ಅಭಿನಂದನಾ ಸಮಾರಂಭ ಆಚರಣೆ
ಸಂಜೆವಾಣಿ ನ್ಯೂಸ್
ಮೈಸೂರು: ಮೇ.06:- ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನು (ಮೇ ದಿನ) ಮೈಸೂರಿನ ಯಾದವಗಿರಿಯಲ್ಲಿರುವ ಚಾಮುಂಡಿ ಕ್ಲಬ್‍ನಲ್ಲಿ ಅದ್ದೂರಿ ಅಭಿನಂದನಾ ಸಮಾರಂಭವನ್ನು ಆಯೋಜಿಸುವುದರೊಂದಿಗೆ ಆಚರಿಸಿತು. ಈ ಕಾರ್ಯಕ್ರಮದಲ್ಲಿ ಸುರಕ್ಷತಾ ಸಂಬಂಧಿತ ವಿಭಾಗಗಳಲ್ಲಿನ ಟ್ರ್ಯಾಕ್ (ಹಳಿ) ನಿರ್ವಾಹಕರು, ಸಂವಹನ ನಿರ್ವಾಹಕರು, ಪಾಯಿಂಟ್ಸ್ ಮನ್, ಪಾಯಿಂಟ್ಸ್ ವುಮನ್, ಲೋಕೋ ಪೈಲಟ್‍ಗಳು, ರೈಲು ವ್ಯವಸ್ಥಾಪಕರು ಮತ್ತು ವಿವಿಧ ವಿಭಾಗಗಳ ಇಂಜಿನಿಯರ್‍ಗಳಂತಹ 20 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶ್ಲಾಘನೀಯ ಸೇವೆಯನ್ನು ಸಲ್ಲಿಸಿರುವ 38 ಸಮರ್ಪಿತ ಸಿಬ್ಬಂದಿಗಳನ್ನು ಗೌರವಿಸಲಾಯಿತು.
ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಮತ್ತು ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆಯ ಅಧ್ಯಕ್ಷರು ಆದ ಶಿಲ್ಪಿ ಅಗರ್ವಾಲ್ ರವರು ಉಪಸ್ಥಿತರಿದ್ದರು. ಅವರು ತಮ್ಮ ಭಾಷಣದಲ್ಲಿ, ರೈಲ್ವೆ ಸಂಘಟನೆಯ ಯಶಸ್ಸಿನಲ್ಲಿ ಕಾರ್ಮಿಕರ ಪ್ರಮುಖ ಪಾತ್ರದ ಬಗ್ಗೆ ತಿಳಿಸಿ ಹೇಳಿದರು. ಆಡಳಿತ ವರ್ಗ ಮತ್ತು ಕಾರ್ಮಿಕರ ನಡುವೆ ಸೌಹಾರ್ದಯುತ ಮತ್ತು ಸಹಯೋಗದ ವಾತಾವರಣವನ್ನು ಬೆಳೆಸುವ ಪ್ರಾಮುಖ್ಯತೆ ಬಗ್ಗೆ ಅವರು ಒತ್ತಿಹೇಳಿದರು ಹಾಗು ಇದು ಅಭಿವೃದ್ಧಿ ಹೊಂದುತ್ತಿರುವ ಎಲ್ಲಾ ಸಂಸ್ಥೆಗಳ ಮೂಲಾಧಾರವೆಂದು ವಿವರಿಸಿದರು.
ಆಡಳಿತ ವರ್ಗ ಮತ್ತು ಕಾರ್ಮಿಕರ ನಡುವಿನ ಸಹಜೀವನದ ಸಂಬಂಧವನ್ನು ವಿವರಿಸುತ್ತ, ಶಿಲ್ಪಿ ಅಗರ್ವಾಲ್ ರವರು ಪರಸ್ಪರ ಗೌರವ, ವಿಶ್ವಾಸ ಮತ್ತು ಸಹಕಾರಗಳು ಪರಿವರ್ತಕ ಶಕ್ತಿಯನ್ನು ನೀಡುತ್ತವೆ ಎಂದು ಹೇಳಿದರು. ಅವರು ಮೈಸೂರು ವಿಭಾಗದ ಸಿಬ್ಬಂದಿ ಪ್ರದರ್ಶಿಸಿದ ಸಮರ್ಪಣೆ ಮತ್ತು ಬದ್ಧತೆಯನ್ನು ಶ್ಲಾಘಿಸಿ, ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ಸಕಾರಾತ್ಮಕ ಕೆಲಸದ ಸಂಸ್ಕೃತಿಯನ್ನು ಬೆಳೆಸಲು ಅವರು ನೀಡುವ ಪ್ರಯತ್ನಗಳೇ ಕಾರಣವಾಗಿದೆ ಎಂದು ಹೇಳಿದರು.
ಇದಲ್ಲದೆ, ಶಿಲ್ಪಿ ಅಗರ್ವಾಲ್ ರವರು ರಾಷ್ಟ್ರೀಯ ಪ್ರಗತಿಯನ್ನು ಮುನ್ನಡೆಸುವಲ್ಲಿ ಸಿಬ್ಬಂದಿಗಳ ಪ್ರೇರಿತ, ಬೆಂಬಲಿತ ಮತ್ತು ಸಶಕ್ತ ಕಾರ್ಯಪಡೆಯ ಮಹತ್ವವನ್ನು ಪುನರುಚ್ಚರಿಸಿದರು. ವಿಭಾಗದೊಳಗೆ ವಿಶ್ವಾಸ ಮತ್ತು ಸೌಹಾರ್ದತೆಯ ಬಾಂಧವ್ಯವನ್ನು ಪೆÇೀಷಿಸಲು ಮತ್ತು ಸಹಕಾರ ಹಾಗು ಏಕತೆಯ ಮನೋಭಾವವನ್ನು ಎತ್ತಿಹಿಡಿಯುವಂತೆ ಪ್ರತಿಜ್ಞೆ ಮಾಡಲು ಅವರು ಸಂಬಂದಿಸಿದ ಎಲ್ಲರಿಗೂ ಕರೆ ನೀಡಿದರು.ಸಿಬ್ಬಂದಿಗಳ ಅಚಲವಾದ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಶ್ರೇಷ್ಠತೆಯ ನಿರಂತರ ಅನ್ವೇಷಣೆಗಾಗಿ ಇಡೀ ತಂಡಕ್ಕೆ ಕೃತಜ್ಞತೆ ಸಲ್ಲಿಸುವುದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಶ್ರೀಮತಿ ಶಿಲ್ಪಿ ಅಗರ್ವಾಲ್ ರವರು ಅಂತರಾಷ್ಟ್ರೀಯ ಕಾರ್ಮಿಕರ ದಿನದ ಸಂದರ್ಭದಲ್ಲಿ ಎಲ್ಲರಿಗೂ ಆತ್ಮೀಯ ಶುಭಾಶಯಗಳನ್ನು ತಿಳಿಸಿದರು ಹಾಗು ಪ್ರತಿಯೊಬ್ಬರೂ ಶ್ರೇಷ್ಠತೆಗಾಗಿ ಶ್ರಮಿಸಿ ಯಶಸ್ಸಿನ ಮಾನದಂಡವನ್ನು ಹೊಸ ಎತ್ತರಕ್ಕೆ ಏರಿಸಲು ಹೇಳಿದರು.
ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ವಿನಾಯಕ ನಾಯಕ್, ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿಗಳಾದ ವಿಷ್ಣುಗೌಡ, ಗತಿ ಶಕ್ತಿ ಘಟಕದ ಮುಖ್ಯ ಯೋಜನಾ ವ್ಯವಸ್ಥಾಪಕರಾದ ಆನಂದ ಭಾರತಿ, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿಯಾದ ಶ್ಲೋಹಿತೇಶ್ವರ ಮತ್ತು ಇತರ ಶಾಖೆಗಳ ಹಿರಿಯ ಅಧಿಕಾರಿಗಳು ಹಾಗು ಸದಸ್ಯರು ಮತ್ತು ನೈಋತ್ಯ ರೈಲ್ವೆಯ ಮಹಿಳಾ ಕಲ್ಯಾಣ ಸಂಸ್ಥೆಯ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.