ಯುವ ಮತದಾರರು ದೇಶ ಮೊದಲು ಎಂಬ ಪ್ರಜ್ಞೆಯೊಂದಿಗೆ ಮತ ಚಲಾಯಿಸಿ: ಪೃಥ್ವಿಕುಮಾರ್
ಸಂಜೆವಾಣಿ ವಾರ್ತೆ,
ವಿಜಯಪುರ,ಏ.4 : ಪ್ರಜ್ಞಾವಂತ ಯುವ ಮತದಾರರು ಕಡ್ಡಾಯವಾಗಿ ದೇಶ ಮೊದಲು ಎಂಬ ಪ್ರಜ್ಞೆಯೊಂದಿಗೆ ಮತ ಚಲಾಯಿಸಬೇಕಾಗಿದೆ. ಯುವಶಕ್ತಿಯನ್ನು ಅರ್ಥ ಮಾಡಿಕೊಂಡು ದುಡಿಯುವ ಕೈಗಳಿಗೆ ಕೌಶಲ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸುವ ಯುವ ಸ್ನೇಹಿ ಸರ್ಕಾರವನ್ನು ಪ್ರತಿಷ್ಠಾಪಿಸಬೇಕಾಗಿದೆ ಎಂದು ಎಬಿವಿಪಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಪೃಥ್ವಿಕುಮಾರ ಹೇಳಿದರು.
ನಗರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಎಬಿವಿಪಿ ವತಿಯಿಂದ ಮತದಾನ ಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದೊಂದು ಮತಕ್ಕೂ ವಿಶೇಷ ಮೌಲ್ಯವಿದೆ ಮಹತ್ವವಿದೆ, ಭಾರತದ ಇತಿಹಾಸದಲ್ಲಿ ಕೇವಲ ಒಂದು ಮತದ ಕೊರತೆಯಿಂದ ಜನಪರ ಸರ್ಕಾರವು ಕುಸಿದು ಬಿದ್ದಿರುವ ಉದಾರಣೆ ಇದೆ. ಒಂದು ಮತದ ಅಂತರದಿಂದ ಚುನಾವಣೆಯಲ್ಲಿ ಅಭ್ಯರ್ಥಿಗಳು ಸೋತಿರುವ ನಿದರ್ಶನಗಳಿವೆ. ಹೀಗಿರುವಾಗ 2024ರ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಭಾರತೀಯರು ತಮ್ಮ ಮತವನ್ನು ಚಲಾಯಿಸಬೇಕೆಂದು ಕರೆ ನೀಡಿದರು.
ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ, ಸದೃಢ ಸಶಕ್ತ ಸ್ವಾಭಿಮಾನಿ ಭಾರತಕ್ಕಾಗಿ ಭಯೋತ್ಪಾದನಾ ಮುಕ್ತ ಭಾರತಕ್ಕಾಗಿ, ದೇಶ ವಿಭಜಕ ಶಕ್ತಿಗಳ ವಿರುದ್ಧ ರಾಷ್ಟ್ರದ ಏಳಿಗೆಗಾಗಿ, ಭ್ರಷ್ಟ ಮುಕ್ತ ಆಡಳಿತಕ್ಕಾಗಿ, ನವ ಭಾರತ ನಿರ್ಮಾಣಕ್ಕಾಗಿ, ದೇಶದ ಸಂಪೂರ್ಣ ಅಭಿವೃದ್ಧಿಗಾಗಿ ಬಲಿಷ್ಠ ಆರ್ಥಿಕತೆಗಾಗಿ ದೇಶದ ರಕ್ಷಣೆಗಾಗಿ, ಶಿಕ್ಷಣ ಭಾರತೀಕರಣಕ್ಕಾಗಿ, ಸಮರ್ಥ ನಾಯಕತ್ವಕ್ಕಾಗಿ ಬಲಿಷ್ಠ ಪ್ರಜಾಪ್ರಭುತ್ವಕ್ಕಾಗಿ ಮಹಿಳಾ ಸಬಲೀಕರಣಕ್ಕಾಗಿ ಬಲಿಷ್ಠ ವಿದೇಶಾಂಗ ನೀತಿಗಾಗಿ ಸ್ವಾವಲಂಬಿ ಭಾರತಕ್ಕಾಗಿ ಗ್ರಾಮಗಳ ಅಭಿವೃದ್ಧಿಗಾಗಿ ನಾವೆಲ್ಲರೂ ನಮ್ಮ ಮತವನ್ನು ಚಲಾಯಿಸಬೇಕು. ಭವ್ಯ ಭಾರತದ ಪ್ರಜ್ಞಾವಂತ ಮತದಾರರಾದ ನಾವು ಭಾರತದ ವರ್ತಮಾನ ಹಾಗೂ ಭವಿಷ್ಯವನ್ನು ಉಜ್ವಲಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಈ ಸಮಯದಲ್ಲಿ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ಗಂಗಾಧರ ಹಂಜಿಗಿ, ಜಿಲ್ಲಾ ಸಂಚಾಲಕ ಮಂಜುನಾಥ ಹಳ್ಳಿ, ಹರ್ಷ ನಾಯಕ, ಅಭಿಷೇಕ ಬಿರಾದಾರ, ಬಸವರಾಜ ಪೂಜಾರಿ, ಅಮಿತ ಕುಮಾರ ಇತರರು ಉಪಸ್ಥಿತರಿದ್ದರು.