ಡಾ. ಅಜಯಸಿಂಗ ಒಪ್ಪಿದರೆ ಈ ಭಾಗದ ನೀರಿನ ಸಮಸ್ಯೆ ನಿವಾರಣೆಗೆ ಉತ್ತಮ ಯೋಜನೆಗಳು ಜಾರಿ: ಜಲತಜ್ಞ ರಾಜೇಂದ್ರಸಿಂಗ್
ಕಲಬುರಗಿ:ಏ.11: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯಸಿಂಗ್ ಅವರು ಒಪ್ಪಿಗೆ ಕೊಟ್ಟರೆ ಈ ಭಾಗದ ನೀರಿನ ಸಮಸ್ಯೆ ಪರಿಹರಿಸಲು ಉತ್ತಮವಾದ ಯೋಜನೆಗಳನ್ನು ರೂಪಿಸಲಾಗುವುದು ಎಂದು ವಿಶ್ವ ಜಲ ತಜ್ಞ ರಾಜೇಂದ್ರಸಿಂಗ್ ಅವರು ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳು ತೀವ್ರ ಬರಗಾಲದಿಂದ ಬಳಲುತ್ತಿದ್ದು, ನೀರಿನ ಅಭಾವವಿದ್ದು, ಅದರ ನಿರ್ವಹಣೆ ಕುರಿತು ಡಾ. ಅಜಯಸಿಂಗ್ ಅವರೊಂದಿಗೆ ಚರ್ಚಿಸಿದ್ದೇನೆ. ಡಾ. ಅಜಯಸಿಂಗ್ ಅವರು ಸಹ ಈ ಕುರಿತು ಆಸಕ್ತಿ ತೋರಿದ್ದಾರೆ ಎಂದರು.
ಅತೀವೃಷ್ಟಿ ಹಾಗೂ ಬರಗಾಲಕ್ಕೆ ಪ್ರತಿಕೂಲ ವಾತಾವರಣವೇ ಕಾರಣವಾಗಿದ್ದು, ಇದೀಗ ಜಗತ್ತಿನಾದ್ಯಂತ ಜನಾಂಗೀಯ ದ್ವೇಷ ನಡೆದಿಲ್ಲ. ಈಗ ನೀರಿಗಾಗಿ ಯುದ್ಧ ನಡೆದಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಜಗತ್ತು ಈ ಯುದ್ಧದಿಂದ ಮುಕ್ತವಾಗಿ ಶಾಂತಿ ನೆಲೆಸಬೇಕಾದರೆ ನೀರಿನ ಸಂರಕ್ಷಣೆ ಹಾಗೂ ಬಳಕೆ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ನೀರಿಲ್ಲದೆ ಬದುಕಿಲ್ಲ ಎಂಬುದನ್ನು ಮನಗಾಣಿಸಬೇಕಾಗಿದೆ ಎಂದು ಪ್ರತಿಪಾದಿಸಿದರು.
ರಾಜಸ್ತಾನ್, ಉತ್ತರ ಪ್ರದೇಶ್, ಮಧ್ಯಪ್ರದೇಶಕ್ಕಿಂತ ಮೂರು ಪಟ್ಟು ಕರ್ನಾಟಕದಲ್ಲಿ ಹೆಚ್ಚು ಮಳೆಯಾಗುತ್ತದೆ. ಹೀಗಾಗಿ ಈ ರಾಜ್ಯದ ಜನ ನೀವು ದೇವರ ಪ್ರೀತಿಯ ಮಕ್ಕಳಾಗಿದ್ದೀರಿ ಎಂದು ಹೇಳಿದ ಅವರು, ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ನೀರಿನ ಉಪಯೋಗದ ದಕ್ಷತೆ ಹೆಚ್ವಿಸಬೇಕಾದರೆ, ನೀರಿನ ಬಗ್ಗೆ ಪ್ರೇಮ ಬೆಳೆಸಿಕೊಳ್ಳಬೇಕು. ನೀರಿಲ್ಲದೆ ಬದುಕುಲಾರೆವು ಎಂಬ ಜಲ ಸಾಕ್ಷರತೆ ಪ್ರಮಾಣ ಹೆಚ್ಚಿಸಬೇಕಾಗಿದೆ ಎಂದರು.
ಮಳೆ ನೀರನ್ನು ಭೂಮಿಯ ಒಡಲಲ್ಲಿ ಸಂಗ್ರಹಿಸಿದರೆ ಆ ಸೂರ್ಯನಿಂದಲೂ ನೀರನ್ನು ಕದಿಯಲು ಬರುವುದಿಲ್ಲ. ಇದೊಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದ್ದ ಹಾಗೆ. ಕ್ರಾಪ್ ಪ್ಯಾಟೆನಿಟಿ ಹಾಗೂ ರೇನ್ ಪ್ಯಾಟರ್ನಿಟಿ ಮಧ್ಯೆ ಲಿಂಕ್ ಬೆಳೆಸಬೇಕಾಗಿದೆ ಎಂದು ಅವರು ಕಾಳಜಿ ವ್ಯಕ್ತಪಡಿಸಿದರು.
ದೊಡ್ಡ ದೊಡ್ಡ ಅಣೆಕಟ್ಟು ನಿರ್ಮಾಣ ಮಾಡುವುದರಿಂದ ನದಿಗಳನ್ನು ಕೊಂದಂತಾಗುತ್ತಿದ್ದು, ಸಣ್ಣ ಸಣ್ಣ ಬಾವಿ, ಕೆರೆ ಹಾಗೂ ಚೆಕ್ ಡ್ಯಾಮ್ ಗಳನ್ನು ನಿರ್ಮಿಸುವ ಮೂಲಕ ನೀರಿನ ಸಂರಕ್ಷಣೆ ಮಾಡಬಹುದು ಎಂದು ಅವರು ವಿವರಿಸಿದರು.
ನನ್ನ ಈ ಜನ ಹೋರಾಟದ ಅಭಿಯಾನದ ಅಂಗವಾಗಿ ನಮ್ಮಲ್ಲಿ 30 ನದಿಗಳಿಗೆ ಮರುಜೀವ ಬಂದಿದೆ. ಸುಮಾರು 3000 ಜನ ಬಂದೂಕು ಬಿಟ್ಟಿದ್ದಾರೆ. 5 ಲಕ್ಷಕ್ಕೂ ಹೆಚ್ಚು ಜನ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ಸೂಕ್ತ ನೀರು ನಿರ್ವಹಣೆ ಮಾಡುತ್ತಿರುವುದರಿಂದ ನಮ್ಮಲ್ಲಿ 10 ಲಕ್ಷ 800 ಕಿ.ಮೀ. ವ್ಯಾಪ್ತಿಯಲ್ಲಿ ಪ್ಲಡ್ ಮತ್ತು ಡ್ರಾಟ್ ಬರುತ್ತಿಲ್ಲ ಎಂದು ಅವರು ಹೇಳಿದರು.
ಜಲ ಸಾಕ್ಷರತೆಯ ಜೊತೆಗೆ ಸಾಮೂಹಿಕ ಪ್ರಯತ್ನ ಅಗತ್ಯವಾಗಿದೆ. ಈ ದಿಸೆಯಲ್ಲಿ ಜನರಿಗಾಗಿ ಇರುವ ಸರ್ಕಾರ ದಿಟ್ಟ ಹೆಜ್ಜೆ ಇಡಬೇಕಾಗಿದೆ ಎಂದು ತಿಳಿಸಿದ ಅವರು, ಮನುಷ್ಯನ ಆರೋಗ್ಯ ಕಾಪಾಡುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದುದು ಭೂಮಿಯ ಆರೋಗ್ಯ ಕಾಪಾಡುವುದು ಆಗಿದೆ. ನಾವು ಮನಸ್ಸು ಮಾಡಿದರೆ ಇತಿಹಾಸವನ್ನು ಬೇಗ ಬದಲಾಯಿಸಬಹುದು. ಆದರೆ ಭೂಗೋಳವನ್ನು ಬೇಗ ಬದಲಾಯಿಸಲಾಗುವುದಿಲ್ಲ. ಹೀಗಾಗಿ ಜಲ ಸಾಕ್ಷರತೆ ಅಗತ್ಯವಾಗಿದೆ ಎಂದರು.