ವಲಭಾಪುರ ಹಾಸ್ಟೆಲ್‌ಗೆ ಜಿಲ್ಲಾಧಿಕಾರಿಗಳಾದಎಂ.ಎಸ್ ದಿವಾಕರ ಭೇಟಿ: ಸೌಲಭ್ಯಗಳ ಪರಿಶೀಲನೆ
ಹೊಸಪೇಟೆ (ವಿಜಯನಗರ) ಸೆ.21 : ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ವಲಭಾಪುರ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಜಿಲ್ಲಾಧಿಕಾರಿಗಳಾದ ಎಂ.ಎಸ್ ದಿವಾಕರ ಅವರು ಸೆಪ್ಟೆಂಬರ್ 18ರಂದು ಅನಿರೀಕ್ಷಿತವಾಗಿ ಭೇಟಿ ನೀಡಿ, ಹಾಸ್ಟೆಲ್ ಸೌಲಭ್ಯಗಳನ್ನು ಪರಿಶೀಲನೆ ಮಾಡಿದರು.
ಹಾಸ್ಟೆಲ್‌ನಲ್ಲಿರುವ ಮೂಲಭೂತ ಸೌಕರ್ಯಗಳ ವ್ಯವಸ್ಥೆ, ಶೈಕ್ಷಣಿಕ ಕಾರ್ಯಚಟುವಟಿಕೆಗಳು ಸೇರಿದಂತೆ ಇತರೆ ಸೌಲಭ್ಯಗಳ ಬಗ್ಗೆ ಖುದ್ದಾಗಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಮಕ್ಕಳಿಗೆ ನೀಡುವ ಬೆಳಿಗ್ಗೆಯ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ ಹಾಗೂ ಸಾಯಂಕಾಲ ನೀಡುವ ಲಘು ಉಪಹಾರಗಳ ಬಗ್ಗೆ ನೇರವಾಗಿ ಮಕ್ಕಳಿಂದಲೇ ಮಾಹಿತಿಯನ್ನು ಪಡೆದರು ಹಾಗೂ ವಿದ್ಯಾಭ್ಯಾಸದ ಕುರಿತು ವಿಚಾರಿಸಿದರು.
ಬಳಿಕ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ ಶಿಕ್ಷಣದಿಂದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ, ಎಲ್ಲಾ ಮಕ್ಕಳು ಉತ್ತಮವಾಗಿ ಅಭ್ಯಾಸ ಮಾಡಿ, ಐ.ಎ.ಎಸ್., ಐ.ಪಿ.ಎಸ್., ಕೆ.ಎ.ಎಸ್.ಗಳಂತೆ ಹುದ್ದೆಗಳಿಗೆ ಹೋಗುವ ಗುರಿಯನ್ನು ಹೊಂದಬೇಕು. ಶಿಕ್ಷಣದಲ್ಲಿ ಯಶಸ್ವಿ ಸಾಧಿಸಿ ನಿಮ್ಮ ತಂದೆ ತಾಯಿ, ಊರು, ಜಿಲ್ಲೆ, ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತರಬೇಕು ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ವಲಭಾಪುರ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯರು, ಹಾಸ್ಟೆಲ್ ವಾರ್ಡನ್, ಶಿಕ್ಷಕರು ಸೇರಿದಂತೆ ಮತ್ತಿತರರಿದ್ದರು.