ಸಿಯುಕೆಯಿಂದ ಭೀಮಳ್ಳಿ ಗ್ರಾಮದಲ್ಲಿ ಸಮುದಾಯ ಯೋಗ ಜಾಗೃತಿ
ಕಲಬುರಗಿ:ಸೆ.21:“ಮಕ್ಕಳೇ ರಾಷ್ಟ್ರದ ನಿಜವಾದ ಸಂಪತ್ತು” ಎಂದು ಸಿಯುಕೆಯ ಕುಲಸಚಿವ ಪೆÇ್ರ.ಆರ್. ಆರ್. ಬಿರಾದಾರ್ ಹೇಳಿದರು.
ಇಂದು ಕಲಬುರಗಿ ತಾಲೂಕಿನ ಭೀಮಳ್ಳಿ ಗ್ರಾಮದ ಸರಕಾರಿ ಆದರ್ಶ ವಿದ್ಯಾಲಯ ಶಾಲೆಯಲ್ಲಿ ಸಿಯುಕೆಯ ಶಿಕ್ಷಣ ಮತ್ತು ತರಬೇತಿ ವಿಭಾಗದ ವತಿಯಿಂದ ನಡೆದ ಸಮುದಾಯ ಯೋಗ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ದೇಶದ ಅಭಿವೃದ್ಧಿಯು ಮಕ್ಕಳ ಸಮಗ್ರ ಅಭಿವೃದ್ಧಿಯ ಮೇಲೆ ಅವಲಂಬಿತವಾಗಿದೆ. ಯೋಗಾಭ್ಯಾಸದಿಂದ ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗುತ್ತೀರಿ. ಆದ್ದರಿಂದ ಇದು ನಿಮ್ಮ ಜ್ಞಾಪಕ ಶಕ್ತಿ, ಏಕಾಗ್ರತೆ ಮತ್ತು ಅಧ್ಯಯನದಲ್ಲಿ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಇಂದು ಅನೇಕ ವಯಸ್ಕರು ರಕ್ತದೊತ್ತಡ, ಸಕ್ಕರೆ ಕಾಯಿಲೆ, ಬೆನ್ನು ಮತ್ತು ಕುತ್ತಿಗೆ ನೋವಿನಂತಹ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇದು ಆರ್ಥಿಕ ಅಭಿವೃದ್ಧಿಯ ಮೇಲೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಭವಿಷ್ಯದಲ್ಲಿ ಇಂತಹ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ನೀವು ಪ್ರತಿದಿನ ಯೋಗವನ್ನು ಅಭ್ಯಾಸ ಮಾಡಬೇಕು. ʼಆರೋಗ್ಯಕರ ದೇಹದಲ್ಲಿ, ಆರೋಗ್ಯಕರ ಮನಸ್ಸು ಇರುತ್ತದೆ’ ಎಂದು ಪ್ರಸಿದ್ಧವಾಗಿ ಹೇಳಲಾಗುತ್ತದೆ. ಮನಸ್ಸು ಮತ್ತು ದೇಹ ಎರಡನ್ನೂ ಆರೋಗ್ಯಕರವಾಗಿಡಲು ಯೋಗದ ನಿಯಮಿತ ಅಭ್ಯಾಸವು ಬಹಳ ಮುಖ್ಯವಾಗಿದೆ. 2047 ರ ವರೆಗೆ ವಿಕಸಿತ ಭಾರತದ ಸಾಧನೆ ನಿಮ್ಮ ಒಟ್ಟಾರೆ ಅಭಿವೃದ್ಧಿಯ ಮೇಲೆ ಅವಲಂಬಿತವಾಗಿದೆ” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸರಕಾರಿ ಆದರ್ಶ ವಿದ್ಯಾಲಯ ಭೀಮಳ್ಳಿಯ ಪ್ರಾಚಾರ್ಯ ಶ್ರೀ ಕಾಳಿಂಗ ಡಿ, ಶಿಕ್ಷಣ ಮತ್ತು ತರಬೇತಿ ನಿಕಾಯದ ಡೀನ್ ಪೆÇ್ರ.ಜಿ.ಆರ್.ಅಂಗಡಿ, ಡಾ.ಎನ್.ಬಾಬು, ಯೋಗ ತರಬೇತುದಾರರಾದ ಜೋಸ್ತ್ನಾ ಅಂಬೇವಾಡಕರ, ಡಾ.ದೇವಿಕಾ, ಡಾ.ಸುಚಿಷ್ಮಿತಾ ಸಾಹೂ ಉಪಸ್ಥಿತರಿದ್ದರು. ಶ್ರೀ ತರುಣ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಪ್ರಾಂಶುಪಾಲರಾದ ಶ್ರೀ ಕಾಳಿಂಗ ಡಿ. ವಂದಿಸಿದರು. ಸಿಯುಕೆಯ ವಿದ್ಯಾರ್ಥಿಗಳಾದ ಗೋಪಿಕಾ, ನರೇಂದ್ರ ಮತ್ತು ನಿಖಿಲ್ ಅವರು ಯೋಗ ಆಸನಗಳನ್ನು ಪ್ರದರ್ಶಿಸಿದರು, ಸುಮಾರು 200ಕ್ಕೂ ಅಧಿಕ ವಿದ್ಯಾರ್ಥಿಗಳು ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದರು.