ವಿಜಯನಗರದಲ್ಲಿ ಶಾಂತಿಯುತ ಮತದಾನ
ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಮೇ7: ವಿಜಯನಗರ ಜಿಲ್ಲೆಯ 10 ಮತಕೇಂದ್ರಗಳಲ್ಲಿ ತಾಂತ್ರಿಕ ತೊಂದರೆಯಿಂದ ಮತದಾನ ವಿಳಂಬ ಹೊರತು ಪಡಿಸಿ ಎಲ್ಲಡೆಯೂ ಶಾಂತಿಯುತ ಮತದಾನ ಆರಂಭವಾಗಿದೆ.
ದಾವಣಗೇರಿ ಲೋಕಸಭಾ ವ್ಯಾಪ್ತಿಗೆ ಒಳಪಡುವ ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರವೂ ಸೇರಿದಂತೆ ಬಳ್ಳಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ವಿಜಯನಗರದ ಎಲ್ಲಾ ಮತಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆಯ ಮತಕೇಂದ್ರಗಳಲ್ಲಿ ಶಾಂತಿಯುತ ಮತದಾನ ಆರಂಭವಾಗಿದೆ. ¨ಳ್ಳಾರಿ ಲೋಕಸಭಾ ಚುನಾವಣೆಯ ವಿಜಯನಗರ ಜಿಲ್ಲೆಯಲ್ಲಿ ಎಲ್ಲಾ ಮತಕೇಂದ್ರಗಳ ಪೈಕಿ ಹೊಸಪೇಟೆಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಒಳಗೊಂಡಂತೆ ಒಟ್ಟು 10 ಮತಕ್ಷೇತ್ರಗಳಲ್ಲಿ ಮತ ಯಂತ್ರದ ತಾಂತ್ರಿಕ ದೋಷದ ನಡುವೆಯೂ ಉಳಿದೆಲ್ಲಾ ಕೇಂದ್ರಗಳಲ್ಲಿಯೂ ಮತದಾನ ಶಾಂತಿಯುತವಾಗಿ ಆರಂಭವಾಗಿದೆ.
ವಿಷಯ ಅರಿಯುತ್ತಲೇ ಜಿಲ್ಲಾಡಳಿತ ತಕ್ಷಣವೇ ಕಾರ್ಯಪ್ರವೃತರಾಗಿ ಮತಯಂತ್ರಗಳ ತಾಂತ್ರಿಕ ದೋಷ ಸರಿಪಡಿಸುವಲ್ಲಿ ಯಶಸ್ವಿ ಆಯಿತಾದರೂ ಅರ್ಧ ಗಂಟೆ ವಿಳಂಭವಾಗಿದು ಹೊರತು ಪಡಿಸಿ ಎಲ್ಲಡೆ ಶಾಂತಿಯುತ ಮತದಾನ ಆರಂಭವಾಗಿದೆ.
ಹಕ್ಕು ಚಲಾವಣೆ:
ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಅನೇಕ ಗಣ್ಯರು ಸೇರಿದಂತೆ ವಿಜಯನಗರ ಶಾಸಕ ಎಚ್.ಆರ್.ಗವಿಯಪ್ಪ ಪತ್ನಿ ಸಮೇತ ಪುಣ್ಯಮೂರ್ತಿ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದರು. ಮಾಜಿ ಶಾಸಕ ಆನಂದಸಿಂಗ್, ತಾಯಿ, ಪತ್ನಿ ಹಾಗೂ ಪುತ್ರ ಸಿದಾರ್ಥಸಿಂಗ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ತಮ್ಮ ಮತದಾನವನ್ನು ಮಾಡಿದರು.
ಬೆಳಗಿನ ಅವಧಿಯಲ್ಲಿ ವಿವಿಧ ಮತಗಟ್ಟೆಗಳ ಅಂಗಳದಲ್ಲಿ ಮತದಾರರು ಸಾಲುಸಾಲಾಗಿ ನಿಂತು ಮತದಾನ ಮಾಡುತ್ತಿವುದು ಕಂಡು ಬಂದಿತು. ಯುವ ಮತದಾರರು, ವಯೋವೃದ್ಧರು ಸೇರಿದಂತೆ ಎಲ್ಲಾ ವಯೋಮಾನದವರು, ವಿಕಲಚೇತನರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದು ಕಂಡು ಬಂದಿತು. ಸಾಂಪ್ರದಾಯಿ ಮತಗಟ್ಟೆಗಳು, ಸಖಿ ಮತಗಟ್ಟೆ, ವಿಕಲಚೇತನ ಸ್ನೇಹಿ ಮತಗಟ್ಟೆಗಳಲ್ಲಿ ಮತದಾನದ ಸಂಭ್ರಮ ಕಂಡು ಬಂದಿತು.
ಜಿಲ್ಲಾಧಿಕಾರಿಗಳಿಂದ ಮತದಾನ: ವಿಜಯನಗರ ಜಿಲ್ಲೆಯ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಮೇ 7ರಂದು ಹೊಸಪೇಟೆ ನಗರದ ಸಂಡೂರ ರಸ್ತೆಯಲ್ಲಿನ ಕ್ಷೇತ್ರ ಶಿಕ್ಷಾಧಿಕಾರಿಗಳ ಕಚೇರಿ ಆವರಣಕ್ಕೆ ದಂಪತಿ ಸಮೇತ ಆಗಮಿಸಿ ಮತ ಚಲಾಯಿಸಿದರು. ಕ್ಷೇತ್ರ ಶಿಕ್ಷಾಧಿಕಾರಿಗಳ ಕಚೇರಿ ಆವರಣಕ್ಕೆ ಮತ ಚಲಾಯಿಸಲು ಆಗಮಿಸಿದಾಗ ಜಿಲ್ಲಾಧಿಕಾರಿಗಳು ವಯೋವೃದ್ಧೆಯೊಂದಿಗೆ ಆತ್ಮೀಯವಾಗಿ ಮಾತನಾಡಿ ಮತಗಟ್ಟೆಗೆ ಕಳುಹಿಸಿದರು.
ಜಿಪಂ ಸಿಇಓ ಭೇಟಿ: ವಿಜಯನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಸದಾಶಿವ ಪ್ರಭು ಅವರು ಮೇ 7ರಂದು ವಿಜಯನಗರ ವಿಧಾನಸಭಾ ಕ್ಷೇತ್ರದ ಮಲಪನಗುಡಿಯ ಎಲ್ ಭರಮಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ 229ರ ಸಖಿ ಮತಗಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಹತ್ತಿರದಲ್ಲಿನ 228, 229, 230, 231 ಹಾಗೂ 232 ಮತಗಟ್ಟೆಗಳಿಗೆ ಸಹ ಭೇಟಿ ನೀಡಿ ಪರಿಶೀಲಿಸಿದರು. ಮತಗಟ್ಟೆಗೆ ಮತದಾನ ಮಾಡಲು ಆಗಮಿಸಿದ ವಯೋವೃದ್ಧೆಯೊಂದಿಗೆ ಸಿಇಓ ಅವರು ಆತ್ಮೀಯವಾಗಿ ಮಾತನಾಡಿ ಮತಗಟ್ಟೆಗೆ ಕಳುಹಿಸಿದರು.
ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲಿ ಮತದಾನ ಪ್ರಕ್ರಿಯೆಯು ಶಾಂತಯುತವಾಗಿ ಆರಂಭವಾಯಿತು. ಹರಪನಹಳ್ಳಿಯ ಉಪ್ಪಾರಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ವಿಶೇಷಚೇತನ ಮತದಾರ ಕೋಟೆಪ್ಪ ಅವರು ಬೆಳಗ್ಗೆಯೇ ಮತಹಕ್ಕನ್ನು ಚಲಾಯಿಸಿದರು. ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ವಿಶೇಷಚೇತನರು ವಿವಿಧ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಿದರು. ಕೂಡ್ಲಿಗಿ ಪಟ್ಟಣದ ರಾಜೀವ್‌ಗಾಂಧಿ ನಗರದಲ್ಲಿರುವ ಸಖಿ ಮತಗಟ್ಟೆಯಲ್ಲಿ ಶಿಲ್ಪ ಮತ್ತು ಷಮಿನ ಭಾನು ಅವರು ಪ್ರಥಮ ಬಾರಿಗೆ ಮತ ಚಲಾಯಿಸಿ ಅನಿಸಿಕೆ ವ್ಯಕ್ತಪಡಿಸಿದರು.
ಸಸಿ ನೀಡಿ ಸ್ವಾಗತ: ಹಡಗಲಿ ತಾಲೂಕಿನ ಇಟ್ಟಗಿ ಗ್ರಾಮ ಪಂಚಾಯಿತಿಯ ಮತಗಟ್ಟೆ ಸಂಖ್ಯೆ 162ರ ಸಖಿ ಮತಗಟ್ಟೆಗೆ ಮತದಾನ ಮಾಡಲು ಬರುತ್ತಿದ್ದ 100 ಮತದಾರರಿಗೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಉಮೇಶ ಎಂ ಅವರು ಸಸಿ ನೀಡಿ ಪ್ರೋತ್ಸಾಹಿಸಿದರು. ಕರ್ತವ್ಯ ನಿರತ ಸಿಬ್ಬಂದಿ ಜೊತೆಗೆ ಚರ್ಚಿಸಿದರು. ಪಿಡಿಓ ಉಮೇಶ್ ಜಾಗೀರ್ ಹಾಗೂ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.
ದಬೈನಿಂದ ಆಗಮಿಸಿ ಮತದಾನ: ದುಬೈನಿಂದ ಆಗಮಿಸಿದ ಐಮನ್ ಸಫೂರ ಎಂಬುವರು ಹರಪನಹಳ್ಳಿ ಪಟ್ಟಣದ ಉಪ್ಪಾರಗೇರಿ ಮತಗಟ್ಟೆ 87ರಲ್ಲಿ ಮತ ಹಕ್ಕು ಚಲಾಯಿಸಿ ಸಂಭ್ರಮಿಸಿದರು. 11 ಗಂಟೆಯ ವೇಳೆಗೆ ಅಂದಾಜು 11.83% ಮತದಾನವಾಗಿತು.