ಮತದಾನ ಮೂಲಕ ಜವಾಬ್ದಾರಿ ನಿರ್ವಹಿಸಿ: ಸಿ.ಆರ್. ಮುಂಡರಗಿ
ವಿಜಯಪುರ,ಏ.27:ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡುವುದು ಮತ್ತು ಗಟ್ಟಿಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮೇ.7ರಂದು ಕಡ್ಡಾಯವಾಗಿ ಮತ್ತು ಖಚಿತವಾಗಿ ಮತದಾನ ಮಾಡುವ ಮೂಲಕ ನಮ್ಮ ಜವಾಬ್ದಾರಿಯನ್ನು ನಿರ್ವಹಿಸೋಣ ಎಂದು ಜಿಲ್ಲಾ ಸ್ವೀಪ್ ಸಮಿತಿಯ ನೊಡೆಲ್ ಅಧಿಕಾರಿ ಸಿ. ಆರ್ ಮುಂಡರಗಿ ಅವರು ಹೇಳಿದರು.
ಗÀುರುವಾರ ಲೋಕಸಭಾ ಚುನಾವಣೆ ಪ್ರಯುಕ್ತ ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ವಸತಿ ನಿಲಯದಲ್ಲ್ಲಿ ವಸತಿ ನಿಲಯದ ವಿದ್ಯಾರ್ಥಿನಿಯರೊಂದಿಗೆ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳುವ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮತದಾನದ ಹಬ್ಬವನ್ನು ಪ್ರಜಾಪ್ರಭುತ್ವದ ಹಬ್ಬ ಎಂದು ಅತ್ಯಂತ ಸಂಭ್ರಮದಿಂದ ಆಚರಿಸೋಣ. ಆದ್ದರಿಂದ ಎಲ್ಲರೂ ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಂಡು ಮೇ 07ರಂದು ತಪ್ಪದೇ ಮತದಾನ ಮಾಡಬೇಕು ಎಂದು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಮ್.ಎಂ ತುಂಬರಮಟ್ಟಿ ಮಾತನಾಡಿ, ಯುವ ಮತದಾರರು ಮತ್ತು ಮೊಟ್ಟಮೊದಲ ಬಾರಿಗೆ ಮತ ನೀಡುತ್ತಿರುವ ನೀವೆಲ್ಲರೂ ಮತದಾನ ಮಾಡಿದರೆ ಮಾತ್ರ ಸುಭದ್ರವಾದ ಸರ್ಕಾರವನ್ನು ರಚಿಸಲು ಸಾಧ್ಯ. ನೀವು ಮತದಾನ ಮಾಡಿ ನಿಮ್ಮ ಕುಟುಂಬ ಹಾಗೂ ನಿಮ್ಮ ನೆರೆಹೊರೆಯವರೂ ಸಹ ಮತದಾನ ಮಾಡಲು ಪ್ರೇರೇಪಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತಿಯ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಎ.ಬಿ. ಅಲ್ಲಾಪೂರ ಅವರು ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು. ಆದ್ದರಿಂದ ಎಲ್ಲರೂ ತಪ್ಪದೇ ಕಡ್ಡಾಯವಾಗಿ ಮತದಾನ ಮಾಡಿ ಜಿಲ್ಲೆಯ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಸಹಕರಿಸಬೇಕು ನಮ್ಮ ಕರ್ತವ್ಯವನ್ನು ನಿಭಾಯಿಸಬೇಕು. ಈ ನಿಟ್ಟಿನಲ್ಲಿ ಮತದಾನದಿಂದ ಯಾರೂ ಸಹ ಹೊರಗುಳಿಯಬಾರದು. ಜಿಲ್ಲೆಯ ಪ್ರತಿ ಮತಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಮಹಿಳೆಯರಿಗೋಸ್ಕರ ಮಹಿಳಾ ಸ್ನೇಹಿ ಮತಗಟ್ಟೆ (ಪಿಂಕ್/ಸಖಿ ಬೂತ್)ಗಳನ್ನು ಅಲಂಕರಿಸಲಾಗಿದೆ. ಆದ್ದರಿಂದ ಎಲ್ಲ ಮಹಿಳೆಯರು ನಿರ್ಭೀತಿಯಿಂದ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಬೇಕು ಎಂದರು.
ಬಳಿಕ, ವಸತಿ ನಿಲಯದ ಬಾಲಕಿಯರೆಲ್ಲರೂ ಸೇರಿ ಮತದಾನ ಜಾಗೃತಿ ಕುರಿತು ಘೋಷÀಣೆಗಳನ್ನು ಕೂಗಿದರು ಮತ್ತು ಮತದಾರರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪತ್ರಾಂಕಿತ ಸಹಾಯಕÀ ಯಾಸೀನ ಬಾಗವಾನ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಕಲ್ಯಾಣಶೆಟ್ಟಿ, ಜಿಲ್ಲಾ ಪಂಚಾಯತಿಯ ಅಮೋಘಸಿದ್ದ ಗೌಳಿ, ವಿಶ್ವನಾಥ ಶಹಾಪೂರ, ಶ್ರೀಧರ ಹೊಸಮನಿ, ಪುನೀತ ಕೆಲೂರ, ಸುವರ್ಣ ಭಜಂತ್ರಿ ಮತ್ತು ವಸತಿ ನಿಲಯದ ಮೇಲ್ವಿಚಾರಕರು ಉಪಸ್ಥಿತರಿದ್ದರು.