ಸಂಶೋಧನೆಯಲ್ಲಿ ಹೊಸ ಆವಿಷ್ಕಾರ ಬರಬೇಕು: ಕೊಟ್ನಾಳ
ವಿಜಯಪುರ,ಏ.28: ದೇಶದ ಹಳೆಯ ಆಚಾರಗಳಿಗೆ ಆಧುನಿಕ ವಿಚಾರಗಳನ್ನು ಸೇರಿಸಿದರೆ ಸಂಶೊಧನೆಯಲ್ಲಿ ಹೊಸ ದಾರಿಯನ್ನು ಕಾಣಬಹುದು ಎಂದು ಬಿ. ಎಲ್. ಡಿ. ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ ಹೇಳಿದ್ದಾರೆ.
ಶನಿವಾರ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್. ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ಅನುಸಂಧಾನ-2024 ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಭವ್ಯ ಭಾರತದ ಸಸ್ಯ ಸಂಪತ್ತು ಅತ್ಯದ್ಭುತವಾಗಿದ್ದು ಸಮಸ್ತ ಮನುಕುಲಕ್ಕೆ ಅದರ ಮಹತ್ವ ತಿಳಿಸುವುದು ಭಾವಿ ವೈದ್ಯ ಸಂಶೋದಕರ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.
ಗದಗ ಡಿಜಿಎಂ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ. ಸಂತೋಷ ಬೆಳವಡಿ ಮಾತನಾಡಿ, ಈಗ ಕಾಲ ಕಾಲಕ್ಕೆ ಸಂಶೋಧನೆ ಕುರಿತು ವಿಚಾರ ಸಂಕಿರಣಗಳು ಅವಶ್ಯವಾಗಿದ್ದು, ಆಧುನಿಕ ಯುಗಕ್ಕೆ ತಕ್ಕಂತೆ ಭಾರತದ ಮೂಲ ಮತ್ತು ಪುರಾತನ ವಿಜ್ಞಾನವನ್ನು ಸೇರಿಸಿ ಹೊಸ ತಂತ್ರಜ್ಞಾನಗಳ ಆಧಾರಿತ ವನಸ್ಪತಿ ದ್ರವ್ಯಗಳ ಸಂಶೋಧನೆ ನಡೆಸಬೇಕು. ಅದಕ್ಕೆ ತಕ್ಕಂತೆ ಸತ್ಯ ಸಾಕ್ಷಿ ಧೃಡೀಕರಣ ಮಾಡಿ ಜಗತ್ತಿನ ವೈಜ್ಞಾನಿಕ ಲೋಕದಲ್ಲಿ ಹೊಸ ಸಾಧನೆ ಮಾಡಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಮಾತನಾಡಿ, ಇಂದಿನ ಯುಗದಲ್ಲಿ ಸಸ್ಯ ಸಂಜೀವಿನಿ ವಿದೇಶಗಳಲ್ಲಿ ಹೆಚ್ಚು ಉಪಯೋಗವಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಸಂಶೊಧನೆ ಮಾಡಿ ದಾಖಲೆ ನೀಡಬೇಕಾಗಿದೆ ಎಂದು ಹೇಳಿದರು.
ಈ ಅನುಸಂಧಾನ ವಿಚಾರ ಸಂಕಿರಣದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಕೇರಳ ರಾಜ್ಯಗಳಿಂದ ನಾನಾ ಆಯುರ್ವೇದ, ಯುನಾನಿ, ಫಾರ್ಮಸಿ, ನಸಿರ್ಂಗ್, ವಿಭಾಗಗಳ ಸ್ನಾತಕೋತ್ತರ ಹಾಗೂ ಪಿ.ಎಚ್.ಡಿ ವಿದ್ಯಾರ್ಥಿಗಳು ಸೇರಿದಂತೆ 150 ಕ್ಕೂ ಹೆಚ್ಚು ಸಂಶೋಧಕರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಮೂಖ್ಯ ಅಯೋಜಕ ಡಾ. ಸತೀಶ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ. ಜೋತ್ಸನಾ ಮತ್ತು ಡಾ. ಪರಮೇಶ್ವರಿ ನಿರೂಪಿಸಿದರು.