ಮತಗಟ್ಟೆ ಕೇಂದ್ರಗಳಲ್ಲಿ ಬಿಸಿಗಾಳಿ ಪರಿಣಾಮ ತಗ್ಗಿಸಲು ಕ್ರಮ : ಟಿ. ಭೂಬಾಲನ್
ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.2 :ಬಿಸಿಲಿನ ತಾಪಕ್ಕೆ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗದಿರಲೆಂದು ಆಯ್ದ ಮತಗಟ್ಟೆ ಕೇಂದ್ರಗಳಲ್ಲಿ ಶೆಡ್ ಅಥವಾ ಪರದೆಯ ನೆರಳಿನ ವ್ಯವಸ್ಥೆ ಹಾಗೂ ನಿರೀಕ್ಷಣಾ ಕೊಠಡಿ (ವೇಟಿಂಗ್ ರೂಮ್) ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯಾಗಿರುವ ಟಿ. ಭೂಬಾಲನ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚುನಾವಣಾ ವಿಷಯಗಳಾದ ಮಸ್ಟ್‍ರಿಂಗ್, ಡಿಮಸ್ಟ್‍ರಿಂಗ್ ಹಾಗೂ ಮತದಾನ ದಿನದ ಪೂರ್ವಭಾವಿ ಸಿಧ್ಧತೆ ಕುರಿತು ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆ ನಡೆಸಿ ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗವು ನೀಡಿರುವ ಮಾರ್ಗಸೂಚಿಗಳ ಅನ್ವಯ ಮತಗಟ್ಟೆ ಕೇಂದ್ರಗಳಲ್ಲಿ ಫ್ಯಾನ್, ನೀರು, ನೆರಳು, ಕೂಡಲು ಆಸನಗಳ ವ್ಯವಸ್ಥೆ ಆದ್ಯತೆ ಮೇರೆಗೆ ಕಲ್ಪಿಸುವ ಕಾರ್ಯವಾಗಬೇಕು ಎಂದರು.
ಪ್ರತಿ ಮತಗಟ್ಟೆಯಲ್ಲಿ ಕೂಡಾ ಪ್ರಥಮ ಚಿಕಿತ್ಸೆಯ ಪೆಟ್ಟಿಗೆ, ವೈದ್ಯರು ಅಥವಾ ವೈದ್ಯಕೀಯ ಸಿಬ್ಬಂದಿ ಮತ್ತು ಒಆರ್‍ಎಸ್ ಪಟ್ಟಣ ಇರುವ ವ್ಯವಸ್ಥೆ ಆಗಬೇಕು. ತುರ್ತು ಸನ್ನಿವೇಶದ ಕರೆ ಬಂದ ತಕ್ಷಣ ಅ್ಯಂಬುಲೆನ್ಸ್ ತಲುಪುವಂತಾಗಬೇಕು. ಹಿರಿಯ ನಾಗರಿಕರು ಮತ್ತು ವಿಶೇಷ ಚೇತನ ಮತದಾರರಿಗೆ ಗಾಲಿ ಕುರ್ಚಿ ನೀಡುವ ವ್ಯವಸ್ಥೆ ಇರತಕ್ಕದ್ದು, ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿ ಇರುವದರಿಂದ ಶಿಶುಪಾಲನಾ ಕೇಂದ್ರ ತೆರೆಯುವ ವ್ಯವಸ್ಥೆ ಕೂಡಾ ಆಗಬೇಕು. ಒಟ್ಟಾರೆ ಜಿಲ್ಲೆಯ ಯಾವ ಮತಗಟ್ಟೆ ಕೇಂದ್ರದ ಕುರಿತಂತೆ ಚುನಾವಣಾ ಆಯೋಗದಿಂದ ದೂರು ಬರದಂತೆ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಮತಗಟ್ಟೆಯ ಮಟ್ಟದ ಅಧಿಕಾರಿಗಳು ತಮ್ಮ ಮತಗಟ್ಟೆ ವ್ಯಾಪ್ತಿಯ ಮತದಾರರ ಮನೆ ಮನೆಗೆ ಹೋಗಿ ಮತದಾರನ ವಿವರ ಇರುವ ವೋಟರ್ ಸ್ಲಿಪ್ ವಿತರಿಸುವ ಕಾರ್ಯ ನಾಳೆ ಸಂಜೆಯೊಳಗಾಗಿಯೇ ಮುಕ್ತಾಯಗೊಳ್ಳಬೇಕು. ಮತಗಟ್ಟೆ ಅಧಿಕಾರಿಗಳು ಮತದಾರರ ಮನೆಗೆ ಭೇಟಿ ನೀಡಿದಾಗ ಲಭ್ಯವಾಗದಿದ್ದಲ್ಲಿ ಮತದಾರನ ಪಕ್ಕದ ಮನೆಯಲ್ಲಿ ಮಾಹಿತಿ ನೀಡಿ ಬರಬೇಕು. ಮರುದಿನ ಮತ್ತೇ ಅದೆ ಮನೆಗೆ ತೆರಳಿ ಮತದಾನದ ಮಾಹಿತಿಯುಳ್ಳ ವೋಟರ್ ಸ್ಲಿಪ್ ವಿತರಿಸುವ ಕಾರ್ಯ ಆಗಬೇಕು. ಪರ ಊರು, ಪರ ಸ್ಥಳಗಳಿಗೆ ತೆರಳಿರುವ ಮತ್ತು ಇತರ ಕಾರಣಗಳಿಂದ ಬಿಎಲ್‍ಒಗಳ ಸಂಪರ್ಕಕ್ಕೆ ಸಿಗದಿರುವ ಮತದಾರರಿಗೆ ಮತದಾನದ ದಿನದಂದು ಮತಗಟ್ಟೆ ವ್ಯಾಪ್ತಿಯ ನೂರು ಮೀಟರ್ ಒಳಗಡೆ ವೋಟರ್ ಹೆಲ್ಪಡೆಸ್ಕ್ ತೆರೆದು ಮತದಾರರಿಗೆ ವೋಟರ್ ಸ್ಲಿಪ್ ಕೋಡಬೇಕು. ಯಾವುದೇ ಕಾರಣಕ್ಕೂ ಮತದಾರರು ಮತದಾನದಿಂದ ವಂಚಿತರಾಗಬಾರದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಆಧಿಕಾರಿ ರಿಶಿ ಆನಂದ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಆರೋಗ್ಯ ಅಧಿಕಾರಿ ಬಸವರಾಜ ಹುಬ್ಬಳಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿ ಪ್ರೀತಮ್ ನಸಲಾಪುರ ಸೇರಿದಂತೆ ಇತರರು ಇದ್ದರು.