ಅಂಗನವಾಡಿಗಳಿಗೆ ಅಕ್ಕಿ ಖೋತಾ
ವಿಜಯಪುರ.ಏ೧೫: ಅಂಗನವಾಡಿಗೆ ಹೋಗುವ ಮಕ್ಕಳಿಗೆ ಮಧ್ಯಾಹ್ನದ ಸಮಯದಲ್ಲಿ ನೀಡುವ ಊಟಕ್ಕೆ ನೀಡುತ್ತಿದ್ದ ಅಕ್ಕಿ, ಪೂರೈಕೆಯಾಗದ ಕಾರಣ, ಒಂದು ತಿಂಗಳಿನಿಂದ ಅನ್ನಸಾಂಬಾರ್ ನೀಡಿಲ್ಲ. ಅದರ ಬದಲಿಗೆ ಪ್ರತಿನಿತ್ಯ ಗೋದಿ ಉಪ್ಪಿಟ್ಟು ನೀಡುತ್ತಿದ್ದಾರೆ. ಈ ಕಾರಣ, ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವುದಕ್ಕೆ ಮನಸ್ಸಿಲ್ಲ ಎಂದು ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.
ಅಂಗನವಾಡಿಯಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರು ಮಾಡಿಕೊಡುತ್ತಿದ್ದರು. ಚಿಕ್ಕಿ ಕೊಡುತ್ತಿದ್ದರು. ಮೊಟ್ಟೆ ಕೊಡುತ್ತಿದ್ದರು. ಒಂದು ತಿಂಗಳಿನಿಂದ ಗೋದಿ ಅಕ್ಕಿಯಲ್ಲಿ ಉಪ್ಪಿಟ್ಟು ಮಾಡಿಕೊಡುತ್ತಿದ್ದಾರೆ. ಚಿಕ್ಕಿ ಬದಲಿಗೆ ಸಿರಿಧಾನ್ಯಗಳ ಮಾಲ್ಟ್ ನಿಂದ ತಯಾರಿಸಿರುವ ಬಿಲ್ಲೆಟ್ ಬಾಲ್ ಕೊಡುತ್ತಿದ್ದಾರೆ. ಮಕ್ಕಳು ಪ್ರತಿದಿನ ಅದನ್ನು ತಿನ್ನಲು ಮಾಡಲು ಸಾಧ್ಯವೇ? ಅಂಗನವಾಡಿ ಕಾರ್ಯಕರ್ತೆಯರನ್ನು ಕೇಳಿದರೆ, ಈಗ ಅಕ್ಕಿ ಪೂರೈಕೆಯಾಗುತ್ತಿಲ್ಲ. ಗೋಧಿ ನುಚ್ಚು ಮಾತ್ರ ಬರುತ್ತಿದೆ. ಎನ್ನುತ್ತಾರೆ. ಎರಡು ದಿನಗಳಿಗೊಮ್ಮೆಯಾದರೂ ಆಹಾರದಲ್ಲಿ ಬದಲಾವಣೆ ಬೇಡವೇ? ಪ್ರತಿದಿನ ಗೋಧಿ ಅಕ್ಕಿ ಉಪ್ಪಿಟ್ಟುಕೊಟ್ಟರೆ, ಜೀರ್ಣಿಸಿಕೊಳ್ಳುವ ಶಕ್ತಿ ಮಕ್ಕಳಲ್ಲಿ ಇರುತ್ತದೆಯೇ? ಸರ್ಕಾರದವರಿಗೆ ಅಷ್ಟು ಮಾತ್ರ ಗೊತ್ತಾಗುವುದಿಲ್ಲವೇ ಎಂದು ಪೋಷಕರಾದ ನಿರ್ಮಲ, ಸೌಭಾಗ್ಯಮ್ಮ, ತೇಜಸ್ವಿನಿ, ಹಾಗೂ ಗಾಯಿತ್ರಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಬೇಸಿಗೆ ರಜೆ ಕೊಡಿ: ಪ್ರಾಥಮಿಕ ಶಾಲೆಗಳಿಂದ ಹಿಡಿದು, ಎಲ್ಲಾ ಶಾಲೆಗಳ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಕೊಟ್ಟಿದ್ದಾರೆ. ಅದೇ ರೀತಿ ಅಂಗನವಾಡಿ ಮಕ್ಕಳಿಗೂ ರಜೆ ಕೊಡಿ, ಬಿಸಿಲಿನ ತಾಪಮಾನ ಜಾಸ್ತಿಯಾಗುತ್ತಿದೆ. ಮಕ್ಕಳು ಕೇಂದ್ರಗಳಲ್ಲಿ ಇರುವುದಕ್ಕೆ ಕಷ್ಟವಾಗಿದೆ. ಮಕ್ಕಳನ್ನು ಕರೆದುಕೊಂಡು ಬಂದು ಬಿಡುವುದು, ಪುನಃ ಕರೆದುಕೊಂಡು ಹೋಗುವುದು ತುಂಬಾ ಕಷ್ಟವಾಗುತ್ತಿದೆ. ಬಿಸಿಲಿನ ತಾಪಮಾನವನ್ನು ಮಕ್ಕಳು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಬೆಳಿಗ್ಗೆ ೮ ಗಂಟೆಯಿಂದ ಮದ್ಯಾಹ್ನ ೧೨ ಗಂಟೆಯವರೆಗೂ ಸಮಯ ನಿಗದಿ ಮಾಡಿದ್ದಾರಂತೆ, ಬೆಳಿಗ್ಗೆ ೮ ಗಂಟೆಯೊಳಗೆ ಮಕ್ಕಳನ್ನು ನಿದ್ದೆಯಿಂದ ಎಬ್ಬಿಸಿ, ಅವರನ್ನು ಕಳುಹಿಸುವುದು, ಮಧ್ಯಾಹ್ನ ೧೨ ಗಂಟೆಯಲ್ಲಿ ಸುಡುವ ಬಿಸಿಲಿನಲ್ಲಿ ಹೋಗಿ ಅವರನ್ನು ಕರೆದುಕೊಂಡು ಬರುವುದು ತುಂಬಾ ಕಷ್ಟವಾಗುತ್ತದೆ ಆದ್ದರಿಂದ ಅಂಗನವಾಡಿಗಳಿಗೂ ಮೇ.೨೬ ರವರೆಗೂ ರಜೆ ಘೋಷಣೆ ಮಾಡಬೇಕು ಎಂದು ಪೋಷಕರು ಒತ್ತಾಯಿಸಿದರು.