ತಪ್ಪದೇ ಮತದಾನ ಮಾಡಿ
ಗದಗ,ಏ25: ಗದಗ ಶಹರದ ಎ.ಎಸ್.ಎಸ್ ಕಾಲೇಜ್ ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರಾದ ಮಾಣಿಕರಾವ್ ಪಾಟೀಲ ಅವರು ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು.
18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ತಪ್ಪದೇ ಮಾತದಾನ ಮಾಡಬೇಕು. ಮತದಾನ ಮಾಡಲು ನಮ್ಮ ಸುತ್ತಲಿನವರಿಗೆ ತಿಳಿವಳಿಕೆ ನೀಡಬೇಕು. ಪ್ರತಿಯೊಬ್ಬರೂ ಮಾತದಾನ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಲು ಪ್ರೇರಣೆ ನೀಡಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಬಿ. ಬಿ. ಎ ಕಾಲೇಜ್ ಪ್ರಾಂಶುಪಾಲರಾದ ಲಿಂಗರಾಜ ರಶ್ಮಿ ಮಾತನಾಡಿ, ಮೊದಲ ಬಾರಿಗೆ ಮತ ಚಲಾಯಿಸಲಿರುವವರು ‘ಯಾವುದೇ ಆಮಿಷಕ್ಕೆ ಒಳಗಾಗದೆ ನ್ಯಾಯಯುತ ಹಾಗೂ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ನಮ್ಮ ಕರ್ತವ್ಯ. ಇಂದಿನ ದಿನಗಳಲ್ಲಿ ಯುವಕರು, ವಿದ್ಯಾರ್ಥಿಗಳು ಮತದಾನದ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ. ಆದರೆ ಇಂತಹ ತಪ್ಪನ್ನು ಯಾರೂ ಮಾಡಬಾರದು. ತಪ್ಪದೇ ಮತ ಚಲಾಯಿಸಬೇಕು’ ಎಂದರು.
ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಕಾಲೇಜ್ ಹತ್ತಿರದ ವಾರ್ಡಗಳಲ್ಲಿ ಸಂಚರಿಸಿ ಮತದಾನ ಕುರಿತು ಸ್ಟಿಕರ್, ಬಿತ್ತಿಪತ್ರ ಗಳನ್ನು ಪ್ರದರ್ಶಿಸುತ್ತ ಜಾಗೃತಿ ಮೂಡಿಸಿ ಗಮನಸೆಳೆದರು.
ಕಾರ್ಯಕ್ರಮದಲ್ಲಿ ಎಎಸ್‍ಎಸ್ ಪಿಯು ಕಾಲೇಜ್ ಸಿಬ್ಬಂದಿಗಳು, ಡಿಗ್ರಿ ಕಾಲೇಜ್ ಸಿಬ್ಬಂದಿಗಳು, ಬಿ. ಬಿ. ಎ ಕಾಲೇಜ್ ಸಿಬ್ಬಂದಿಗಳು ಮತ್ತು ಇತರರಿದ್ದರು.