ರಾ.ಹೆ.50ರ ಸರ್ವಿಸ್ ರಸ್ತೆಯ ಸಮಸ್ಯೆಗಳಿಗೆ ಶೀಘ್ರದಲ್ಲಿಯೇ ಪರಿಹಾರ: ಶಾಸಕ
ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಮೇ.18:  ರಾಷ್ಟ್ರೀಯ ಹೆದ್ದಾರಿ-50 ರ ನಿರ್ಮಾಣದಿಂದ ಪಟ್ಟಣ ಸೇರಿದಂತೆ ಹೆದ್ದಾರಿ ಅಕ್ಕಪಕ್ಕದ ಹಳ್ಳಿಗಳಿಗೆ ಆಗುತ್ತಿರುವ ಅಪಘಾತಗಳು, ಸಾವು- ನೋವುಗಳಿಗೆ ಹೆದ್ದಾರಿ ನಿರ್ಮಾಣದ ಸಮಯದಲ್ಲಾದ ನ್ಯೂನ್ಯತೆಗಳೇ ಕಾರಣ ಎಂದು ಹ.ಬೊ.ಹಳ್ಳಿ ಶಾಸಕ ಕೆ.ನೇಮಿರಾಜನಾಯ್ಕ್ ಹೇಳಿದರು.
ಅವರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಿಂದ ತಿಮ್ಮಲಾಪುರ, ಡಣಾಪುರ, ಡಣಾಯಕನಕೆರೆ ಗ್ರಾಮಗಳಿಗೆ ಆಗುತ್ತಿರುವ ತೊಂದರೆಗಳ ಕುರಿತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿ ಚರ್ಚಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಡಣಾಪುರ ಗ್ರಾಮಕ್ಕೆ ಅಂಡರ್ ಪಾಸ್ ಇಲ್ಲದಿರುವುದರಿಂದ ಗ್ರಾಮಸ್ಥರು, ಕಾರ್ಮಿಕರು, ರೈತರು, ವಿದ್ಯಾರ್ಥಿಗಳು ರಸ್ತೆ ದಾಟುವ ವೇಳೆ ಅಪಘಾತಗಳಿಗೆ ತುತ್ತಾಗುತ್ತಿದ್ದಾರೆ. ಕೂಡಲೇ ಸರ್ವಿಸ್ ರಸ್ತೆ, ಅಂಡರ್ ಪಾಸ್ ನಿರ್ಮಿಸಲು ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.  ಡಣಾಯಕನಕೆರೆ ಕ್ರಾಸ್ ನಿಂದ ಮಾಗಾಣಿಗೆ ತೆರಳುವ ರೈತರಿಗೆ ಆಗುವ ತೊಂದರೆಗಳ ಕುರಿತು ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ ರೈತರಿಗೆ ಅನುಕೂಲವಾಗುವಂತೆ ರಸ್ತೆ ನಿರ್ಮಿಸಿ ಕೊಡುವಂತೆಯೂ ಸೂಚಿಸಿದರು.
ಈ ಕುರಿತು ಶೀಘ್ರದಲ್ಲೇ ಡಿ.ಪಿ.ಆರ್.ಮುಗಿಸಿ ಸಂಬಂಧಿಸಿದ ಇಲಾಖೆಗೆ ವರದಿ ನೀಡಿ ಅನುಮೋದನೆ ಪಡೆದು 6-7 ತಿಂಗಳಲ್ಲಿ ಕಾಮಗಾರಿ ಮುಗಿಸಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದಕ್ಕೂ ಮುನ್ನಾ ಶಾಸಕ ನೇಮಿರಾಜ್ ನಾಯ್ಕ್ ‌ರು ತಿಮ್ಮಲಾಪುರ ಮೇಲ್ಸೇತುವೆಯಿಂದ ಗ್ರಾಮಕ್ಕೆ ಹಾಗೂ ಮೊರಾರ್ಜಿ ವಸತಿ ಶಾಲೆಗೆ ಆಗುವ ತೊಂದರೆಗಳ ಕುರಿತು ಪರಿಶೀಲನೆ‌ ನಡೆಸಿ ಅಲ್ಲಿಯ ಸಮಸ್ಯೆಗಳಿಗೆ ಸೂಕ್ತ ಕ್ರಮ‌ಕೈಗೊಳ್ಳುವಂತೆಯೂ ಸೂಚಿಸಿದರು.
ಈ ಸಂಧರ್ಭದಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ಶಿರಿಷ್ ಗಂಗಾಧರ, ಉತ್ತಮ್ ಮೋರೆ, ಗ್ರಾ.ಪಂ.ಸದಸ್ಯರಾದ ಬಸವರಾಜ, ಮಂಜುನಾಥಸ್ವಾಮಿ, ದಾಸಪ್ಪ ಸ್ಥಳೀಯ ಮುಖಂಡರಾದ ಷಣ್ಮುಖಪ್ಪ, ಹೊಸಪೇಟೆ ಹನುಮಂತಪ್ಪ, ತಿಮ್ಮಲಾಪುರ ಪ್ರಕಾಶ್, ಭರತ್, ವಿಜಯೇಂದ್ರ, ನಿಂಗಪ್ಪ, ಯಮನೂರ, ಗರಗ ಪ್ರಕಾಶ್, ಗುಂಡಾಸ್ವಾಮಿ, ಎಲೆಗಾರ ಮಂಜುನಾಥ, ಡಾ.ಈ.ಎರಿಸ್ವಾಮಿ, ಮಜ್ಗಿ ಶಿವಪ್ಪ, ಉಮೇಶ್ ಹಾಗೂ ಇತರರು ಇದ್ದರು.
One attachment • Scanned by Gmail