ಶರಣರು ಮಾನವ ಕುಲವನ್ನೇ ಒಂದುಗೂಡಿಸಿದವರು: ಅಂಬಾರಾಯ ಬಿರಾದಾರ
ಕಲಬುರಗಿ:ಏ.9:ಬಸವಾದಿ ಶರಣರು ಇಡೀ ಮಾನವ ಕುಲವನ್ನೇ ಒಂದುಗೂಡಿಸಿ ಜಾತಿ, ಮತ, ಪಂಥ ಎನ್ನದೆ ಸದೃಢ ಸಮಾಜ ನಿರ್ಮಿಸಿದ ಮಹಾನ ಶರಣರು ಎಂದು ಶರಣ ಚಿಂತಕರಾದ ಅಂಬಾರಾಯ ಬಿರಾದಾರ ಜಂಬಗಾ ಹೇಳಿದರು.
ಕಲಬುರಗಿ ನಗರದ ಭವಾನಿ ನಗರದಲ್ಲಿರುವ ಬಬಲಾದ ಮಠದಲ್ಲಿ ಸೋಮವಾರ 205ನೇ ಶಿವಾನುಭವಗೋಷ್ಟಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತ ಬೇಕು ಬೇಕು ಎಂದವನು ಬಡವನಾದ, ಸಾಕು ಎಂದವನು ಸಂತೃಪ್ತಿ ಜೀವನ ನಡೆಸಿ ಶರಣನಾದ. ಶರಣರು ಕೇವಲ ಮತ್ತೊಬ್ಬರಿಗೆ ಉಪದೇಶ ನೀಡದೆ, ನುಡಿದಂತೆ ನಡೆದು ಅಮರರಾಗಿ ನಮ್ಮೆಲ್ಲರಿಗೂ ಆದರ್ಶ ವಾದ ಮಹಾನ ವ್ಯಕ್ತಿ ಗಳಾಗಿದ್ದಾರೆ. ಇಂದಿನ ಸಂದರ್ಭಗಳಲ್ಲಿ ಶರಣರ ವಿಚಾರಗಳು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸುಂದರ ಸಮಾಜ ನಿರ್ಮಿಸಬೇಕು.ಶರಣರ ಹಲವಾರು ವಚನಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಸಮಾಜ ಪರಿವರ್ತನೆ ಗೊಳಿಸಿದ್ದಾರೆ. ವಚನ ಎಂದರೆ ಪ್ರಮಾಣ, ವಚನ ನೀಡಿದ ವ್ಯಕ್ತಿ ಯಾವುದೇ ರೀತಿಯ ಭ್ರಷ್ಟನಾಗಲಾರನು ಒಳ್ಳೆಯ ಸುಸಂಸ್ಕೃತ ವ್ಯಕ್ತಿಯಾಗುತ್ತಾನೆ. ಮುಂದೆಯೂ ಕೂಡ ಒಳ್ಳೆಯ ಸಮಾಜ ಆಗಲೆಂದು ವಚನದ ಭಂಡಾರವೇ ಸಮಾಜಕ್ಕೆ ಅರ್ಪಿಸಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು. ಮುಖ್ಯ ಅತಿಥಿಗಳಾಗಿ ತಾಜ ಸುಲ್ತಾನಪುರ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಸಂಜೀವಕುಮಾರ ಜವರಕರ್ ಮಾತನಾಡುತ್ತಾ ಇಂದಿನ ದಿನಮಾನಗಳಲ್ಲಿ ಕೆಲವು ಜನರು ಶರಣರಿಗೆ ಕೇವಲ ಕೆಲವೇ ಜಾತಿಗಳಿಗೆ ಸೀಮಿತ ಮಾಡುತ್ತಿರುವದು ವಿಷಾದಕರ ಸಂಗತಿ. ಶರಣರು ಇಡೀ ಮಾನವ ಕುಲವನ್ನೇ ಒಂದಾಗಿಸಿ ಸರ್ವರನ್ನು ಹಿತ ಬಯಸಿದ ಮಹಾನ ವ್ಯಕ್ತಿಗಳಾಗಿದ್ದಾರೆ ಎಂದು ಹೇಳಿದರು. ನ್ಯಾಯವಾದಿ ಹಣಮಂತರಾಯ ಅಟ್ಟೂರ ಸ್ವಾಗತಿಸಿದರು. ಸಂಗಮೇಶ ನಾಗೂರ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಬಸವರಾಜ ಬಿರಾದಾರ ಮುನೋಳ್ಳಿ, ರೇವಣಸಿದ್ದಯ್ಯ ಶಾಸ್ತ್ರಿ, ಓಂ ಹಿರೇಮಠ,
ಶಾಂತಲಿಂಗ ಕಲಬುರಗಿ, ಸಿದ್ದಣ್ಣ ವಾಡಿ, ಶರಣು ವರನಾಳ, ರಾಜೇಂದ್ರ ಹೂಗಾರ, ನಿರ್ಮಲ ಮಠಪತಿ, ಈರಮ್ಮ ಮಠಪತಿ, ಭಾಗ್ಯಶ್ರೀ ಡೊಂಗರಗಾಂವ, ಲಕ್ಷ್ಮೀಬಾಯಿ ಪೂಜಾರಿ, ಪಾರ್ವತಿ ಕುರಕೋಟಿ, ನೀಲಮ್ಮ ಸುತಾರ್, ಶಿವಕುಮಾರ ಸಾವಳಗಿ, ಗುರುರಾಜ ಹಸರಗುಂಡಗಿ, ರೇಣುಕಾ ಘನಾತೆ ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಉಪನ್ಯಾಸಕರಿಗೂ ಹಾಗೂ ಅತಿಥಿಗಳನ್ನು ಸನ್ಮಾನಿಸಲಾಯಿತು.