ಕೃಷಿ ವಿಜ್ಞಾನಿಗಳು ಆತ್ಮಾವಲೋಕನ ಮಾಡಿಕೊಳ್ಳಲಿ
ಧಾರವಾಡ,ಸೆ.23: ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಸಂಶೋಧನೆಗಳು ವೇಗವಾಗಿ ಬಳಕೆಯಾಗುತಿದ್ದರೂ ನಮ್ಮ ದೇಶ ಹಾಗೂ ರಾಜ್ಯದ ಕೃಷಿ ಇಳುವರಿ ಇತರೇ ದೇಶಗಳಿಗೆ ಹೋಲಿಸಿದರೆ ನಿಗದಿತ ಪ್ರಮಾಣದಲ್ಲಿ ಏರಿಕೆಯಾಗದೆ ಇರುವ ಬಗ್ಗೆ ಕೃಷಿ ವಿಜ್ಞಾನಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ರಾಜ್ಯ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸಲಹೆ ನೀಡಿದರು.
ಕೃಷಿ ವಿಶ್ವವಿದ್ಯಾಲಯದಲ್ಲಿ ಇಂದು 24ನೇ ಸಾಲಿನ ಕೃಷಿ ಮೇಳವನ್ನು ಉದ್ಘಾಟಿಸಿ ಹಾಗೂ ಸಾಧಕ ಕೃಷಿಕರಿಗೆ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದರು.
ಕೃಷಿ ವಿವಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ. ಜಿಲ್ಲೆಯ ಒಂದು ಕ್ಷೇತ್ರ, ಹೋಬಳಿಯನ್ನು ಮಾದರಿಯಾಗಿಸಿ ಅಧ್ಯಯನ ಹಾಗೂ ಪ್ರಯೋಗ ಕೈಗೊಳ್ಳಬೇಕು. ಇಂಟಿಗ್ರೇಟೆಡ್ ಕೃಷಿ ಹಾಗೂ ಕ್ಷೇತ್ರ ಭೇಟಿಗೆ ಒತ್ತು ನೀಡಬೇಕೆಂದು ಅವರು ತಿಳಿಸಿದರಲ್ಲದೇ ಕೃಷಿ ಮೇಳದ ಪರಿಣಾಮದ ಅಧ್ಯಯನ ಸಹ ಕೈಗೊಳ್ಳಬೇಕೆಂದು ಅವರು ಹೇಳಿದರು.
ಸಭಾಪತಿ ಬಸವರಾಜ ಹೊರಟ್ಟಿ ಅವರು ಮಾತನಾಡಿ, ಇತ್ತೀಚಿನ ಭಾಷಣಗಳಲ್ಲಿ ಯುವಕರು ಕೃಷಿಯಿಂದ ದೂರವಾಗುತ್ತಿದ್ದು, ಕೃಷಿ ಕಾರ್ಮಿಕರು ದೊರೆಯುತ್ತಿಲ್ಲವೆಂದು ಕಳವಳ ವ್ಯಕ್ತಪಡಿಸಿದರು. ಆಧುನಿಕತೆಯ ತಂತ್ರಜ್ಞಾನ, ಜೀವನಶೈಲಿ, ಪಾರಂಪರಿಕ ಕೃಷಿ ಅವಮಾನ, ಮಾರಾಟ ಸೇರಿದಂತೆ ಅನೇಕ ಜಟಿಲ ಸಮಸ್ಯೆಗಳಿವೆ. ರೈತರ ಮಕ್ಕಳು ಕೃಷಿ ವಿಜ್ಞಾನ ಓದಿದರೂ ಕೃಷಿಕರಾಗುತ್ತಿಲ್ಲ ಕೃಷಿ ವಿವಿ ಸಂಶೋಧನೆಗಳು ರೈತರಿಗೆ ಉಪಯೋಗವಾಗಬೇಕು ಇಂಟಿಗ್ರೇಟೆಡ್ ಕೃಷಿಗೆ ಹೆಚ್ಚು ಹೊತ್ತು ನೀಡಬೇಕೆಂದರು.
ಶಾಸಕ ಎನ್.ಹೆಚ್.ಕೋನರೆಡ್ಡಿ ಮಾತನಾಡಿ, ನಿಸರ್ಗ ಬದಲಾಗುತ್ತಿದೆ ಹವಾಮಾನ ವರದಿಯಿಂದ ಮಳೆ, ಬೆಳೆ ಪರಿಣಾಮವಾಗುತ್ತಿದೆ ಆಧುನಿಕ ತಂತ್ರಜ್ಞಾನ ಉಪಯೋಗಿಸಿ ಪಶುಸಂಗೋಪನೆ ಕಡಿಮೆಯಾಗುತ್ತಿದೆ ರೈತರಿಗೆ ವೈಜ್ಞಾನಿಕ ಬೆಂಬಲ ಬೆಲೆ ದೊರೆಯುತ್ತಿಲ್ಲ ಎಂದರು.
ರೈತರಿಗೆ ಕೃಷಿ ವಿವಿ ಪವಿತ್ರಸ್ಥಾನ ಇಲ್ಲಿ ನಡೆಯುವ ಸಂಶೋಧನೆಗಳು ರೈತರಿಗೆ ಮಾರ್ಗದರ್ಶನವಾಗಬೇಕು ವಿಜ್ಞಾನಿಗಳು ರೈತರ ಹತ್ತಿರ ಹೋಗಬೇಕು ಎಲ್ಲವೂ ಹೈಬ್ರಿಡ್ ಮಯವಾಗಿವೆ. ದೇಶಿ ಪಾರಂಪರಿಕ ಬೆಳಗೆ ಹಾಗೂ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕೆಂದರು.
ಶಾಸಕ ಹಾಗೂ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಬ್ಬಯ್ಯ ಪ್ರಸಾದ ಮಾತನಾಡಿ, ಹವಾಮಾನ ವೈಪರಿತ ನಿರ್ವಹಣೆಯಲ್ಲಿ ಕೃಷಿ ವಿಜ್ಞಾನಗಳು ರೈತರಿಗೆ ಕಾಲಕಾಲಕ್ಕೆ ಸರಿಯಾದ ಮಾರ್ಗದರ್ಶನ ಮಾಡಬೇಕೆಂದರು. ಹೊಸ ಹೊಸ ತಳಿಗಳು, ನೂತನ ಆವಿಷ್ಕಾರಗಳು, ತಂತ್ರಜ್ಞಾನಗಳು ಲಕ್ಷಾಂತರ ರೈತರಿಗೆ ಉಪಯೋಗವಾಗಬೇಕು. ಸ್ವಾತಂತ್ರ್ಯ ನಂತರ ದಿನಗಳಲ್ಲಿ ಹಸಿರು ಕ್ರಾಂತಿಯಾಗಿ ಆರು ಉತ್ಪಾದನೆಯಲ್ಲಿ ಕ್ರಾಂತಿಯ ಉಂಟಾಗಿ ದೇಶವು ರಫ್ತು ಮಾಡುವ ಸ್ಥಿತಿಗೆ ಬಂದಿದೆ. ಇಂದು ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರಿಗೆ ತೊಂದರೆಯಾಗುತ್ತಿದೆ. ಗಾಳಿ, ನೀರು, ಆಹಾರ ಕಲುಷಿತಗೊಂಡಿದೆ.
ಅದರಿಂದ ಸಾವಯವ ಕೃಷಿಗೆ ಹಾಗೂ ದೇಶ ಬೆಳೆಗಳಿಗೆ ಸಿರಿಧಾನ್ಯಗಳಿಗೆ ಹೆಚ್ಚಿನ ಹೊತ್ತು ನೀಡಬೇಕು, ನೀರು ಮಣ್ಣು ಸಂರಕ್ಷಣೆ ಆಗಬೇಕೆಂದು ನುಡಿದರು.
ಮೈಸೂರಿನ ಮಿನರಲ್ಸ್ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಜಿ.ಎಸ್. ಪಾಟೀಲ, ಕೃಷಿ ವಿವಿಯ ಕುಲಪತಿ ಡಾ. ಪಿ.ಎಲ್. ಪಾಟೀಲ. ಜಿಲ್ಲಾಧಿಕಾರಿ ದಿವ್ಯ ಪ್ರಭು ಸೇರಿದಂತೆ ಕೃಷಿ ವಿವಿಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ವಿವಿಧ ಗಣ್ಯಮಾನ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
