ಸಮಾಜದ ಶ್ರೇಯೋಭಿವೃದ್ಧಿಗೆ ಜೀವನ ಮುಡಿಪಾಗಿಟ್ಟ ಶರಣರ ಬದುಕು ಸ್ಮರಣೀಯ
ಸಂಜೆವಾಣಿ ವಾರ್ತೆ
ಕೆಂಭಾವಿ:ಏ.25:ಬದುಕಿನುದ್ದಕ್ಕೂ ಸಮಾಜದ ಶ್ರೇಯೋಭಿವೃದ್ಧಿಗೆ ಜೀವನ ಮುಡಿಪಾಗಿಟ್ಟ ಲೋಕ ಕಲ್ಯಾಣಕ್ಕೆ ಕಳಸ ಪ್ರಾಯರಾಗಿ ಪ್ರಥಮರಲ್ಲಿ ಪ್ರಥಮರು ಎನ್ನಿಸಿಕೊಂಡ ಮಹಾತ್ಮರನ್ನು ನೆನೆಯೋಣ ಎಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕ ಮಲ್ಲಯ್ಯ ಸ್ವಾಮಿ ವಡಿಗೇರಿ ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶ್ರೀ ಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ ಮಂಗಳವಾರ ಜರುಗಿದ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿಯನ್ನು ಉದ್ಘಾಟಿಸಿ ಉಪನ್ಯಾಸ ನೀಡಿದ ಅವರು ಮಾನವ ಹಕ್ಕಿಯಂತೆ ಹಾರಾಡುವುದು, ಮೀನಿನಂತೆ ಈಜುವುದು, ಪ್ರಾಣಿಗಳಂತೆ ಓಡಾಡುವುದು ಕಲಿತರು ಸುಖ ಶಾಂತಿಯಿಲ್ಲ. ಆ ನೆಮ್ಮದಿಯ ಸುಖ ಶಾಂತಿಯ ಬದುಕು ನಮ್ಮದಾಗಲು ಸಾಧು ಸಂತರು, ಮಹಾಂತರು ನಿತ್ಯವೂ ಸ್ಮರಣೀಯರು. ಇಂದು ಹನುಮ ಜಯಂತಿ, ಅಕ್ಕಮಹಾದೇವಿ ಜಯಂತಿ, ಹಾಗೂ ಗೊಲಗೇರಿ ಗೋಲ್ಲಾಳೇಶರ ರಥೋತ್ಸವ ಇಂತಹ ಪವಿತ್ರ ದಿನದಂದು ಸತ್ಸಂಗದಲ್ಲಿ ಭಾಗಿಯಾಗಿರುವ ನಾವು ನೀವುಗಳು ಪುಣ್ಯವಂತರು ಎಂದರು.
ಪೀಠಾಧಿಪತಿ ಷ ಬ್ರ ಶ್ರೀ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಯಮನೇಶ ಯಾಳಗಿ, ಶರಣಕುಮಾರ ಯಾಳಗಿ, ಸೋಮನಾಥ ಯಾಳಗಿ, ಇವರಿಂದ ಸಂಗೀತ ಕಾರ್ಯಕ್ರಮ ಮೂಡಿ ಬಂತು. ಡಾ ಯಂಕನಗೌಡ ಎಸ್ ಪಾಟೀಲ ನಿರೂಪಿಸಿ ವಂದಿಸಿದರು, ಪ್ರಮುಖರಾದ ನಿಂಗನಗೌಡ ದೇಸಾಯಿ ಅಭಿಷೇಕ್ ಪಾಟೀಲ ಸೇರಿದಂತೆ ಅನೇಕ ಸದ್ಭಕ್ತರು ಮಹಿಳೆಯರು ಮಕ್ಕಳು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.