ಕೆಪಿಟಿ ಬಳಿ ಭೀಕರ ಅಪಘಾತ: ಸಿಸಿಟಿವಿಯಲ್ಲಿ ಸೆರೆ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಕೆಪಿಟಿ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಲಾರಿ ಚಾಲಕನ ಅಚಾತುರ್ಯಕ್ಕೆ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಗಂಭೀರ ಗಾಯಗೊಂಡ ಬೈಕ್ ಸವಾರನನ್ನು ನಿವಾಸಿ ತಲಪಾಡಿ ಕಿನ್ಯಾ ಮೂಲದ ಅಶೋಕ್(೪೪) ಎಂದು ಗುರುತಿಸಲಾಗಿದೆ. ಅಪಘಾತದ ದೃಶ್ಯ ಹತ್ತಿರದಲ್ಲೇ ಇದ್ದ ಪೆಟ್ರೋಲ್ ಬಂಕ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಯೆಯ್ಯಾಡಿಯಿಂದ ಕೆ.ಪಿ.ಟಿ ಜಂಕ್ಷನ್?ನ ಸಪ್ತಗಿರಿ ಪೆಟ್ರೋಲ್ ಪಂಪ್ ಕಡೆ ಬೈಕ್ ಸವಾರ ಬರುತ್ತಿದ್ದರು. ಅದೇ ವೇಳೆ ಪೆಟ್ರೋಲ್ ಪಂಪ್ ಕಡೆಗೆ ಇಂಡೇನ್ ಗ್ಯಾಸ್ ತುಂಬಿದ್ದ ಗೂಡ್ಸ್ ಲಾರಿ ಬರುತ್ತಿತ್ತು. ಗೂಡ್ಸ್ ಲಾರಿಯ ಚಾಲಕ ಏಕಾಏಕಿ ಎಡಬದಿಗೆ ತಿರುಗಿಸಿದ್ದರಿಂದ ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಬೈಕ್ ಸವಾರನ ಸೊಂಟ ಹಾಗೂ ಬಲ ಕೈ ಮೇಲೆ ಲಾರಿಯ ಎದುರಿನ ಚಕ್ರ ಹರಿದಿದೆ. ಬೈಕ್ ಸವಾರನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಕದ್ರಿ ಸಂಚಾರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.