ಲಾರಿ ಡಿಕ್ಕಿ ರೈಲು ಸಂಚಾರ ವ್ಯತ್ಯಯ
ಶಿವಮೊಗ್ಗ, ಏ. ೧೮: ಭದ್ರಾವತಿ ಪಟ್ಟಣದ ಅಂಡರ್ ಪಾಸ್ ಬಳಿ ಮೇಲ್ಭಾಗದ ಕಬ್ಬಿಣದ ಬ್ಯಾರಿಕೇಡ್ ಗೆ ಗುರುವಾರ ಮುಂಜಾನೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ, ಹಳಿಯಲ್ಲಿ ತಾಂತ್ರಿಕ ದೋಷ ಉಂಟಾಗಿತ್ತು. ಇದರಿಂದ ಶಿವಮೊಗ್ಗ ಭದ್ರಾವತಿ ನಡುವೆ ಎರಡು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾದ ಘಟನೆ ನಡೆದಿದೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ರೈಲ್ವೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಮರೋಪಾದಿಯಲ್ಲಿ ಹಳಿ ದುರಸ್ತಿ ಕಾರ್ಯ ನಡೆಸಿದ್ದಾರೆ. ರೈಲುಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ.
ಹಳಿ ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ, ಬೆಳಿಗ್ಗೆ ೪ ಗಂಟೆ ೪೫ ನಿಮಿಷಕ್ಕೆ ಶಿವಮೊಗ್ಗ ನಿಲ್ದಾಣ ತಲುಪಬೇಕಿದ್ದ ಮೈಸೂರು ತಾಳಗುಪ್ಪ ಏಕ್ಸ್’ಪ್ರೆಸ್ ರೈಲು ಬೆಳಿಗ್ಗೆ ೬.೪೫ ಕ್ಕೆ ತಲುಪಿದೆ. ಹಾಗೆಯೇ ಶಿವಮೊಗ್ಗದಿಂದ ಬೆಳಿಗ್ಗೆ ೫.೧೫ ನಿಮಿಷಕ್ಕೆ ಹೊರಡಬೇಕಿದ್ದ ಬೆಂಗಳೂರು ಜನ ಶತಾಬ್ದಿ ರೈಲು ೬ ಗಂಟೆ ೩೫ ನಿಮಿಷಕ್ಕೆ ಹೊರಟಿದೆ ಎಂದು ತಿಳಿದುಬಂದಿದೆ.
ಕಾರಣವೇನು : ಭದ್ರಾವತಿ ಪಟ್ಟಣದ ಅಂಡರ್ ಪಾಸ್ ಬಳಿ ಎತ್ತರದ ವಾಹನಗಳು ಸಂಚರಿಸದಂತೆ ತಡೆಯಲು ಕಬ್ಬಿಣದ ಬ್ಯಾರಿಕೇಡ್ ಹಾಕಲಾಗಿದೆ. ಆದರೆ ಸದರಿ ಬ್ಯಾರಿಕೇಡ್ ಗೆ ಲಾರಿಯೊಂದು ಡಿಕ್ಕಿ ಹೊಡೆದಿದೆ. ಚಾಲಕ ಲಾರಿ ನಿಲ್ಲಿಸದೆ ಪರಾರಿಯಾಗಿದ್ದಾನೆ. ಇದರಿಂದ ಕಬ್ಬಿಣದ ಬ್ಯಾರಿಕೇಡ್ ಮುರಿದುಬಿದ್ದಿದ್ದು, ಸ್ಥಳದ ಬಳಿ ಹಳಿಯಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ತಕ್ಷಣವೇ ರೈಲ್ವೆ ಇಲಾಖೆ ರೈಲುಗಳ ಸಂಚಾರ ಸ್ಥಗಿತಗೊಳಿಸಿ, ದುರಸ್ತಿ ಕಾರ್ಯ ನಡೆಸಿದೆ.