ ಅರಿವು ನೀಡಿ ಸುಸಂಸ್ಕøತರನ್ನಾಗಿ ಬೆಳೆಸಬೇಕು ಎಂದು ಹೇಳಿದರು.
ಕರ್ನಾಟಕ ಕನಕದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಯಪ್ರಭು ಕೊಳಮಲಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಮಹೇಶ ಪತ್ತಾರ, ಸಂಚಾಲಕ ರಾಮು ಕೆ, ಶಿಕ್ಷಕರಾದ ಶ್ರೀದೇವಿ, ಲಲಿತಾ ರಾಠೋಡ, ಮೌನೇಶ ಪತ್ತಾರ ಸೇರಿದಂತೆ ಮಕ್ಕಳು ಉಪಸ್ಥಿತರಿದ್ದರು.