ವಿದ್ಯುತ್ ನೀಡದಿದ್ದರೆ ಚುನಾವಣೆ ಬಹಿಷ್ಕಾರ ಎಚ್ಚರಿಕೆ
ಕೆಜಿಎಫ್.ಏ.೨೦-ಕೆಜಿಎಫ್ ಆಂಡರ್‌ಸನ್‌ಪೇಟೆ-೨ ಎಫ್-೧೪ ಫೀಡರ್ ವಿಭಾಗದಿಂದ ಹಳ್ಳಿಗಳಿಗೆ ಸರಬರಾಜು ಆಗುವ ವಿದ್ಯುತ್ ವೋಲ್ಟೇಜ್ ಕಡಿಮೆ ಬರುತ್ತಿದ್ದು ಬೆಳೆಗಳು ಒಣಗುತ್ತಿದ್ದು ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದ ಕಾರಣ ಇದೇ ಏ.೨೬ ರಂದು ನಡೆಯಲಿರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಫ್-೧೪ ಫೀಡರ್ ಗ್ರಾಮಗಳ ಗ್ರಾಮಸ್ಥರು ಎಚ್ಚರಿಸಿದರು.
ನಗರದ ಹೊರವಲಯದ ಚಾಂಪಿಯನ್‌ರೀಫ್ಸ್‌ನ ಕಾರ್ಯಪಾಲಕ ಅಭಿಯಂತರರ ಕಚೇರಿ ಬಳಿ ಪ್ರತಿಭಟನೆ ನಡೆಸಿ ಮಾತನಾಡಿದ ರೈತರು, ಎಫ್-೧೪ ಫೀಡರ್‌ಗೆ ಸೇರಿದ ಮಜರಾ ಪುರ, ಬೋಡಗುರ್ಕಿ, ಲಕ್ಕೇನಹಳ್ಳಿ, ಬ್ಯಾಟರಾಯನಹಳ್ಳಿ, ತಿರುಮಲಹಳ್ಳಿ, ವಿರುಪಾಕ್ಷಿಪುರ ಗ್ರಾಮಗಳಿಗೆ ನಿರಂತರವಾಗಿ ವಿದ್ಯುತ್ ಸಮಸ್ಯೆ ಕಾಡುತ್ತಿದ್ದು, ದಿನದ ೨೪ ಗಂಟೆಯಲ್ಲಿ ಕೇವಲ ೩ ಗಂಟೆ ಅವಧಿಯೂ ಸಹ ವಿದ್ಯುತ್ ನೀಡುತ್ತಿಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಪಂಪ್‌ಸೆಟ್‌ಗಳು ಕಾರ್ಯನಿರ್ವಹಿಸಲು ೩ ಫೇಸ್ ವಿದ್ಯುತ್ ಬೇಕಾಗಿದ್ದು, ಬೇರೆ ಫೀಡರ್‌ಗಳಲ್ಲಿ ೩೮೦ ರಿಂದ ೪೦೦ ವೋಲ್ಟೇಜ್ ಯಾವಾಗಲೂ ಇರುತ್ತದೆ. ಆದರೆ ಎಫ್-೧೪ ಫೀಡರ್‌ಗೆ ಮಾತ್ರ ೧೮೦ ರಿಂದ ೧೯೬ ವೋಲ್ಟೇಜ್ ಇರುವುದರಿಂದ ಮತ್ತು ಇದೂ ಸಹ ದಿನದ ಕೆಲವೇ ಗಂಟೆಗಳು ಮಾತ್ರ ಇರುವುದರಿಂದ ಇನ್ನಿಲ್ಲದ ಸಮಸ್ಯೆ ಸೃಷ್ಟಿಯಾಗಿದ್ದು, ರೈತರು ವಿದ್ಯುತ್‌ಗಾಗಿ ಪರಿತಪಿಸುವಂತಾಗಿದೆ ಎಂದು ಘೋಷಣೆಗಳನ್ನು ಕೂಗಿದರು.
ಸಮರ್ಪಕ ವಿದ್ಯುತ್ ಪೂರೈಕೆಯಾಗದೇ ಇರುವುದರಿಂದ ರೈತರು ಲಕ್ಷಾಂತರ ರೂ ಸಾಲ ಸೋಲ ಮಾಡಿ ಬೆಳೆದ ಬೆಳೆಗಳು ಒಣಗುತ್ತಿವೆ. ಇತ್ತ ಮಾಡಿದ ಸಾಲವನ್ನು ತೀರಿಸಲಾಗದೇ, ಬೆಳೆದ ಬೆಳೆ ಕೈಗೆ ಬಾರದೇ ಜನರು ಮತ್ತು ಜಾನುವಾರುಗಳು ಆಹಾರ, ಮೇವು ಮತ್ತು ನೀರಿಲ್ಲದೇ ಇನ್ನಿಲ್ಲದ ಕಷ್ಟವನ್ನು ಎದುರಿಸುವಂತಾಗಿದ್ದು, ಇದಕ್ಕೆ ನೇರ ಹೊಣೆ ಬೆಸ್ಕಾಂ ಇಲಾಖೆ ಅಧಿಕಾರಿಗಳಾಗಿದ್ದು, ಚುನಾವಣೆ ಬಹಿಷ್ಕರಿಸುವುದಕ್ಕೆ ಸಂಬಂಧಿಸಿದ ಮನವಿ ಪತ್ರವನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸುವುದಾಗಿ ತಿಳಿಸಿದರು.
ಎಫ್-೧೪ ಫೀಡರ್ ಬ್ರಿಟೀಷರ ಕಾಲಕ್ಕೆ ಸೇರಿದ್ದಾಗಿದ್ದು, ಆ ಕಾಲದಲ್ಲಿಯೇ ನಿರಂತರವಾಗಿ ದಿನದ ೨೪ ಗಂಟೆ ವಿದ್ಯುತ್ ಪೂರೈಕೆ ಮಾಡಬೇಕೆಂಬ ಸರ್ಕಾರದ ಆದೇಶವಿದ್ದರೂ ಸಹ ಪಾಲನೆಯಾಗುತ್ತಿಲ್ಲ. ಸಿಂಗಲ್ ಫೇಸ್ ವಿದ್ಯುತ್ ಸಹ ಸಮಯಕ್ಕೆ ಸರಿಯಾಗಿ ನೀಡದೇ ಇರುವುದರಿಂದ, ಎಫ್-೧೪ ಫೀಡರ್‌ಗೆ ಸೇರಿದ ಗ್ರಾಮಗಳೆಲ್ಲವೂ ಗಡಿ ಮತ್ತು ಕಾಡಂಚಿಗೆ ಹೊಂದಿಕೊಂಡಿರುವುದರಿಂದ ಕಾಡು ಪ್ರಾಣಿಗಳ ಹಾವಳಿಯಿಂದ ನರಳುವಂತಾಗಿದೆ. ಇದಕ್ಕೆ ತಾಜಾ ಉದಾಹರಣೆ ಕಳೆದ ಒಂದು ವಾರದ ಹಿಂದೆ ಪೋಲೇನಹಳ್ಳಿ ಗ್ರಾಮದಲ್ಲಿ ರೈತನೊಬ್ಬ ಕಾಡಾನೆ ತುಳಿತಕ್ಕೆ ಸಿಕ್ಕಿ ಅಸು ನೀಗಿರುವುದಾಗಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಮಜರಾ ಪುರ ಗ್ರಾಪಂ ಸದಸ್ಯ ಶ್ರೀನಿವಾಸ್ ಎಂ, ಮಾಜಿ ಸದಸ್ಯ ರಾಜ್‌ಕುಮಾರ್, ಪಿ.ಜಿ.ಮಹೇಂದ್ರ, ವೆಂಕಟೇಶಪ್ಪ, ಮುನಿಸ್ವಾಮಿ, ಪ್ರೇಮಾವತಿ, ಕೋದಂಡಪ್ಪ, ಶಿವಕುಮಾರ್, ಪವನ್‌ಕುಮಾರ್, ಲೋಕೇಶ್, ಶ್ರೀನಾಥ್.ಪಿ.ವಿ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಪ್ರತಿಭಟೆನಯಲ್ಲಿ ಭಾಗವಹಿಸಿದ್ದರು.
