ಯುವತಿ ಪೋಷಕರ ಮೇಲೆಪಾಗಲ್ ಪ್ರೇಮಿ ಹಲ್ಲೆ
ರಾಯಚೂರು,ಏ. ೨೦- ಪ್ರೀತಿ ಪ್ರೇಮದ ಹೆಸರಿನಲ್ಲಿ ತೊಂದರೆ ಕೊಡುತ್ತಿದ್ದ ಹಿನ್ನೆಲೆಯಲ್ಲಿ ಮಗಳನ್ನು ಊರು ಬಿಡಿಸಿ, ಸಂಬಂಧಿಕರ ಮನೆಯಲ್ಲಿ ಇರಿಸಿದ್ದಕ್ಕೆ ಪಾಗಲ್ ಪ್ರೇಮಿ ಪೋಷಕರ ಮೇಲೆ ಹಲ್ಲೆ ಮಾಡಿರುವ ಘಟನೆ ಸಿಂಧನೂರು ತಾಲೂಕಿನ ಆರ್.ಹೆಚ್.ಕ್ಯಾಂಪ್ ೩ರಲ್ಲಿ ನಡೆದಿದ್ದು, ತಡವಾಗಿ ಬೆಳೆಕಿಗೆ ಬಂದಿದೆ.
ಪ್ರಣವ್ ಮತ್ತು ಈತನ ಗ್ಯಾಂಗ್ ಯುವತಿಯ ಪೋಷಕರ ಮೇಲೆ ಹಲ್ಲೆ ಮಾಡಿದೆ. ಯುವತಿ ತಂದೆ ಹೀರಾ ಮೋಹನ್ ಹಾಗೂ ತಾಯಿ ಶೃತಿ ಮಂಡಲ್, ಸೋದರ ಹೀಮಂತು, ಸಂಬಂಧಿ ಶುಬ್ರತೋ ಹಲ್ಲೆಗೊಳಗಾದವರು.
ಆರೋಪಿ ಪ್ರಣವ್ ಹಲ್ಲೆಗೊಳಗಾದ ಹೀರಾ ಮೋಹನ್ ಮಂಡಲ್ ಅವರ ಮಗಳಿಗೆ ಪ್ರೀತಿ ಪ್ರೇಮ ಅಂತ ತೊಂದರೆ ಕೊಡುತ್ತಿದ್ದನು. ಹೀಗಾಗಿ ಹೀರಾ ಮೋಹನ್ ಮಂಡಲ್ ಅವರು ಮಗಳನ್ನು ಊರು ಸಂಬಂಧಿಕರ ಮನೆಯಲ್ಲಿರಿಸಿದ್ದರು. ಈ ವಿಚಾರ ತಿಳಿದ ಆರೋಪಿ ಪ್ರಣವ್ ಆಕೆಯನ್ನು ಯಾಕೆ ಬೇರೆಡೆ ಕಳುಹಿಸಿದ್ದೀರಿ, ಆಕೆಯನ್ನು ಊರಿಗೆ ಕರೆತನ್ನಿ ಅಂತ ಯುವತಿಯ ತಂದೆಗೆ ಕಿರುಕುಳ ನೀಡಿದ್ದಾನೆ.
ಬಳಿಕ ಆರೋಪಿ ಪ್ರಣವ್ ಯುವತಿ ತಂದೆ ಹೀರಾ ಮೋಹನ್ ಮಂಡಲ್?ಗೆ ಕತ್ತು ಹಿಡಿದು ನೆಲಕ್ಕೆ ಕೆಡವಿ, ದೊಡ್ಡ ಕಲ್ಲು ತೆಗೆದುಕೊಂಡು ಬಲಗಾಲಿನ ಮೇಲೆ ಹಾಕಿದ್ದಾನೆ. ಕಣ್ಣಿಗೆ ಕಲ್ಲಿನಿಂದ ಜಜ್ಜಿ ಗಾಯಗೊಳಿಸಿದ್ದಾನೆ. ಅಲ್ಲದೆ ಗ್ರಾಮದಲ್ಲಿ ಅಟ್ಟಾಡಿಸಿ ಹೊಡೆಯುತ್ತಿದ್ದನು. ಇದನ್ನು ಕಂಡ ಸಂಬಂಧಿ ಶುಬ್ರತೋ ಮಂಡಲ್ ಬಿಡಿಸಲು ಹೋದಾಗ, ಪ್ರಣವ್‌ನ ಮೂವರು ಸಹಚರರು ಶುಬ್ರತೋ ಅನ್ನು ನೆಲಕ್ಕೆ ಕೆಡವಿ ಹೊಟ್ಟೆಗೆ ಒದ್ದು, ಮುಖಕ್ಕೆ ಗುದ್ದಿ, ಜೀವ ಬೆದರಿಕೆ ಹಾಕಿದ್ದಾರೆ.
ಬಳಿಕ ಆರೋಪಿಗಳು ಯುವತಿಯ ಮನೆಗೆ ಬಂದು, ಯುವತಿಯ ತಾಯಿಗೆ “ಅವಾಚ್ಯ ಶಬ್ದಗಳಿಂದ ನಿಂದಿಸಿ ನಿನ್ನ ಮಗಳನ್ನು ಊರಿಗೆ ಕರೆಸು, ಇಲ್ಲದಿದ್ದರೆ ನಿನ್ನ ಮೇಲೆ ಅತ್ಯಾಚಾರ ಮಾಡುತ್ತೇವೆ” ಎಂದು ಬೈದು ಸೀರೆ ಹಿಡಿದು ಎಳೆದಾಡಿ, ಮುಖಕ್ಕೆ ಗುದ್ದಿದ್ದಾರೆ. ಬಳಿಕ ನೆಲಕ್ಕೆ ಕೆಡವಿ ಒದ್ದು ಅವಾಚ್ಯ ಶಬ್ದಗಳಿಂದ ಬೈಯ್ದು ಬಟ್ಟೆ ಹಿಡಿದು ಎಳೆದಾಡಿದ್ದಾರೆ. ಬಳಿಕ “ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿದ್ದಾರೆ.
ಘಟನೆಯಲ್ಲಿ ಹಲ್ಲೆಗೊಳಗಾದ ಯುವತಿಯ ತಂದೆ ಹೀರಾ ಮೋಹನ್ ಮಂಡಲ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಂಧನೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಯುವತಿಯ ತಾಯಿಯನ್ನು ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.