ಪರಮಾತ್ಮನನ್ನು ಅರಿಯುವುದೇ ಮನುಷ್ಯನ ಆದ್ಯ ಕರ್ತವ್ಯ: ಶಿವಕುಮಾರ ಸ್ವಾಮೀಜಿ
ಭಾಲ್ಕಿ:ಏ.16: ಮನುಷ್ಯನಾಗಿ ಹುಟ್ಟಿದ ಮೇಲೆ, ನಿಜ ತತ್ವವನ್ನು ತಿಳಿದು, ಪರಮಾತ್ಮನನ್ನು ಅರಿಯುವುದೇ ಮನುಷ್ಯ ಜೀವನದ ಆದ್ಯ ಕರ್ತವ್ಯವಾಗಿದೆ ಎಂದು ಚಿದಂಬರಾಶ್ರಮ ಶ್ರೀ ಸಿದ್ದಾರೂಢ ಮಠ ಬೀದರಿನ ಡಾ| ಶಿವಕುಮಾರ ಮಹಾಸ್ವಾಮಿಗಳು ಪ್ರತಿಪಾದಿಸಿದರು.
ತಾಲೂಕಿನ ಚಳಕಾಪೂರ ಗ್ರಾಮದ ಬ್ರಹ್ಮವಿದ್ಯಾಶ್ರಮ ಶ್ರೀ ಸಿದ್ಧಾರೂಢ ಮಠದಲ್ಲಿ, ಸೋಮವಾರ ಸದ್ಗುರು ಶ್ರೀ ಸಿದ್ದಾರೂಢ ಮಹಾಸ್ವಾಮಿಗಳ 188ನೇ ಜಯಂತಿಮಹೋತ್ಸವದ 5ನೇ ದಿನದ ಪ್ರವಚನ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು. ಪರಮಾತ್ಮ ನಮ್ಮ ಒಳಗೆ ಬರಲು ಸದಾ ಪ್ರಯತ್ನಿಸುತ್ತಾನೆ, ಆದರೆ ನಾವು ಅವನ ಬಾಗಿಲು ಮುಚ್ಚಿದ್ದೇವೆ. ಪರಮಾತ್ಮನು ಕರುಣಾಮಯಿ, ಅವನು ಎಲ್ಲರನ್ನೂ ಕರುಣಿಸಲು ಕಾತರಿಸುತ್ತಾನೆ, ಆದರೆ ನಾವು ವಿಷಯ ವ್ಯಾಮೋಹಕ್ಕೆ ಒಳಗಾಗಿ ಅವನ ಕರುಣಿ ಸ್ವೀಕರಿಸಲು ತಯ್ಯಾರಿಲ್ಲ. ಶರೀರ, ಮನಸ್ಸು, ಬುದ್ಧಿಯನ್ನೇ ತಾನೆಂದು ತಿಳಿದು ಮನುಷ್ಯ ದುಖಿತನಾಗಿದ್ದಾನೆ. ಮನುಷ್ಯನು ತಾನಾರೆಂದು ತಿಳಿದಾಗ ಮಾತ್ರ ಸುಖ ಪ್ರಾಪ್ತಿ. ರೇತು, ರಕ್ತದಿಂದ ತಯ್ಯಾರಾದ ಶರೀರವೆ ನಾನೆಂದು ತಿಳಿಯುತ್ತಿರುವ ಮನುಷ್ಯ ಅಜ್ಞಾನದಿಂದ ಬಳಲುತ್ತಿದ್ದಾನೆ. ಸದ್ಗುರುವಿನ ಕೃಪೆಯಿಂದ ನಿಜ ಜ್ಞಾನ ವಾದಾಗ ಪರಮಾನಂದ ಪ್ರಾಪ್ತಿಯಾಗುದು. ಶರೀರ, ಇಂದ್ರೀಯಗಳು, ಮನೋಮಯ ಕೋಷ ಮನಸ್ಸು, ವಿಜ್ಞಾನಮಯ ಕೋಶ ಬುದ್ದಿ ಯಾವುದೂ ನೀನಲ್ಲ. ಇವೆಲ್ಲವೂ ಎಚ್ಚರದಲ್ಲಿ ಗೋಚರಿಸುತ್ತವೆ. ಆದರೆ ನಿದ್ರಾವಸ್ಥೆಯಲ್ಲಿರುವ ಪರಂಜ್ಯೋತಿ ಪರಮಾತ್ಮನೇ ನೀನಾಗಿರುವೆ ಎಂದು ಹೇಳಿದರು.
ಕಲಬುರಗಿಯ ಮಾತೋಶ್ರೀ ಲಕ್ಷ್ಮೀದೇವಿತಾಯಿ ಮಾತನಾಡಿ, ಭಗವಂತನ ಶ್ರೀಮುಖದಿಂದ ಹೊರಡುವ ಮಾತುಗಳೇ ಉಪನಿಷತ್ತುಗಳಾಗಿವೆ. ಉಪನಿಷತ್ತಿನ ಶ್ರವಣದಿಂದ ನಮ್ಮ ಅನಾದಿ ಕಾಲದ ಅಜ್ಞಾನ ಕೆಡಿಸುತ್ತದೆ. ನಿನ್ನ ಸ್ವರೂಪವೇ ಆನಂದ ಎಂದು ತಿಳಿಸುವುದೆ ಉಪನಿಷತ್ತಾಗಿದೆ ಎಂದು ಹೇಳಿದರು.
ಸಿದ್ಧರೂಢ ಮಠ ಯಳವಂತಗಿಯ ಪೂರ್ಣಾನಂದ ಸ್ವಾಮಿಗಳು ಮಾತನಾಡಿ, ಆನಂದ ಹೊರಗೆ ಹುಡುಕಬೇಡ, ವಾಸ್ತವಿಕ ಆನಂದ ಸ್ವರೂಪವೇ ನೀನಾಗಿದ್ದು, ಅಜ್ಞಾನಿಗಳು ವಿಷಯಾನಂದದಲ್ಲಿ ಕಾಲ ಕಳೆದರೆ, ಜ್ಞಾನಿಗಳು ಬ್ರಹ್ಮಾನಂದದಲ್ಲಿ ರಮಿಸುವರು ಎಂದು ಹೇಳಿದರು.
ಸಿದ್ಧಾರೂಢ ಮಠ ಇಂಡಿಯ ಡಾ| ಸ್ವರೂಪಾನಂದ ಸ್ವಾಮಿಗಳು ಮಾತನಾಡಿ, ಸದ್ಗುರು ಕೃಪೆ ಇಲ್ಲದೇ ಸ್ವರೂಪಜ್ಞಾನ ತಿಳಿಯುವುದಿಲ್ಲ, ಅದಕ್ಕಾಗಿ ಸದ್ಗುರುಗಳ ಕೃಪೆಗೆ ಪಾತ್ರರಾಗಿ ಜೀವನ ಸಾಗಿಸಬೇಕು ಎಂದು ಹೇಳಿದರು.
ಮಾತೋಶ್ರೀ ಆನಂದಮಯಿ ತಾಯಿ, ಶ್ರೀ ಸೋಮೇಶ್ವರ ಸ್ವಾಮಿಗಳು, ಶ್ರೀ ಜಡಿ ಸಿದ್ದೇಶ್ವರ ಸ್ವಾಮಿಗಳು ಆನಂದೋ ಬ್ರಹ್ಮೇತಿ ವ್ಯಜನಾತ್| ಆನಂದಾಧ್ಯೇವ ಖಲ್ವಿಮಾನಿ ಭುತಾನಿ ಜಾಯತೆ| ಎನ್ನುವ ವಿಷಯದ ಮೇಲೆ ಮಾತನಾಡಿದರು. ಶ್ರೀಮಠದ ಶ್ರೀ ಶಂಕರಾನಂದ ಮಹಾಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾತೋಶ್ರೀ ಸಿದ್ದೇಶ್ವರಿ ಮಾತೆ ಬೀದರ, ಶ್ರೀ ಗಣೆಶಾನಂದ ಮಹಾರಾಜರು ಬಬಚ್ಛಡಿ, ಶ್ರೀ ಸದ್ರೂಪಾನಂದ ಸ್ವಾಮಿಗಳು ಮಳಚಾಪೂರ, ಮಾತೋಶ್ರೀ ಅಮೃತಾನಂದ ಮಯಿ ಬೆಳ್ಳೂರ, ಶ್ರೀ ಪರಮಾನಂದ ಸ್ವಾಮಿ ಯಳಸಂಗಿ ಉಪಸ್ಥಿತರಿದ್ದರು.
ಇದೇವೇಳೆ ಸಂಪೂರ್ಣಾ ನಂದಕುಮಾರ ನೇಳಗೆ ಖಟಕ ಚಿಂಚೋಳಿ, ಶೃತಿ ಪ್ರಶಾಂತ ಸಿಂದೋಲ ಹುಮನಾಬಾದ, ಶಶಿಕಲಾ ಮಾರುತಿ ಹಳ್ಳಿಖೇಡೆ ನಾಮದಾಪುರವಾಡಿ, ಬಾಬುರಾವ ಬಂಡೆಪ್ಪಾ ಕೋಡಂಬಲ್ ರವರಿಂದ ಶ್ರೀ ಸಿದ್ಧಾರೂಢರ ಮೂರ್ತಿ ತುಲಾಭಾರ ಮತ್ತು ಪೂಜಾ ಶಿವಲಿಮಗ ಗುಣಜಿ ಚಳಕಾಪೂರ, ಹೃಷಿಕೇಶ ನಿಲೇಶ ಉಮರಜಕರ್ ಸೋಲಾಪೂರ ರವಂದ ಸದ್ಗುರು ಶ್ರೀ ಶಿವಕುಮಾರ ಮಹಾಸ್ವಾಮಿಗಳ ತುಲಾಭಾರ ಸೇವೆ ನಡೆಯಿತು. ಬಸವರಾಜ ಹುಲೆಪ್ಪನೋರ, ಪ್ರಭು ಮಾಸಲದಾರ, ಗುಂಡಪ್ಪಾ ರವರಿಂದ ಸಗೀತ ಸೇವೆ ನಡೆಯಿತು.
ಸದ್ಗುರು ಶಂಕರಾನಾಂದ ಸ್ವಾಮಿಗಳು ಸ್ವಾಗತಿಸಿದರು. ಉಪನ್ಯಾಸಕ ನರೇಂದ್ರ ಪಾಟೀಲ ನಿರೂಪಿಸಿದರು.