ಶಿವಮೊಗ್ಗದಲ್ಲಿ ಮಹಿಳೆಯರಿಬ್ಬರ ಸರಗಳ್ಳತನ – ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದುಷ್ಕರ್ಮಿಗಳ ಕೃತ್ಯ!
ಸಂಜೆವಾಣಿ ವಾರ್ತೆ
ಶಿವಮೊಗ್ಗ, ಏ. ೫; ಬೈಕ್ ನಲ್ಲಿ ಆಗಮಿಸಿದ ಇಬ್ಬರು ದುಷ್ಕರ್ಮಿಗಳು, ವಾಕಿಂಗ್’ಗೆ ತೆರಳುತ್ತಿದ್ದ ಮಹಿಳೆಯರಿಬ್ಬರ ಬಂಗಾರದ ಸರ ಕಳವು ಮಾಡಿ ಪರಾರಿಯಾದ ಘಟನೆ ಗುರುವಾರ ಮುಂಜಾನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.ಮಲ್ಲೇಶ್ವರ ನಗರದಲ್ಲಿರುವ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪರ ನಿವಾಸದ ಬಳಿ ಬೆಳಿಗ್ಗೆ ಸರಿಸುಮಾರು 5 ಗಂಟೆ ವೇಳೆಗೆ ಕೃತ್ಯ ನಡೆದಿದೆ. ಸ್ಥಳೀಯ ನಿವಾಸಿಗಳಾದ ನಾಗರತ್ನ (66) ಹಾಗೂ ಸುಲೋಚನಾ (63) ಸರ ಕಳೆದುಕೊಂಡ ಮಹಿಳೆಯರೆಂದು ಗುರುತಿಸಲಾಗಿದೆ.ನಾಗರತ್ನರಿಗೆ ಸೇರಿದ 30 ಗ್ರಾಂ ಹಾಗೂ ಸುಲೋಚನಾ ಅವರಿಗೆ ಸೇರಿದ 31 ಗ್ರಾಂ ತೂಕದ ಸರಗಳನ್ನು ಕಳವು ಮಾಡಲಾಗಿದೆ. ಇವುಗಳ ಮೌಲ್ಯ ಸರಿಸುಮಾರು 3 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.ಬೈಕ್ ನಲ್ಲಿ ಆಗಮಿಸಿದ ಇಬ್ಬರು ದುಷ್ಕರ್ಮಿಗಳು, ವಿಳಾಸ ಕೇಳುವ ನೆಪದಲ್ಲಿ ವಾಕಿಂಗ್ ತೆರಳುತ್ತಿದ್ದ ಇಬ್ಬರು ಮಹಿಳೆಯರನ್ನು ನಿಲ್ಲಿಸಿದ್ದಾರೆ. ವಿಳಾಸ ಕೇಳಿದ ನಂತರ ಓರ್ವ ಬೈಕ್ ನಿಂದ ಕೆಳಕ್ಕಿಳಿದು ಹಿಂಬದಿಯಿಂದ ಇಬ್ಬರು ಮಹಿಳೆಯರ ಸರಗಳನ್ನು ಕಿತ್ತುಕೊಂಡಿದ್ದಾನೆ. ನಂತರ ಬೈಕ್ ನಲ್ಲಿ ಪರಾರಿಯಾಗಿದ್ದಾರೆ. ಘಟನೆಯ ದೃಶ್ಯ  ಕೆ.ಎಸ್.ಈಶ್ವರಪ್ಪ ನಿವಾಸದ ಮುಂಭಾಗ ಅಳವಡಿಸಿರುವ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದರಿ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರ ಪತ್ತೆಗೆ ಕ್ರಮಕೈಗೊಂಡಿದ್ದಾರೆ.