ಅನೈತಿಕ ಸಂಬಂಧ: ಯುವಕನ ಕೊಲೆ-ನಾಲ್ವರ ಬಂಧನ
ಕಲಬುರಗಿ,ಮೇ.13-ಅಫಜಲಪುರ ತಾಲ್ಲೂಕಿನ ಮಣೂರ ಗ್ರಾಮದಲ್ಲಿ ಈಚೆಗೆ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ನಡೆದ ರಮಜಾನ್ ತಂದೆ ಮೈಹಿಬೂಬ್ ತಾರಾ (20) ಎಂಬ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಣೂರ ಗ್ರಾಮದ ಸಂತೋಷ ತಂದೆ ದೇವಿಂದ್ರಪ್ಪ ಕ್ಷತ್ರಿ (35), ಇಂಡಿ ತಾಲ್ಲೂಕಿನ ಬರಗುಡಿ ಗ್ರಾಮದ ರಾಕೇಶ್ ತಂದೆ ಪರಶುರಾಮ ಕ್ಷತ್ರಿ (21), ಪ್ರದೀಪ ತಂದೆ ಕರಣ್ ಕ್ಷತ್ರಿ (22) ಮತ್ತು ಅಖರಖೇಡ ಗ್ರಾಮದ ಆಕಾಶ್ ತಂದೆ ಮಲ್ಲಪ್ಪ ಕ್ಷತ್ರಿ (21) ಎಂಬುವವರನ್ನು ಬಂಧಿಸಲಾಗಿದೆ.
ಮಣೂರ ಗ್ರಾಮದ ರಮಜಾನ್ ತಾರಾ ಮೇ.11 ರಂದು ಸಾಯಂಕಾಲ 4.30ರ ಸುಮಾರಿಗೆ ಬೈಕ್ ಮೇಲೆ ಉಪ್ಪಾರಹಟ್ಟಿ ರಸ್ತೆಯಲ್ಲಿರುವ ಹೊಲಕ್ಕೆ ಹೋಗಿ ದನಗಳಿಗೆ ನೀರು ಕುಡಿಸಿ ಮರಳಿ ಗ್ರಾಮಕ್ಕೆ ಬರುತ್ತಿದ್ದಾಗ ಮಾರ್ಗ ಮಧ್ಯೆ ಆತನನ್ನು ತಡೆದು ಚಾಕುವಿನಿಂದ ಇರಿದು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು.
ಈ ಸಂಬಂಧ ಮೃತನ ತಂದೆ ಮೈಹಿಬೂಬ್ ತಾರಾ ಅವರು ಅಫಜಲಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ಎಸ್‍ಪಿ ಅಕ್ಷಯ್ ಹಾಕೆ, ಹೆಚ್ಚುವರಿ ಎಸ್‍ಪಿ ಎನ್.ಶ್ರೀನಿಧಿ, ಆಳಂದ ಡಿಎಸ್‍ಪಿ ಮಹ್ಮದ್ ಶರೀಫ್ ರಾವುತರ್ ಅವರ ಮಾರ್ಗದರ್ಶನದಲ್ಲಿ ಅಫಜಲಪುರ ಸಿಪಿಐ ಚನ್ನಯ್ಯ ಎಸ್.ಹಿರೇಮಠ, ಪಿಎಸ್‍ಐ ಮೈಹಿಬೂಬ್ ಅಲಿ, ದೇವಲಗಾಣಗಾಪುರ ಪಿಎಸ್‍ಐ ಪರಶುರಾಮ, ಸಿಬ್ಬಂದಿಗಳಾದ ಸಂತೋಷ ಮಲಘಾಣ, ಶಿವಪ್ಪ ಬ್ಯಾಡಗಿಹಾಳ, ಆನಂದ ಹಿರೇಮಠ, ಯಲ್ಲಾಲಿಂಗ ಭಜಂತ್ರಿ, ಕಾಶಿನಾಥ, ಸೋಪಾನ, ಚಿದಾನಂದ ಬಿರಾದಾರ, ನಿಂಗಣ್ಣ ಕಣ್ಣಿ, ವಿಶ್ವನಾಥ ಅವರನ್ನೊಳಗೊಂಡ ಎರಡ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡಗಳು ತನಿಖೆ ನಡೆಸಿ ಕೊಲೆಯಾದ 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ.