ಅಹಂಕಾರ ಮಮಕಾರಗಳು ದೂರಾದಲ್ಲಿ ಆನಂದ ಪ್ರಾಪ್ತಿ

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೧೬;. ವಾಸ್ತವಿಕ ಸತ್ಯ ಎಂಬುದು ಒಂದೇ ಆದರೆ ನಾವು ಅಜ್ಞಾನದಿಂದಾಗಿ ಗೊಂದಲದಲ್ಲಿ ಇರುತ್ತೇವೆ, ಮಹಾನ್ ವ್ಯಕ್ತಿಗಳ ಜೀವನಗಾಥೆಯ ಅಧ್ಯಯನದಿಂದ ಈ ಗೊಂದಲಕ್ಕೆ ಪರಿಹಾರ ಲಭ್ಯ ಎಂದು ರಾಮಕೃಷ್ಣ ಮಿಷನ್ ನ ಕಾರ್ಯದರ್ಶಿಗಳಾದ ಸ್ವಾಮಿ ಶ್ರೀ ತ್ಯಾಗೀಶ್ವರಾನಂದ ಜಿ ಮಹಾರಾಜ್ ಅಭಿಪ್ರಾಯಪಟ್ಟರು. ಅವರು ಶಾಸ್ತ್ರಿಹಳ್ಳಿಯ ಅಭಯಾಶ್ರಮದಲ್ಲಿ ಶ್ರೀ ಶಿವದೇವಾನಂದಗಿರಿ ಸ್ವಾಮಿಗಳ 24ನೇ ಪುಣ್ಯಾರಾಧನೆ ಕಾರ್ಯಕ್ರಮದ ಸಾನ್ನಿಧ್ಯ  ವಹಿಸಿ ಮಾತನಾಡುತ್ತಾ ಜೀವನದ ಸಾಧನೆಯು ಬದುಕಿನ ವಿಧಾನದಲ್ಲಿದೆ,  ಚಂಚಲ ಚಿತ್ತವು ಏಕಾಗ್ರ ಗೊಂಡಾಗ ಬ್ರಹ್ಮ ಜ್ಞಾನದ ಪ್ರಾಪ್ತಿ ಮಾರ್ಗವು ಸುಲಭ ಎಂದರು.ಕಾರ್ಯಕ್ರಮದ ಪ್ರಧಾನ ಉಪನ್ಯಾಸಕರಾಗಿ ‘ಶ್ರೀರಾಮ ರಾಮ ನಾಮ ಮಹಿಮೆ’ಯ ಕುರಿತು ಮಾತನಾಡಿದ ಹಿರಿಯ ಪತ್ರಕರ್ತ ಎಚ್ ಬಿ ಮಂಜುನಾಥ್  ‘ರಾಮ’ ಎಂಬ ಎರಡಕ್ಷರದಲ್ಲಿ ‘ರಾ’ ಎಂದಾಗ ದೇಹದ ಪಾಪವೆಲ್ಲವೂ ವಾಯುವಿನ ರೂಪದಲ್ಲಿ ಬಾಯಿಂದ ಹೊರಹೋಗುತ್ತದೆ, ‘ಮ’ ಎಂದಾಗ ಪಾಪಗಳು ಒಳ ಹೋಗದಂತೆ ಬಾಯಿ ಮುಚ್ಚಿಕೊಳ್ಳುತ್ತದೆ, ರಾಮ ಎಂಬ ಎರಡಕ್ಷರವು ವಿಷ್ಣುವಿನ ಸಾವಿರ ಹೆಸರುಗಳಿಗೆ ಸಮತೂಕವುಳ್ಳದ್ದೆಂದು ಪರಮೇಶ್ವರರೇ ಪಾರ್ವತಿಗೆ ಹೇಳಿರುವುದು ಮಹಾಭಾರತದ ಅನುಶಾಸನ ಪರ್ವದ ವಿಷ್ಣು ಸಹಸ್ರನಾಮ ಪಠಣದಲ್ಲಿ ಗೊತ್ತಾಗುತ್ತದೆ ಎಂದರಲ್ಲದೆ ‘ಈ ದೇಹವೇ ನಾನು’ ಎಂಬ ‘ಅಹಂಕಾರ ಭಾವ’ ಹಾಗೂ ‘ನನ್ನ ಕುಟುಂಬ ಸದಸ್ಯರು ಮಾತ್ರ ನನ್ನವರು’ ಎಂಬ ‘ಮಮಕಾರ ಭಾವ’ ದೂರ ಮಾಡಿಕೊಂಡು ವಿಶಾಲಭಾವ ಬೆಳೆಸಿಕೊಳ್ಳದೆ ಹೋದರೆ ಬಯಶೋಕಮೋಹಗಳನ್ನು ದೂರ ಮಾಡಿಕೊಳ್ಳಲು ಸಾಧ್ಯವಿಲ್ಲ, ಭಯಶೋಕಮೋಹಗಳು ದೂರವಾಗದೆ ಆನಂದ ಸ್ಥಿತಿ ಪ್ರಾಪ್ತವಾಗುವುದಿಲ್ಲ, ಆನಂದ ಸ್ಥಿತಿಯನ್ನು ಜಾಗೃತಾವಸ್ಥೆಯಲ್ಲೂ ಸಾಧ್ಯವಾಗಿಸಿಕೊಂಡವರೇ ನಿಜವಾದ ಮಹಾಪುರುಷರು, ಬ್ರಹ್ಮೀಭೂತ ಶ್ರೀ  ಶಿವದೇವಾನಂದಗಿರಿ ಅವರು ಇದನ್ನು ಸಾಧಿಸಿಕೊಂಡವರು ಎಂದರು.ಅಭಯಾಶ್ರಮ ಸೇವಾ ಟ್ರಸ್ಟ್ ನ ಅಧ್ಯಕ್ಷ ರಾಜನಹಳ್ಳಿ ರಮೇಶ್ ಬಾಬು ಅಧ್ಯಕ್ಷೀಯ ನುಡಿಗಳನ್ನಾಡಿದರುದರು. ಕರಿಬಸಪ್ಪನವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ತ್ರಿವೇಣಿ ಹಾಡಿದರೆ ಸ್ವಾಗತವನ್ನು ಮಂಜಪ್ಪ ಮೇಷ್ಟ್ರು ಕೋರಿದರು. ವಂದನೆಗಳನ್ನು ನಿವೃತ್ತ ಇಂಜಿನಿಯರ್ ಗಣೇಶ್ ಡಾ.ಕರಿಯಪ್ಪ ಸಮರ್ಪಿಸಿದರು. ಶ್ರೀ ಶಿವ ಶಿವದೇವಾನಂದಗಿರಿಯವರ ಪೂರ್ವಾಶ್ರಮದ  ಮಾತೃಶ್ರೀರವರಾದ ಸರಸ್ವತಮ್ಮ ಮತ್ತು ಕುಟುಂಬ ವರ್ಗದವರು, ಸತ್ಯನಾರಾಯಣ ಮೂರ್ತಿ, ತುಂಬಿಗೆರೆ ಗೌಡ್ರು ಮುಂತಾದವರು ಹಾಗೂ  ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು.