ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಿ : ಡಿಸಿ ಟಿ. ಭೂಬಾಲನ್
ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.2: ಜಿಲ್ಲೆಯಲ್ಲಿ ಉಲ್ಬಣಿಸಿರುವ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸೂಕ್ತ ಮಾರ್ಗೋಪಾಯಗಳನ್ನು ಕಂಡುಕೊಂಡು, ಸಾರ್ವಜನಿಕರಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕುಡಿಯುವ ನೀರಿನ ಪರಿಸ್ಥಿತಿ ನಿರ್ವಹಣೆ ಕುರಿತು ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿ ಕೋಶ, ವಿಜಯಪುರ ನಗರ ನೀರು ಸರಬರಾಜು ಮಂಡಳಿ, ಸಣ್ಣ ನೀರಾವರಿ ಇಲಾಖೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಭೂತನಾಳ ಕೆರೆಯಿಂದ ಪ್ರತಿದಿನ 19.08 ಎಂ ಎಲ್ ನೀರು ಸರಬರಾಜು ಮಾಡುವ ಯೋಜನೆ ಇರುವುದು, ಆದರೆ ಭೂತನಾಳ ಕೆರೆಯಲ್ಲಿ ಈ ಸದ್ಯ ನೀರಿನ ಲಭ್ಯತೆ ಕಡಿಮೆ ಇರುವದರಿಂದ ಲಭ್ಯ ಇರುವ ನೀರನ್ನು ವಿಜಯಪುರ ನಗರದಲ್ಲಿ ಬರುವ ಸ್ಥಳೀಯ ಸಂಸ್ಥೆಯ 14 ವಾರ್ಡ್‍ಗಳಿಗೆ ವಾರಕ್ಕೊಮ್ಮೆ , 8 ವಾರ್ಡ್‍ಗಳಿಗೆ 3 ಅಥವಾ 4ದಿನಕ್ಕೊಮ್ಮೆ, ಇನ್ನುಳಿದ 13 ವಾಡ್‍ಗಳಿಗೆ 5-6 ದಿನಗಳಿಗೊಮ್ಮೆ ನೀರು ಪೂರೈಸುವ ಕಾರ್ಯವಾಗಬೇಕು ಎಂದರು.
ಪರ್ಯಾಯವಾಗಿ ವಿಜಯಪುರ ನಗರದ 35 ವಾಡ್ರ್Àಗಳಲ್ಲಿ ವಿದ್ಯುತ್ ಚಾಲಿತ 476 ಕೊಳವೆ ಭಾವಿಗಳಿದ್ದು, ಅವುಗಳÀ ಮೂಲಕ ದಿನಬಳಕೆಗೆ ನೀರು ಸರಬರಾಜು ಮಾಡುವ ವ್ಯವಸ್ಥೆ ಆಗಬೇಕು. ಕೊಲ್ಹಾರದಿಂದ ವಿಜಯಪುರ ನಗರಕ್ಕೆ ನೀರು ಸರಬರಾಜು ಆಗುವ ಪೈಪ್‍ಲೈನ್ ದುರಸ್ಥಿ ಕಾಮಗಾರಿ ಸಂದರ್ಭದಲ್ಲಿ ಸಮರ್ಪಕವಾದ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಸಮಸ್ಯೆ ಉಂಟಾಗಿ ಕೆಲವು ವಾರ್ಡ್‍ಗಳಲ್ಲಿ ಕುಡಿಯುವ ನೀರಿಗೆ ಸಾಕಷ್ಟು ತೊಂದರೆ ಆಗಿರುವುದು ಕಂಡು ಬಂದಿರುತ್ತದೆ. ಈ ನಿಟ್ಟಿನಲ್ಲಿ ಇಂತಹ ತಾಂತ್ರಿಕ ದೋಷಗಳು ಮುಂದಿನ ದಿನಗಳಲ್ಲಿ ಆಗದಂತೆ ನೋಡಿಕೊಳ್ಳುವ ಮೂಲಕ ಜನರಿಗೆ ಸಕಾಲದಲ್ಲಿ ಕುಡಿಯುವ ನೀರಿನ ಪೂರೈಕೆ ಮಾಡಬೇಕು ಎಂದು ಹೇಳಿದರು.
ಸಿಂದಗಿ ಪಟ್ಟಣಕ್ಕೆ ಬಳಗಾನೂರ ಕೆರೆಯಿಂದ ಸಿಂದಗಿ ಕೆರೆಗೆ ನೀರು ತುಂಬಿಸಲಾಗಿದ್ದು, ಮೇ ಅಂತ್ಯದವರೆಗೆ ನೀರಿನ ಸಮಸ್ಯೆ ಆಗುವುದಿಲ್ಲ. ಒಂದು ವೇಳೆ ನೀರಿನ ತೋಂದರೆ ಕಂಡು ಬಂದಲ್ಲಿ, ಸಿಂದಗಿ ಪಟ್ಟಣದಲ್ಲಿ 100 ಕೊಳವೆಬಾವಿಗಳನ್ನು ಗುರುತಿಸಿದ್ದು, ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.
ಇಂಡಿ ಮತ್ತು ಚಡಚಣ ತಾಲೂಕುಗಳಲ್ಲಿ ನೀರಿನ ಟ್ಯಾಂಕ್ ಮೂಲಕ ನೀರು ಪೂರೈಸಿ ಒಟ್ಟಿನಲ್ಲಿ ಯಾವುದೇ ರೀತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಬಾರದು. ಜಾನುವಾರುಗಳಿಗೆ ಮೇವಿನ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕಾಗಿದ್ದು, ರೈತರಿಗೆ ಮೇವನ್ನು ನೇರವಾಗಿ ವಿತರಿಸುವ ಕೆಲಸವಾಗಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಿಶಿ ಆನಂದ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.