ಚುನಾವಣಾ ಆಯೋಗಕ್ಕೆ ಸುಳ್ಳು ಪ್ರಮಾಣ ಪತ್ರ ನೀಡಿರುವ ಸುನೀಲ್ ಬೋಸ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ. 06- ಕಾಂಗ್ರೆಸ್ ಅಭ್ಯರ್ಥಿ ಸೋನಿಲ್ ಬೋಸ್ ಪತ್ನಿ ಹಾಗು ಮಗಳು ಇದ್ದರು ಸಹ ವೈವಾಹಿಕ ಜೀವನದ ಬಗ್ಗೆ ಪ್ರಮಾಣ ಪತ್ರದಲ್ಲಿ ಉಲ್ಲೇಖನ ಮಾಡದೇ ವಂಚಿಸಿದ್ದು, ಇವರ ನಾಮಪತ್ರವನ್ನು ಅಸಿಂಧು ಗೊಳಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಬಿಜೆಪಿ ದೂರು ನೀಡಿದೆ.
ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ನಾಮಪತ್ರ ಸಲ್ಲಿಸುವಾಗ ನೀಡಿರುವ ಪ್ರಮಾಣ ಪತ್ರದಲ್ಲಿ ಪತ್ನಿ ಹಾಗೂ ಮಗಳನ್ನು ಉಲ್ಲೇಖ ಮಾಡಿಲ್ಲ. ಜೊತೆಗೆ ಅವರ ಅದಾಯ ಮೂಲಗಳನ್ನು ಸಹ ತಿಳಿಸಿಲ್ಲ. ಅವರಿಗೆ ಎಂ.ಕೆ. ಸವಿತಾ ಎಂಬ ಸರ್ಕಾರಿ ನೌಕರಿಯಲ್ಲಿರುವ ಪತ್ನಿ ಇದ್ದು, ಮಗಳು ಸಹ ಇದ್ದಾರೆ. ಆದರೆ, ಸಾರ್ವಜನಿಕರಿಗೆ ಸುನೀಲ್ ಬೋಸ್ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ಚುನಾವಣಾ ಏಜೆಂಟ್ ಆಗಿರುವ ನಿಕಟಪೂರ್ವ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ನಾರಾಯಣ್ ಪ್ರಸಾದ್ ತಿಳಿಸಿದ್ದಾರೆ.
ಈಗಾಗಲೇ ಚುನಾವಣಾಧಿಕಾರಿಗಳು ಸುನೀಲ್‍ಬೋಸ್ ಅವರು ನಾಮಪತ್ರವನ್ನು ಕ್ರಮಬದ್ದಗೊಳಿಸಿದ್ದು, ಇದು ಸರಿಯಾದ ಕ್ರಮವಲ್ಲ. ನಾವು ಸುನೀಲ್ ಬೋಸ್‍ಗೆ ಪತ್ನಿ ಹಾಗೂ ಮಗಳು ಇರುವ ಬಗ್ಗೆ ಛಾಯಾಚಿತ್ರಗಳು ಹಾಗೂ ಫೇಸ್‍ಬುಕ್, ವಾಟ್ಸಾಸ್, ದಾಖಲಾತಿಗಳ ಸಮೇತ ಮನವಿಯನ್ನು ಸಲ್ಲಿಸಿದ್ದೇವೆ.
ಇತ್ತಿಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಸುನೀಲ್ ಬೋಸ್ ಅವರ ಮನೆಗೆ ಹೋಗಿದ್ದ ಅವರ ಕುಟುಂಬದೊಂದಿಗೆ ಪೋಟೊ ತೆಗೆಸಿಕೊಂಡಿದ್ದಾರೆ. ಅಲ್ಲದೇ ಪ್ರಮಾಣ ಪತ್ರದಲ್ಲಿ ಎಂ.ಕೆ. ಸವಿತಾ ಅವರಿಂದ 1 ಲಕ್ಷ ರೂ. ಸಾಲ ಪಡೆದಿರುವುದಾಗಿ ತೋರಿಸಿದ್ದಾರೆ. ಈ ಎಂ.ಕೆ. ಸವಿತಾ ಯಾರು ಎಂಬುವುದು ಸಾರ್ವಜನಿಕರಿಗೆ ತಿಳಿಯಬೇಕಾಲ್ಲವೇ? ಒಬ್ಬ ಹೆಣ್ಣು ಮಗಳು ಸುನೀಲ್ ಬೋಸ್‍ಗೆ ಸಾಲ ಕೊಟ್ಟಿದ್ದಾರೆ ಎಂದು ಅವರು ಯಾರು ಎಂಬ ಪ್ರಶ್ನೆ ಬರುತ್ತದೆ. ಹೀಗಾಗಿ ಎಲ್ಲಾ ಪ್ರಶ್ನೆಗಳನ್ನು ನಾವು ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ತಿಳಿಸಿದ್ದೇವೆ.
ಈ ಕೂಡಲೇ ಅವರ ನಾಮಪತ್ರವನ್ನು ತಿರಸ್ಕøತಗೊಳಿಸಬೇಕು ಎಂಬುವುದು ನಮ್ಮ ಒತ್ತಾಯವಾಗಿದೆ. ಈಗಾಗಲೇ ನಮ್ಮ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಿಗೆ ವಿಚಾರವನ್ನು ತಿಳಿಸಿ, ರಾಜ್ಯ ಚುನಾವಣಾ ಆಯೋಗಕ್ಕು ಸಹ ದೂರ ಸಲ್ಲಿಸುತ್ತೇವೆ. ರಾಜ್ಯ ಬಿಜೆಪಿ ಕಾನೂನು ವಿಭಾಗಕ್ಕೆ ದಾಖಲಾತಿಗಳನ್ನು ರವಾನೆ ಮಾಡಿದ್ದೇವೆ. ಅವರು ಅಭಿಪ್ರಾಯಗಳನ್ನು ಸಂಗ್ರಹಿಸಿ ಮುಂದಿನ ಹೋರಾಟ ಮಾಡುವುದಾಗಿ ನಾರಾಯಣ ಪ್ರಸಾದ್ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್, ಚುಡಾ ಮಾಜಿ ಅಧ್ಯಕ್ಷ ಕುಲಗಾಣಶಾಂತಮೂರ್ತಿ, ಸಹ ಪ್ರಮುಖ್ ಅಶ್ವಿನ್, ಯುವ ಮುಖಂಡ ಯೋಗಹಂಸ್ ಇತರರು ಇದ್ದರು.