ಮಾನವೀಯತೆಯ ಪ್ರಗತಿಗೆ ಬಸವಣ್ಣನವರ ವಚನಗಳು ಪ್ರೇರಣೆ

ಸಂಜೆವಾಣಿ ವಾರ್ತೆ
ಶಿವಮೊಗ್ಗ.ಮೇ.16 : ಪ್ರತಿಯೊಂದು ಕ್ಷೇತ್ರಗಳಲ್ಲಿ ಪ್ರಗತಿ ಹೊಂದುತ್ತಿರುವ ಈ ಹೊತ್ತಿನಲ್ಲಿ ಮಾನವೀಯತೆಯ ಪ್ರಗತಿಯು ಆಗಬೇಕಿದ್ದು, ಅಂತಹ ಪ್ರಗತಿಗೆ ಬಸವಣ್ಣನವರ ವಚನಗಳು ಪ್ರೇರಣೆ ನೀಡಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶುಕ್ರವಾರ ಸಂಜೆ ಕಸಾಪ ಕಛೇರಿಯ ಆವರಣದಲ್ಲಿ ಬಸವೇಶ್ವರ ಜಯಂತಿ ಪ್ರಯುಕ್ತ ಬಸವಣ್ಣನವರ ಶ್ರಮ ಸಂಸ್ಕೃತಿ ಸಮ ಸಮಾಜ ಚಿಂತನೆ ಗೋಷ್ಟಿ ಉದ್ಘಾಟಿಸಿ ಮಾತನಾಡಿದರು.ಸಮಸಮಾಜ ನಿರ್ಮಾಣ ಕಾರ್ಯದಲ್ಲಿ ಬಸವಣ್ಣನವರು ವಚನಗಳ ಮೂಲಕ ಪ್ರತಿಪಾದಿಸಿದ್ದರು. ಅದರೇ ಇವನಾರವ ಎನ್ನುವಾಗ ಇವ ನಮ್ಮವ ಎಂದು ಎಲ್ಲರನ್ನು ಸಮಾನವಾಗಿ ಕಾಣುವ ಕನಿಷ್ಟ ಸೌಜನ್ಯತೆಯನ್ನು ಕಳೆದುಕೊಳ್ಳುವ ಸಂದರ್ಭದಲ್ಲಿ ನಾವಿದ್ದೇವೆ. ಮಾನವೀಯತೆಯ ಪ್ರಗತಿಗಾಗಿ ಬಸವಣ್ಣನವರ ವಚನಗಳ ಸಾಲುಗಳ ಆಶಯಗಳನ್ನು ನಿಜವಾಗಿ ಅರ್ಥೈಸಿಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳಿದರು.ಸಾಹಿತಿ ಹೆಚ್.ಟಿ.ಕೃಷ್ಣಮೂರ್ತಿ ಮಾತನಾಡಿ, ಇಂದು ಎಲ್ಲರ ಬಾಯಲ್ಲಿ ಬಸವಣ್ಣನವರ ವಚನಗಳ ಸಾಲು ಪ್ರತಿಧ್ವನಿಸುತ್ತದೆ. ಅದರೆ ಎಷ್ಟರ ಮಟ್ಟಿಗೆ ನಮ್ಮ ಬದುಕಿನಲ್ಲಿ ಆ ಸಾಲುಗಳು ಅನುಷ್ಟಾನಗೊಂಡಿದೆ ಎಂಬುದು ಚರ್ಚಿತ ವಿಚಾರ.ಸಾಂಸ್ಕೃತಿಕ ನಾಯಕರಾದ ಬಸವಣ್ಣನವರು ಕೆಲವು ಮಾನ್ಯಗಳಿಗೆ ಮಾತ್ರ ಸೀಮಿತವಾಗಿದೆ. ನಮ್ಮ ನಡುವೆ ಇದ್ದ ಅನೇಕ ಸಾಂಸ್ಕೃತಿಕ ನಾಯಕರ ಆಶಯ ಅವೈದಿಕತೆಯ ದರ್ಶನ. ನಿರಂತರ ಹೋರಾಟದ ನಂತರವು ತುಳಿಯುವ ತುಳಿಸಿಕೊಳ್ಳುವ ಪದ್ದತಿಗಳು ಇಂದಿಗೂ ಉಸಿರಾಡುತ್ತಿವೆ. ಮನುಷ್ಯ ಚೈತನ್ಯವನ್ನು ಕುಗ್ಗಿಸುವಲ್ಲಿ ಜಾತಿ ವ್ಯವಸ್ಥೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಇಂದಿಗೂ ಸಮಸಮಾಜದ ಅನಿವಾರ್ಯತೆಗಳನ್ನು ಮಾಡುವ ಅವಶ್ಯಕತೆಗಳು ಮೂಡುತ್ತಿರುವುದು ವಿಷಾದನೀಯ.