ಲೋಪವಾಗದಂತೆ ಕರ್ತವ್ಯ ನಿರ್ವಹಿಸಲು ಸೂಚನೆ
ನವಲಗುಂದ,ಮೇ.2: ಚುನಾವಣಾ ಕಾರ್ಯ ಯಶಸ್ವಿಯಾಗಿ ಪೂರ್ಣಗೊಳ್ಳುವಲ್ಲಿ ಪಿಆರ್ ಓ ಮತ್ತು ಅವರ ತಂಡಗಳ ಕಾರ್ಯ ಮುಖ್ಯವಾಗಿದ್ದು, ತರಬೇತಿಯಲ್ಲಿ ಇವಿಎಂ ಮತ್ತು ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಸರಿಯಾದ ತಿಳುವಳಿಕೆ ಪಡೆದು, ಯಾವುದೇ ರೀತಿಯಲ್ಲಿ ಚುನಾವಣಾ ಕರ್ತವ್ಯ ಲೋಪವಾಗದಂತೆ ಕರ್ತವ್ಯ ನಿರ್ವಹಿಸಬೇಕೆಂದು ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಬುದುವಾರ ಪಟ್ಟಣದ ಶಂಕರ ಮಹಾವಿದ್ಯಾಲಯದಲ್ಲಿನ ಚುನಾವಣೆ ತರಬೇತಿ ಕೇಂದ್ರದಲ್ಲಿ ನಡೆದ ಪಿಆರ್ ಓ, ಎಪಿಆರ್ ಓ ಗಳಿಗೆ 2ನೇ ಹಂತದ ತರಬೇತಿಯಲ್ಲಿ ಮಾತನಾಡಿದ ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಮತದಾನ ದಿನ ಬಹು ಮುಖ್ಯವಾಗಿದೆ. ಅಂದು ಮತಗಟ್ಟೆ ಅಧ್ಯಕ್ಷಾಧಿಕಾರಿಗಳು ಮತ್ತು ಅವರ ತಂಡ ಮೈ ಎಲ್ಲಾ ಕಣ್ಣಾಗಿ ಕೆಲಸ ಮಾಡಬೇಕು. ಚುನಾವಣಾ ಆಯೋಗ ನೀಡಿರುವ ಎಲ್ಲ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂದರು.
ಮತದಾನ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ಚುನಾವಣಾ ಸಿಬ್ಬಂದಿಗಳಿಗೆ ಜಿಪಿಎಸ್ ಇರುವ ವಾಹನ ನೀಡಿರುತ್ತದೆ. ಗೊತ್ತುಪಡಿಸಿದ ವಾಹನದಲ್ಲಿ ಮತ್ತು ನಿಗದಿತ ಮಾರ್ಗದಲ್ಲಿ ಸಂಚರಿಸಬೇಕು. ಪೆÇಲೀಸ್ ಬಂದೊಬಸ್ತ ಇರುತ್ತದೆ ಎಂದು ಅವರು ಹೇಳಿದರು.
ಮತದಾನದ ಹಿಂದಿನ ದಿನ ಮತ್ತು ಮತದಾನ ಮುಗಿದ ನಂತರ ಮತಗಟ್ಟೆ ಸಿಬ್ಬಂದಿಗಳು ತಮಗೆ ಗೋತ್ತುಪಡಿಸಿದ ವಾಹನದಲ್ಲಿ ತೆರಳಬೇಕು. ಬೇರೆ ವಾಹನಗಳಲ್ಲಿ ತೆರಳು ಅವಕಾಶವಿಲ್ಲ. ಚುನಾವಣೆ ದಿನ ಯಾವುದೇ ಅಹಿತಕರ ಘಟನೆ ಜರುಗದಂತೆ ಮುನ್ನೆಚ್ಚರಿಕೆ ಇರಲಿ. ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ಕರ್ತವ್ಯ ನಿರ್ವಹಿಸಿ ಎಂದರು.
ಮತಗಟ್ಟೆ ವ್ಯಾಪ್ತಿಯಲ್ಲಿ ಅನುಮತಿಸಿದ ವ್ಯಕ್ತಿಗಳನ್ನು ಹೊರತುಪಡಿಸಿ, ಬೇರೆಯವರಿಗೆ ಅವಕಾಶ ನೀಡಬೇಡಿ. ನಿಮಗೆ ಯಾವುದೇ ರೀತಿಯ ತಾಂತ್ರಿಕ ಅಥವಾ ಬೇರೆ ರೀತಿಯ ಸಮಸ್ಯೆಗಳು ಕಂಡುಬಂದಲ್ಲಿ ತಕ್ಷಣ ಸೆಕ್ಟರ್ ಅಧಿಕಾರಿಗೆ ಮಾಹಿತಿ ನೀಡಿ, ಸರಿಪಡಿಸಿಕೊಳ್ಳಿ ಎಂದರು.
ಮತದಾನಕ್ಕೆ ಆಗಮಿಸುವ ಮತದಾರರಿಗೆ ಕುಡಿಯುವ ನೀರು, ನೆರಳು, ಶೌಚಾಲಯ, ಸರತಿ ಸಾಲು ಎಲ್ಲವೂ ವ್ಯವಸ್ಥಿತವಾಗಿ ಲಭಿಸುವಂತೆ ನೋಡಿಕೊಳ್ಳಿ. ನಿಮ್ಮ ಸಹಾಯಕ್ಜೆ ಬಿಎಲ್‍ಓ, ಆಶಾ, ಗ್ರಾಮಲೆಕ್ಜಾಧಿಕಾರಿ ಸೇರಿದಂತೆ ವಿವಿಧ ಸಿಬ್ಬಂದಿಗಳು ಇರುತ್ತಾರೆ. ಮತಗಟ್ಟೆಗೆ ಬರುವ ಮತದಾರರನ್ನು ಮನೆಗೆ ಬರುವ ಅತಿಥಿಯಂತೆ ಆಹ್ವಾನಿಸಿ, ಆಧರಿಸಿ. ಮತದಾನವು ಶಾಂತವಾಗಿ, ಮುಕ್ತ ಮತ್ತು ಯಾವುದೇ ಪಕ್ಷಪಾತವಿಲ್ಲದೆ ಸುಸೂತ್ರವಾಗಿ ನಡೆಯುವಂತೆ ಜಾಗೃತಿವಹಿಸಬೇಕೆಂದು ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಮತದಾನ ಹೆಚ್ಚಳಕ್ಕೆ ಚುನಾವಣಾ ಆಯೋಗದ ನಿರ್ದೇಶನದಂತೆ ಸ್ವಿಪ್ ಕಾರ್ಯಚಟುವಟಿಕೆಗಳನ್ನು ಜಿಲ್ಲೆಯಾದ್ಯಂತ ನಿರಂತರವಾಗಿ ಹಮ್ಮಿಕೊಳ್ಳಲಾಗಿದೆ. ಮತದಾನ ಜಾಗೃತಿಯಲ್ಲಿ ಸಾರ್ವಜನಿಕರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಜಿಲ್ಲಾಡಳಿತವು ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ಪ್ರಮಾಣವನ್ನು ಶೇ.80 ಕ್ಕಿಂತ ಹೆಚ್ಚು ಮಾಡುವ ಗುರಿ ಹೊಂದಿದೆ. ಮತಗಟ್ಟೆಗೆ ಬರುವ ಗರ್ಭೀಣಿಯರು, ಹಿರಿಯ ನಾಗರಿಕರು, ವಿಶೇಷಚೇತನರಿಗೆ ಆದ್ಯತೆ ನೀಡಿ, ಬೇಗ ಮತಚಲಾಯಿಸಲು ಅವಕಾಶ ಮಾಡಿ. ಸರತಿ ಸಾಲು ದೊಡ್ಡದಿದ್ದಲ್ಲಿ ಅವರಿಗೆ ಕುಳಿತುಕೊಳ್ಳಲು ಆಸನ, ವಿಶ್ರಾಂತಿ ಕೊಠಡಿ ಮಾಹಿತಿ ನೀಡಬೇಕು ಎಂದು ಅವರು ತಿಳಿಸಿದರು.
ನಂತರ ಅವರು ಅಂಚೆ ಮತದಾನ ಕೇಂದ್ರಕ್ಜೆ ಭೇಟಿ ನೀಡಿ, ಪರಿಶೀಲಿಸಿದರು.
ಈ ಸಂದರ್ಭದಲ್ಲಿ ನವಲಗುಂದ ಸಹಾಯಕ ಚುನಾವಣಾಧಿಕಾರಿ ದೇವರಾಜ್ ಆರ್, ತರಬೇತಿ ನೋಡಲ್ ಅಧಿಕಾರಿ ಚನ್ನಪ್ಪ ಎ., ತಹಸಿಲ್ದಾರರಾದ ಮಲ್ಲಿಕಾರ್ಜುನ ಹೆಗ್ಗನ್ನವರ, ರಾಜು ಮಾವರಕರ ಸೇರಿದಂತೆ ವಿವಿಧ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು ಉಪಸ್ಥಿತರಿದ್ದರು.