ಲೋಕಸಭೆ ಚುನಾವಣೆ ದೇಶದ ಭವಿಷ್ಯ ರೂಪಿಸುವಲ್ಲಿ ಮಹತ್ವದ್ದಾಗಿದೆ: ಸುನೀಲಗೌಡ
ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.1:ದೇಶದ ಭವಿಷ್ಯ ರೂಪಿಸುವಲ್ಲಿ ಲೋಕಸಭೆ ಚುನಾವಣೆ ಮಹತ್ವದ್ದಾಗಿದ್ದು, ಲೋಕಸಭೆ ಚುನಾವಣೆಯ ಮಹತ್ವವನ್ನು ನಮ್ಮ ಜನ ಅರಿಯುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.
ನಗರದ ಸಿಕ್ಯಾಬ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಚುನಾವಣಾ ಚಿಂತನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಪಂ, ವಿಧಾನಸಭೆಯಂತೆ ಲೋಕಸಭೆ ಕ್ಷೇತ್ರವೂ ಅಷ್ಟೇ ಮುಖ್ಯವಾಗಿದೆ ಎಂದರು.
ನಮ್ಮ ಸಮಸ್ಯೆ ಪರಿಹಾರಕ್ಕೆ ಸಂಸದರೂ ಅಷ್ಟೇ ಅಗತ್ಯ. ಜಿಲ್ಲೆಯಲ್ಲಿ ನೀರಾವರಿ ಯೋಜನೆಯಿಂದ ಬಹಳ ಅಭಿವೃದ್ಧಿಯಾಗಿದೆ. ರಾಜ್ಯ ಸರಕಾರ, ಸಚಿವ ಎಂ.ಬಿ.ಪಾಟೀಲರ ಕಳಕಳಿಯಿಂದ ಇದು ಸಾಧ್ಯವಾಗಿದೆ. ಹಾಗೆಯೇ ಸದ್ಯದ ಚುನಾವಣೆಯಲ್ಲಿ ಉತ್ತಮ ಸಂಸದ ಆಯ್ಕೆಯಾದರೆ ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಿಸಲು ಅವರು ದನಿಯಾಗುತ್ತಾರೆ. ರಾಷ್ಟ್ರೀಯ ಯೋಜನೆಯಾಗಿ ಯುಕೆಪಿಯನ್ನು ಘೋಷಿಸಿದರೆ ಈಗಿನದ್ದಕ್ಕಿಂತ ಹತ್ತು ಪಟ್ಟು ನೀರಾವರಿ ಆಗಲಿದೆ. ಈ ಕೆಲಸವನ್ನು ಮೂರು ಸಲ ಸಂಸದರಾಗಿದ್ದ ಜಿಗಜಿಣಗಿಯವರು ಕೇಂದ್ರದಲ್ಲಿ ಮಾಡಲಿಲ್ಲ. ರಾಜು ಆಲಗೂರರನ್ನು ಆರಿಸಿದರೆ ಅವರು ಸಂಸತ್ತಿನಲ್ಲಿ ನಿಮ್ಮ ಧ್ವನಿಯಾಗಲಿದ್ದಾರೆ ಎಂದು ಹೇಳಿದರು. .
ಅಭ್ಯರ್ಥಿ ರಾಜು ಆಲಗೂರ ಮಾತನಾಡಿ, ಪ್ರಾಧ್ಯಾಪಕನಾಗಿ ನಾನು ಹಲವು ವರ್ಷಗಳ ಕಾಲ ದುಡಿದ್ದೇನೆ. ಶಿಕ್ಷಣ ಕ್ಷೇತ್ರದ ಅನುಭವ ನನಗಿದೆ. ಕ್ಷೇತ್ರದ ಅಭಿವೃದ್ಧಿ ಜೊತೆಗೆ ನಿಮ್ಮೊಂದಿಗೆ ನಾನು ಇರುವೆ ಎಂದು ಹೇಳಿದರು.
ಸಂಸ್ಥೆ ನಿರ್ದೇಶಕ ಸಲಾವುದ್ದೀನ್ ಪ್ರಾಸ್ತಾವಿಕವಾಗಿ ಮಾತನಾಡಿ, ಬಸವಣ್ಣನವರ ನಾಡಿನ ನಾವು ಸಮಾನತೆ ಕಲಿತವರು. ಈ ನೆಲ ಸೌಹಾರ್ದತೆಯಿಂದ ಕೂಡಿದೆ. ನ್ಯಾಯವಿದ್ದಲ್ಲಿ ಶಾಂತಿ ಇದೆ. ಬಸವ ತತ್ವಗಳನ್ನು ಎತ್ತಿ ಹಿಡಿಯಬೇಕು. ನಾವೆಲ್ಲ ಲೋಕಸಭೆ ಚುನಾವಣೆಯಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದರು. ರಾಜಶೇಖರ ಯಡಹಳ್ಳಿ ಅತಿಥಿಯಾಗಿದ್ದರು.
ಎ.ಎಸ್.ಪಾಟೀಲ ಸ್ವಾಗತಿಸಿ, ವಂದಿಸಿದರು.
ಬಾಕ್ಸ್
ರಾಜು ಆಲಗೂರ್ ಪುಣ್ಯ ಕೋಟಿ ಇದ್ದಂಗೆ!
ಚಿಕ್ಕಮಗಳೂರಿನ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್ ಅಂದರೆ ಚಿಂತನೆ, ಹೋರಾಟ. ದೇಶಕ್ಕೆ ಏನೂ ಕೊಡದ ಜನರು ದೇಶ ಪ್ರೇಮ ಕಲಿಸಿಕೊಡುತ್ತಿದ್ದಾರೆ. ಕಾಂಗ್ರೆಸ್ ಬಗ್ಗೆ ತಪ್ಪು ಅಭಿಪ್ರಾಯ ಬಿತ್ತಲಾಗಿದೆ. ಆದರೆ ದೇಶ ಕಟ್ಟಿದ್ದು ಕಾಂಗ್ರೆಸ್. ರಾಜು ಆಲಗೂರ ಪುಣ್ಯಕೋಟಿ ಇದ್ದಂಗೆ. ಅವರು ನಿಮ್ಮ ಕೈಗೆ ಸರಳವಾಗಿ ಸಿಗುತ್ತಾರೆ. ಇವರು ಗೆಲ್ಲಬೇಕು, ಯಾವಾಗಲೂ ನಗು ನಗುತ್ತ ನಿಮ್ಮ ಕೆಲಸಗಳನ್ನು ಮಾಡಿಕೊಡಲಿದ್ದಾರೆ ಎಂದು ಹೇಳಿದರು.