ಮೇ ೨೧ರಿಂದ ೪೭ ನೇ ನರಸಿಂಹ ಜಯಂತಿ ಮಹೋತ್ಸವ
ಬೆಂಗಳೂರು; “ಶ್ರೀ ವಜ್ರಕ್ಷೇತ್ರ” ಎಂದೇ ಖ್ಯಾತಿ ಪಡೆದಿರುವ ಬಸವನಗುಡಿಯ ತ್ಯಾಗರಾಜನಗರದ ಶ್ರೀ ಅಭಯ ಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ಈ ತಿಂಗಳ ೨೧ ರಿಂದ ೨೩ ರ ವರೆಗೆ ೪೭ ನೇ ವರ್ಷದ ವೈಭವದ “ನರಸಿಂಹ ಜಯಂತಿ ಮಹೋತ್ಸವ” ನಡೆಯಲಿದೆ.
ಭಗವಾನ್ ಅಭಯ ಲಕ್ಷ್ಮೀ ನರಸಿಂಹ, ಭಗವಾನ್ ಅಶ್ವಥ ಕುಬೇರ ಲಕ್ಷ್ಮೀ ನರಸಿಂಹ ಮತ್ತು ಕಂಬದ ನರಸಿಂಹನ ವಜ್ರದ ಆಕಾರದ ಸ್ವರೂಪದಿಂದಾಗಿ ಈ ಹೆಸರು ಬಂದಿದ್ದು, ನಗರದಲ್ಲಿ ನರಸಿಂಹ ಜಯಂತಿಗೆ ತನ್ನದೇ ಆದ ಮಹತ್ವ ಪಡೆದುಕೊಂಡಿದೆ.
೨೧ ರಂದು ನರಸಿಂಹ ಜಯಂತಿ ಅಂಗವಾಗಿ ನರಸಿಂಹ ತಾರಕ ಹೋಮ, ಇಡೀ ದಿನ ವಿವಿಧ ಪೂಜಾ ಕೈಂಕರ್ಯಗಳು ನೆರವೇರಲಿವೆ.
೨೨ ರಂದು ಕಲ್ಯಾಣೋತ್ಸವ, ಶ್ರೀ ಅಶ್ವತ್ಥ ಕುಬೇರ ಲಕ್ಷ್ಮೀನರಸಿಂಹ ದೇವರಿಗೆ ಮಹಾ ಅಭಿಷೇಕ ಹಾಗೂ ನಾಣ್ಯ ಅಭಿಷೇಕ, ೨೩ ರಂದು ನರಸಿಂಹ ಸ್ಥಂಭಕ್ಕೆ ಮಹಾಭಿಷೇಕ ನಡೆಯಲಿದೆ ಎಂದು ದೇವಸ್ಥಾನದ ಟ್ರಸ್ಟಿ ಅರುಣ್ ಚಿಂತೋಪಂತ್ ಡಿ. ರಮಾಬಾಯಿ, ಡಾ.ಎಸ್.ಆರ್.ವಾದಿರಾಜಾಚಾರ್, ಅರ್ಚಕರಾದ ನರಹರಿ ಆಚಾರ್ ತಿಳಿಸಿದ್ದಾರೆ.