ಅನುಭವಿ ಆಲಗೂರ ಗೆಲುವಿನಿಂದ ಜಿಲ್ಲೆ ಅಭಿವೃದ್ಧಿ: ಶಾಸಕ ಯಶವಂತರಾಯಗೌಡ
ಸಂಜೆವಾಣಿ ವಾರ್ತೆ,
ವಿಜಯಪುರ,ಏ.26:ಸಜ್ಜನ ಹಾಗೂ ಅನುಭವಿಯಾದ ವಿಜಯಪುರ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರಿಗೆ ಮತ ನೀಡಿದರೆ ಜಿಲ್ಲೆಯಲ್ಲಿ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಹಾಗೂ ಹಿರೆಬೇವನೂರಲ್ಲಿ ನಡೆದ ಜಿಪಂ ವ್ಯಾಪ್ತಿಯ ಲೋಕಸಭೆ ಚುನಾವಣೆ ಸಭೆಯಲ್ಲಿ ಮಾತನಾಡಿ, ಭೀಮೆಯ ದಡದ ಗ್ರಾಮಗಳಿಗೆ ಹಲವು ಅನುಕೂಲ ಮಾಡಿಕೊಡಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ನೀರಾವರಿ, ಪ್ರವಾಸೋದ್ಯಮ, ಲಿಂಬೆ ಬೆಳೆಗಳಿಗೆ ಪ್ರಾತಿನಿಧ್ಯ ಸೇರಿದಂತೆ ನೂರಾರು ಕೆಲಸಗಳು ಆಗಲಿವೆ. ಕೆಲಸ ಮಾಡುವವರಿಗೆ ಮತ ನೀಡಿದರೆ ಅವರಿಗೆ ಉತ್ತೇಜನ ಸಿಗುತ್ತದೆ. ಆಧ್ಯಾತ್ಮಿಕ ಸ್ವರೂಪದ ನೆಲ ಇದಾಗಿದೆ. ಈ ಕ್ಷೇತ್ರವನ್ನು ಹಿಂದೆಂದೂ ಕಾಣದಂತಹ ಅಭಿವೃದ್ಧಿ ಮಾಡಿದ್ದೇವೆ. ಸಾವಿರಾರು ಕೋಟಿ ರೂ. ಅನುದಾನ ನೀಡಿದ್ದೇವೆ. ಇಂಡಿ ನಗರಕ್ಕೆ ನಿರಂತರ ನೀರು, ರಸ್ತೆ, ಭೀಮಾಶಂಕರ ಸಕ್ಕರೆ ಕಾರಖಾನೆ ನಮ್ಮ ಸಾಧನೆಗಳು ಎಂದು ಹೇಳಿದರು.
ಅಭ್ಯರ್ಥಿ ರಾಜು ಆಲಗೂರ ಅವರು ಮಾತನಾಡಿ, ಮೋದಿಯವರು ಉದ್ಯಮಪತಿಗಳ ಬಗ್ಗೆ ತೋರಿದ ಕಾಳಜಿ ರೈತರಿಗೆ ತೋರಿಸಿದ್ದರೆ ಈ ದೇಶ ಉದ್ಧಾರವಾಗುತ್ತಿತ್ತು ಎಂದು ಹೇಳಿದರು.
ಉದ್ಯಮಿಗಳ ಹದಿನಾಲ್ಕು ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿರುವ ಮೋದಿಯವರ ಕಣ್ಣಿಗೆ ರೈತರ ಕೇವಲ ಒಂದೂವರೆ ಲಕ್ಷ ಕೋಟಿ ಸಾಲ ಕಾಣಲಿಲ್ಲ. ಇಲ್ಲಿನ ಸಂಸದ ಏನೊಂದು ಕೆಲಸ ಮಾಡಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ನನಗೆ ಮತ ನೀಡಿದರೆ ನಿಮ್ಮ ಸೇವಕನಾಗಿ ದುಡಿಯುವೆ ಎಂದು ಕೋರಿದರು.
ಇಲಿಯಾಸ್ ಬೋರಾಮಣಿ ಅವರು, ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಸಾಕಾರವಾಗಿದ್ದನ್ನು ವಿವರಿಸಿ, ತಾಲೂಕಿಗೆ ಪ್ರತಿ ತಿಂಗಳು ಹದಿಮೂರು ಕೋಟಿಯಷ್ಟು ಹಣ ಈ ಯೋಜನೆಯಿಂದ ಬರುತ್ತಿದೆ ಎಂದರು.
ಮುಖಂಡರಾದ ಅಣ್ಣಾರಾಯ ಬಿದರಕೋಟಿ, ಜಟ್ಟೆಪ್ಪ ರವಳಿ, ಎಂ.ಆರ್. ಪಾಟೀಲ, ಕಲ್ಯಾಣಗೌಡ ಪಾಟೀಲ, ಭೀಮಣ್ಣ ಕವಲಗಿ, ಶೈಲಶ್ರೀ ಜಾಧವ, ಸಿದ್ಧರಾಯ ಐರೋಡಗಿ, ಬ್ಲಾಕ್ ಅಧ್ಯಕ್ಷÀ ಜಾವೇದ್ ಮೋಮಿನ್, ಕಲ್ಲನಗೌಡ ಬಿರಾದಾರ, ಶ್ರೀಶೈಲ, ಭೋಜಪ್ಪಗೌಡ ಸಾಹುಕಾರ, ಗಿರೀಶಗೌಡ ಪಾಟೀಲ, ಭೀಮಣ್ಣ ಕವಲಗಿ ಸೇರಿದಂತೆ ಅನೇಕರಿದ್ದರು.
