ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಲು ಕರೆ
ಧಾರವಾಡ,ಏ224: ಪ್ರಜಾಪ್ರಭುತ್ವಕ್ಕೆ ಮತ್ತಷ್ಟು ಬೆಳಕು ನೀಡುವ, ಬಲ ತುಂಬುವ ಕಾರ್ಯ ಪ್ರತಿಯೊಬ್ಬರು ಸಾರ್ವತ್ರಿಕ ಚುನಾವಣೆಯಲ್ಲಿ ಭಾಗವಹಿಸುವ ಮತ್ತು ತಪ್ಪದೇ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮೃದ್ಧಿಯ ಬೆಳಕು ಹೆಚ್ಚಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಧಾರವಾಡ ನಗರದ ಕೆಸಿಸಿ ಬ್ಯಾಂಕ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಹಿಂದುಳಿ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಮತದಾರ ಜಾಗೃತಿಗಾಗಿ ಆಯೋಜಿಸಿದ್ದ ಪಂಜಿನೊಂದಿಕೆ ಯುವ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ಮತದಾನ ನಮ್ಮ ಹೆಮ್ಮೆ. ಅದು ನಮ್ಮ ಅಭಿಮಾನದ ಸಂಕೇತ. ಭಾರತೀಯರಾದ ನಾವು ಪ್ರತಿಯೊಬ್ಬರು ನಮ್ಮ ಸಂವಿದಾನ ನೀಡಿರುವ ಹಕ್ಕನ್ನು ತಪ್ಪದೇ ಚಲಾಯಿಸಬೇಕು. ಪ್ರತಿಯೊಬ್ಬರು ಚಲಾಯಿಸುವ ಮತ ದೇಶದ ಅಭಿವೃದ್ದಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ ಎಂದರು.
ಮತದಾನವು ಪ್ರಜ್ವಲಿಸುವ ಜ್ಯೋತಿ ಇದ್ದಂತೆ. ಮೊದಲ ಬಾರಿಗೆ ಮತದಾನದ ಹಕ್ಕು ಪಡೆದಿರುವ ಯುವ ಸಮೂಹ ಮತ್ತು ಯುವ ಪಡೆ ಮತದಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ತಮ್ಮ ಕುಟುಂಬ ಸದಸ್ಯರು ಮತದಾನ ಮಾಡುವಂತೆ ಮಾಡುವ ಮೂಲಕ ಇನ್ನಷ್ಟು ಪ್ರಜಾಪ್ರಭುತ್ವ ಸದೃಢಗೊಳಿಸಲು ತಮ್ಮ ಸೇವೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಆಗಿರುವ ಜಿಲ್ಲಾ ಪಂಚಾಯತ ಸಿಇಓ ಸ್ವರೂಪ ಟಿ.ಕೆ., ಅವರು ಮಾತನಾಡಿ, ಜಿಲ್ಲೆಯ ಮತದಾನ ಹೆಚ್ಚಳಕ್ಕೆ ಎಲ್ಲರೂ ಕೈ ಜೋಡಿಸಬೇಕು. ಸುಶಿಕ್ಷಿತರ ಜಿಲ್ಲೆಯಲ್ಲಿ ಮತದಾನ ಕಡಿಮೆ ಆಗಬಾರದು. ಮತದಾನ ಹೆಚ್ಚಳಕ್ಕೆ ಜಿಲ್ಲೆಯ ಎಲ್ಲರೂ ಶ್ರಮಿಸಬೇಕು ಎಂದರು.
ಮತದಾನ ಜಾಗೃತಿಗಾಗಿ ವಿದ್ಯಾರ್ಥಿಗಳಿಂದ ಪಾಲಕರಿಗೆ ಓಲೆ, ಮತ ಚಿತ್ರ ಶಿಬಿರ, ಮಕ್ಕಳಿಗೆ ಸ್ಪರ್ಧೆ, ಜಾಥಾ ಮುಂತಾದವುಗಳ ಮೂಲಕ ಅರಿವು ಮೂಡಿಸಲಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಮತಸೇವಕರಾಗಿ ತೊಡಗಿಸಿಕೊಳ್ಳಬೇಕು. ಪಂಜಿನ ಮೆರವಣಿಗೆ ಸಾರ್ವಜನಿಕರಲ್ಲಿ ಮತದಾನ ಅರಿವು ಹೆಚ್ಚಿಸುತ್ತದೆ ಎಂದು ಹೇಳಿದರು.
ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತ ಹಾಗೂ ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಅವರು ಮಾತನಾಡಿ, ಅವಳಿನಗರದಲ್ಲಿ ಪ್ರಸಕ್ತ ಸಾಲಿನ ಲೋಕಸಭಾ ಚುನಾವಣೆಯಲ್ಲಿ ಶೇ.85 ರಷ್ಟು ಮತದಾನ ಮಾಡಿಸುವ ಗುರಿ ಹೊಂದಲಾಗಿದೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಮರ್ಗದರ್ಶನದಲ್ಲಿ ಅವಳಿನಗರದ ಪ್ರತಿ ವಾರ್ಡ್ ಮತ್ತು ಜನಸಂದಣಿ ಸ್ಥಳಗಳಲ್ಲಿ ಪಾಲಿಕೆ ಸಿಬ್ಬಂದಿಗಳು ವಿಭಿನ್ನವಾದ ಕಾರ್ಯಕ್ರಮಗಳ ಮೂಲಕ ಮತದಾನ ಜಾಗೃತಿ ಮೂಡಿಸುತ್ತಿದ್ದಾರೆ. ಇನ್ನು ಹೆಚ್ಚುಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶುಭಾ ಪಿ., ಅವರು ವಂದಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಗೋಪಾಲ ಲಮಾಣಿ ಕಾರ್ಯಕ್ರಮ ನಿರೂಪಿಸಿದರು.
ಪಂಜಿನ ಮೆರವಣಿಗೆ ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ ಐಕಾನ್ ಜ್ಯೋತಿ ಸಣಕ್ಕಿ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಅಧೀನದ ಮೆಟ್ರಿಕ ನಂತರದ ವಿವಿಧ ವೃತ್ತಿಪರ, ಪದವಿ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿ, ವಿದ್ಯಾರ್ಥಿನೀಯರು ಭಾಗವಹಿಸಿದ್ದರು.
ಸಾರ್ವಜನಿಕರ ಗಮನ ಸೆಳೆದ ಪಂಜಿನ ಮೆರವಣಿಗೆ: ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ಸಿಇಓ ಸ್ವರೂಪ ಟಿ.ಕೆ.ಅವರ ನೇತೃತ್ವದಲ್ಲಿ ಧಾರವಾಡ ನಗರ ಹೃದಯ ಭಾಗದಲ್ಲಿರುವ ಕೆಸಿಸಿ ಬ್ಯಾಂಕ್ ವೃತ್ತದಲ್ಲಿ ಮತದಾನ ಜಾಗೃತಿಯ ಘೋಷಣೆಗಳೊಂದಿಗೆ ಆರಂಭವಾದ ಯುವ ಸಮೂಹದ ಪಂಜಿನ ಮೆರವಣಿಗೆ ಜಾಥಾ ಕಾರ್ಯಕ್ರಮವು ಮಾರುಕಟ್ಟೆಯಲ್ಲಿ ನೆರೆದಿದ್ದ ಸಾರ್ವಜನಿಕರ ಗಮನ ಸೆಳೆಯಿತು. ಪಂಜಿನ ಜಾಥಾವು ಸುಭಾಸ ರಸ್ತೆ, ವಿವೇಕಾನಂದ ವೃತ್ತ, ಹಳೆ ಬಸ್ ನಿಲ್ದಾಣ, ರಾಣಾ ಪ್ರತಾಪ ಸಿಂಹ ಸರ್ಕಲ್, ಅಂಬೇಡ್ಕರ ಪ್ರತಿಮೆ ಬಳಿಯಿಂದ ಆಲೂರು ವೆಂಕಟರಾವ ವೃತ್ತದಲ್ಲಿ ಮಾನವ ಸರಪಳಿ ಸೃಷ್ಟಿಸಿ, ಜನರ ಗಮನ ಸೆಳೆಯಿತು. ಜಾಥಾದಲ್ಲಿ ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೆ ಮತ್ತು ನೆರೆದ ಸಾರ್ವಜನಿಕರಿಗೆ ಮತದಾನ ದಿನದಂದು ತಪ್ಪದೇ ಮತದಾನ ಮಾಡವಂತೆ ಪ್ರತಿಜ್ಞಾ ಬೋಧಿಸಲಾಯಿತು. ಜಾಥಾವು ಮಹಾನಗರ ಪಾಲಿಕೆ ಆವರಣದಲ್ಲಿ ಮುಕ್ತಾಯಗೊಂಡಿತು.