ಕುಟುಂಬ ಪ್ರತಿ ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗ: ಸಂತೋಷ ಬಂಡೆ
ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.16: ಮನೆಯೇ ಮೊದಲ ಪಾಠ ಶಾಲೆ. ಕುಟುಂಬದಿಂದಲೇ ಒಬ್ಬ ವ್ಯಕ್ತಿಯು ಸಂಸ್ಕಾರ, ಪ್ರೀತಿ, ಹೊಂದಾಣಿಕೆಯನ್ನು ಕಲಿಯುತ್ತಾನೆ. ಕುಟುಂಬದ ಪ್ರೀತಿಯನ್ನು ಅರಿತು, ಇಡೀ ವಿಶ್ವವೇ ನಮ್ಮ ಕುಟುಂಬ ಎಂಬ ಭಾವನೆ ಎಲ್ಲರಲ್ಲಿ ಮೂಡಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ತಾಲೂಕಿನ ನಾಗಠಾಣ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡ ಅಂತಾರಾಷ್ಟ್ರೀಯ ಕುಟುಂಬ ದಿನವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕುಟುಂಬ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗವಾಗಿದ್ದು, ಜಗತ್ತು ಶಾಂತಿ, ಸಂಯಮದ ಹಾದಿಯಲ್ಲಿ ಸಾಗಲು ಕುಟುಂಬದ ತಳಪಾಯ ಅತಿ ಅಗತ್ಯ. ಎಲ್ಲರೂ ತಮ್ಮ ಕುಟುಂಬವನ್ನು ಪ್ರೀತಿಸಬೇಕು. ನಮ್ಮ ಇಡೀ ಜೀವನವನ್ನು ನಿರ್ಮಿಸುವ ಅಡಿಪಾಯವೇ ಕುಟುಂಬವಾಗಿದೆ ಎಂದು ಹೇಳಿದರು.
ಸಿಆರ್‍ಪಿ ಈರಣ್ಣ ಮಾತನಾಡಿ, ಮಾನವನ ಬೆಳವಣಿಗೆಗೆ ಕುಟುಂಬವು ಒಂದು ಅತ್ಯಂತ ಸಮರ್ಥವಾದ ತಳಹದಿಯಾಗಿದೆ. ಕುಟುಂಬವು ಮಕ್ಕಳ ಯೋಗಕ್ಷೇಮ, ಅಗತ್ಯಗಳನ್ನು ನೋಡಿಕೊಳ್ಳುತ್ತದೆ. ಮಗುವಿನಲ್ಲಿ ಸಾಮಾಜೀಕರಣ, ಭಾಷಾ ಬೆಳವಣಿಗೆ, ಭಾವನಾತ್ಮಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ಕುಟುಂಬದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಬ್ಯಾಂಕ್ ಉದ್ಯೋಗಿ ಶ್ರೀಕಾಂತ ಮಾತನಾಡಿ, ಸಮಾಜ ವ್ಯವಸ್ಥೆಯ ಬಹುಮುಖ್ಯ ಅಂಗ ಕುಟುಂಬ. ಉತ್ತಮ ಕುಟುಂಬದಿಂದಲೇ ಅತ್ಯುತ್ತಮ ಸಮಾಜ ನಿರ್ಮಾಣ ಸಾಧ್ಯ. ಭಾರತೀಯ ಪರಂಪರೆಯಲ್ಲಿ ಕುಟುಂಬಕ್ಕೆ ಬಹುಮುಖ್ಯ ಸ್ಥಾನವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುಟುಂಬದ ಹಿರಿಯರಾದ ಸುಭಾಷ, ಭುವನೇಶ್ವರಿ ಅವರನ್ನು ಗೌರವಿಸಲಾಯಿತು.
ಶಂಕರ, ಸವಿತಾ, ಸುರೇಖಾ, ಸುಹಾಸಿನಿ, ಗಾಯತ್ರಿ, ದೊಂಡಾಬಾಯಿ, ಸುಜಾತಾ ಮಕ್ಕಳಾದ ವರುಣ, ಪ್ರಫುಲ್, ಶ್ರೇಯಾ, ಸುಶಾಂತ್, ಆದೇಶ, ಆರುಷಿ, ಅನುಶ್ರೀ, ಶ್ರೀನಿಧಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.