ಕ್ಷೇತ್ರದ ಅಭಿವೃದ್ದಿಗಾಗಿ ಬಿಜೆಪಿ ಬೆಂಬಲಿಸಿ: ಬಾಲರಾಜು ಮನವಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.05- ಹಿಂದುಳಿದ ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗಾಗಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಪ್ರಬುದ್ದ ವಕೀಲರಾದ ನೀವೆಲ್ಲರು ಬಿಜೆಪಿಯನ್ನು ಬೆಂಬಲಿಸುವಂತೆ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು ಮನವಿ ಮಾಡಿದರು.
ನಗರದ ನ್ಯಾಯಾಲಯದ ರಸ್ತೆಯಲ್ಲಿರುವ ವಕೀಲರ ಸಂಘದ ಕಟ್ಟಡದಲ್ಲಿ ವಕೀಲರ ಸಂಘದ ಪದಾಧಿಕಾರಿಗಳನ್ನು ಭೇಟಿ ಮಾಡಿ, ಮತಯಾಚನೆ ಮಾಡಿದ ಅವರು, ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಅಭಿವೃದ್ದಿ ಕೆಲಸಗಳು ಹಾಗು ದೇಶದ ಭದ್ರತೆ ಮತ್ತು ಸುರಕ್ಷತೆಗೆ ಅವರು ಕೈಗೊಂಡ ಯೋಜನೆಗಳು ವಿಶ್ವಕ್ಕೆ ಮಾದರಿಯಾಗಿದೆ. ಮತ್ತೊಮ್ಮೆ ದೇಶದ ಪ್ರಧಾನಿಯಾಗಿ ಮೋದಿ ಅವರನ್ನು ನೋಡಲು ವಿಶ್ವವೇ ಕಾತುರವಾಗಿದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿಯಾಗಿ ನಿಮ್ಮ ಬಾಲರಾಜು ಸ್ಪರ್ಧೆ ಮಾಡಿದ್ದೇನೆ. ಅಶೀರ್ವಾದ ಮಾಡಬೇಕು ಎಂದರು.
1999ರಲ್ಲಿ ಬಿಜೆಪಿಯಿಂದ ಕೊಳ್ಳೇಗಾಲ ಕ್ಷೇತ್ರದಲ್ಲಿ ಸ್ಪರ್ಧಿಸಿ ಜೊತೆಗೆ 2004ರಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದೆ. ನನಗೆ ಸಿಕ್ಕ ಮೂರುವರೆ ವರ್ಷದ ಅಲ್ಪ ಅವಧಿಯಲ್ಲಿಯೇ ಕೊಳ್ಳೇಗಾಲ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ದಿ ಮಾಡಿದ್ದೆ. ಆ ನಂತರ ನನಗೆ ರಾಜಕೀಯವಾಗಿ ಅವಕಾಶ ಸಿಗಲಿಲ್ಲ ಎಂದರು.
ಈಗ ಮತ್ತೆ ಲೋಕಸಭೆಗೆ ಸ್ಪರ್ಧೆ ಮಾಡಲು ಬಿಜೆಪಿ ಟಿಕೆಟ್ ನೀಡುವ ಮೂಲಕ ಅವಕಾಶ ಕಲ್ಪಿಸಿಕೊಟ್ಟಿದೆ. ಪ್ರಧಾನಿ ನರೇಂದ್ರಮೋದಿ ಅವರು ದೇಶದಲ್ಲಿ ಅನೇಕ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಈ ಹಿಂದೆ ಕ್ಷೇತ್ರದಲ್ಲಿ ಗೆದ್ದು ಸಂಸದರಾಗಿದ್ದ ಆರ್.ಧ್ರುವನಾರಾಯಣ ಅವರಂತೆ ನನಗೂ ಜಿಲ್ಲೆಯ ಅಭಿವೃದ್ಧಿ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
ಸಂದರ್ಭದಲ್ಲಿ ಮಾತನಾಡಿದ ವಕೀಲರ ಸಂಘ ಪದಾಧಿಕಾರಿಗಳು ಮಾತನಾಡಿ, ಬಾಲರಾಜು ಅವರು ನಮ್ಮ ಸಂಘಕ್ಕೆ ಮತಯಾಚನೆಗೆ ಅಗಮಿಸಿದ್ದಾರೆ. ಅವರಿಗೆ ಬೆಂಬಲ ನೀಡುವ ಜೊತೆಗೆ ಅವರು ಸಂಸದರಾಗ ಬಳಿಕ ವಕೀಲರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ನಂಜಯ್ಯ, ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ ದೊಡ್ಡಮೊಳೆ, ಜಂಟಿ ಕಾರ್ಯದರ್ಶಿ ಮೋಹನ್ ಜಗದೀಶ್, ಖಜಾಂಚಿ ಸಿ.ಸಿ.ರಮೇಶ್, ಕಾರ್ಯಕಾರಿಣಿ ಸಮಿತಿ ಸದಸ್ಯ ಜಯಪ್ರಕಾಶ್, ಹಿರಿಯ ವಕೀಲರಾದ ಪುಟ್ಟರಾಜು, ವಿ. ನಾಗರಾಜೇಂದ್ರ, ಸಿ. ಚಿನ್ನಸ್ವಾಮಿ, ಹರವೆ ಮಂಜು, ಜಿಲ್ಲಾ ಯುವ ಬಿಜೆಪಿ ಮಾಜಿ ಅಧ್ಯಕ್ಷ ಪ್ರಣಯ್, ಜಿಲ್ಲಾ ಕಾರ್ಯದರ್ಶಿ ನಟರಾಜು, ನಗರ ಮಂಡಲದ ಅಧ್ಯಕ್ಷ ಶಿವರಾಜ್ ನಾಯಕ, ಜಿಲ್ಲಾ ಮಾಧ್ಯಮ ಪ್ರಮುಖ್ ವಿರೇಂದ್ರ, ರಾಮಸಮುದ್ರ ಪರಶಿವ, ಹೊಂಗನೂರು ಮಹದೇವಸ್ವಾಮಿ, ಬೆಟ್ಟದಪುರ ಮಹದೇವಸ್ವಾಮಿ ಇತರರು ಇದ್ದರು.