ಸಿದ್ಧೇಶ್ವರಕ್ಕೆ ಬಸ್ ಸಂಚಾರ ಆರಂಭ
ಬೀದರ್:ಮೇ.16: ಜಿಲ್ಲಾ ಕೇಂದ್ರದಿಂದ ಸಿದ್ಧೇಶ್ವರ ಮಾರ್ಗವಾಗಿ ಭಾಲ್ಕಿಗೆ ಬಸ್ ಓಡಿಸಬೇಕು ಎನ್ನುವ ಸಿದ್ಧೇಶ್ವರ ಗ್ರಾಮಸ್ಥರ ಬಹು ದಿನಗಳ ಬೇಡಿಕೆ ಕೊನೆಗೂ ಈಡೇರಿದೆ.
ಬೀದರನಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆದ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಕೆ. ಕನಕಟ್ಟೆ ಅವರು ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ನ್ಯಾಯಾಧೀಶರು ನಂತರ ಸಾಮಾನ್ಯ ಪ್ರಯಾಣಿಕರಂತೆ ಬಸನಲ್ಲಿ ಕುಳಿತು ಟಿಕೆಟ್ ಪಡೆದು ಪ್ರಯಾಣಿಸಿದರು.
ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಬೀದರನಿಂದ ಸಿದ್ಧೇಶ್ವರ ಮಾರ್ಗವಾಗಿ ಭಾಲ್ಕಿಗೆ ಬಸ್ ಓಡಿಸಬೇಕು ಎಂದು ಸಿದ್ಧೇಶ್ವರ ಗ್ರಾಮಸ್ಥರು ತಮಗೆ ಮನವಿ ಸಲ್ಲಿಸಿದ್ದರು. ವ್ಯಾಜ್ಯ ಪೂರ್ವ ಪ್ರಕರಣ ದಾಖಲಿಸಿಕೊಂಡು, ಈ ಕುರಿತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಅವರ ಗಮನ ಸೆಳೆದೆ. ಎರಡು ತಾಸಿನಲ್ಲೇ ಬೀದರ್-ಭಾಲ್ಕಿ ವಯಾ ಸಿದ್ಧೇಶ್ವರ ಹೊಸ ಬಸ್ ವ್ಯವಸ್ಥೆ ಮಾಡಿದ್ದಾರೆ ಎಂದು ಕನಕಟ್ಟೆ ತಿಳಿಸಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ ಫುಲೇಕರ್, ಕರ್ನಾಟಕ ಲೋಕಾಯುಕ್ತದ ವಿಶೇಷ ಸಾರ್ವಜನಿಕ ಅಭಿಯೋಜಕ ಕೇಶವರಾವ್ ಶ್ರೀಮಾಳೆ, ಗಣೇಶ ಮೂಕಡೆ ಮತ್ತಿತರರು ಇದ್ದರು.