ಧರ್ಮಸ್ಥಳದಲ್ಲಿ ೨೬ನೆ ವರ್ಷದ ಭಜನಾ ತರಬೇತಿ:
ಉಜಿರೆ: ಧರ್ಮಸ್ಥಳದಲ್ಲಿ ೨೬ನೇ ವರ್ಷದ ಭಜನಾ ತರಬೇತಿ ಕಮ್ಮಟವು ಸೆ. ೨೨ ರಿಂದ ೨೯ರ ವರೆಗೆ ನಡೆಯಲಿದೆ ಎಂದು ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಮತ್ತು ಕಾರ್ಯದರ್ಶಿ ಎ.ವಿ. ಶೆಟ್ಟಿ ಹಾಗೂ ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲಿಯಾನ್ ತಿಳಿಸಿದ್ದಾರೆ.
ಭಜನಾ ತರಬೇತಿಯಲ್ಲಿ ಶೃತಿ, ರಾಗ, ತಾಳ, ಲಯ ಬದ್ಧವಾಗಿ ಹಾಡುವ ವಿಧಾನ, ನೃತ್ಯಭಜನೆ, ಪ್ರಾತ್ಯಕ್ಷಿಕೆ, ತಜ್ಞರಿಂದ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಸೆ. ೨೯ ರಂದು ೩೦೦ ಭಜನಾ ತಂಡಗಳ ೫೦೦ ಭಜನಾಪಟುಗಳಿಂದ ಶೋಭಾಯಾತ್ರೆ ಹಾಗೂ ಅಮೃತವರ್ಷಿಣಿ ಸಭಾಭವನದಲ್ಲಿ ನೃತ್ಯ ಭಜನೆಯೊಂದಿಗೆ ಭಜನೋತ್ಸವ ನಡೆಯಲಿದೆ.
ಉದ್ಘಾಟನಾ ಸಮಾರಂಭ: ಸೆ. ೨೨ ರಂದು ಭಾನುವಾರ ಪೂರ್ವಾಹ್ನ ಹನ್ನೊಂದು ಗಂಟೆಗೆ ಮಹೋತ್ಸವ ಸಭಾಭವನದಲ್ಲಿ ತರಬೇತಿ ಕಮ್ಮಟವನ್ನು ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಉದ್ಘಾಟಿಸುವರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು.
ಮಾಣಿಲದ ಮೋಹನದಾಸ ಸ್ವಾಮೀಜಿ ಶುಭಾಶಂಸನೆ ಮಾಡುವರು.