ಭಾವೈಕ್ಯ ಸಂದೇಶ ನೀಡಿದ  ರಂಭಾಪುರಿ ವೀರಗಂಗಾಧರ ಜಗದ್ಗುರುಗಳು

ಸಂಜೆವಾಣಿ ವಾರ್ತೆ
ರಿಪ್ಪನ್‌ಪೇಟೆ.ಏ.೩: ಎಲ್ಲರೂ ಅವರವರ ಧರ್ಮಕ್ಕೆ ಜಯವಾಗಲಿ ಎಂದರೆ ಲಿಂ.ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಭಾವೈಕ್ಯ ಸಂದೇಶ ನೀಡಿ ಜಗದ್ವಂದ್ಯರಾಗಿದ್ದಾರೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು  ಕವಲೇದುರ್ಗದ ಭುವನಗಿರಿ ಸಂಸ್ಥಾನ ಹಿರೇಮಠದಲ್ಲಿ ಜರುಗಿದ ಇಷ್ಟಲಿಂಗ ಮಹಾಪೂಜೆ, ಮಂಡಲ ಪೂಜೆಯ ಮುಕ್ತಾಯ, ನೂತನ ಕಟ್ಟಡ ಉದ್ಘಾಟನೆ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಜಾತಿ ಮತ ಪಂಥಗಳೆನ್ನದೇ ಸರ್ವ ಸಮುದಾಯದ ಅಭ್ಯುದಯಕ್ಕಾಗಿ ಶ್ರಮಿಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರಿಗೆ ಸಲ್ಲುತ್ತದೆ. ವಿಶ್ವ ಬಂಧುತ್ವದ ಆದರ್ಶ ಭಾವನೆಗಳನ್ನು ಹೊಂದಿ ಧರ್ಮ ಕಟ್ಟಿ ಬೆಳೆಸುವ ಜವಾಬ್ದಾರಿ ನಾಡಿನ ಮಠಗಳ ಮೇಲಿದೆ. ಉತ್ತಮ ಸಂಸ್ಕಾರ ಆದರ್ಶ ಚಿಂತನಗಳನ್ನು ಉಳಿಸಿ ಬೆಳೆಸಿದ್ದಾದರೆ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಎಲ್ಲ ಧರ್ಮಗಳ ಗುರಿ ಮಾನವ ಕಲ್ಯಾಣವೇ ಆಗಿದೆ ಎಂಬುದನ್ನು ಅರಿಯದೇ ಇಂದು ಧರ್ಮ ದೇವರ ಹೆಸರಿನಲ್ಲಿ ಏನೆಲ್ಲ ನಡೆಯುತ್ತಿವೆ. ಮನುಷ್ಯನ ಬುದ್ಧಿ ಶಕ್ತಿ ಬೆಳೆದಂತೆ ಭಾವನೆಗಳು ಬೆಳೆಯುತ್ತಿಲ್ಲ ಎಂಬುದು ನೋವಿನ ಸಂಗತಿಯಾಗಿದೆ. ಪ್ರತಿಯೊಬ್ಬರಲ್ಲಿಯೂ ಸ್ವಾಭಿಮಾನದ ಜೊತೆಗೆ ದೇಶಾಭಿಮಾನ ಬೆಳೆದು ಬರಬೇಕು. ಕವಲೇದುರ್ಗದ ಮರುಳಸಿದ್ಧ ಶಿವಾಚಾರ್ಯ ಸ್ವಾಮಿಗಳು ಶ್ರೀ ಮಠದ ಅಧಿಕಾರ ವಹಿಸಿಕೊಂಡ ನಂತರ ಸತ್ಯ ಸಂಕಲ್ಪದೊAದಿಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ನಾಡಿನ ಮಠಗಳಿಗೆ ಬೇಕಾಗುವ ಭಾವೀ ಮಠಾಧೀಶರಿಗೆ, ಜನ ಮನಕ್ಕೆ ಹತ್ತಿರವಾಗಿ ಕಾರ್ಯ ನಿರ್ವಹಿಸುವ ಶಾಸ್ತಿç ಬಳಗಕ್ಕೆ ತಮ್ಮ ಗುರುಕುಲದ ಮೂಲಕ ಶಿಕ್ಷಣ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕವಲೇದುರ್ಗ ಭುವನಗಿರಿ ಸಂಸ್ಥಾನ ಮಠ ಉತ್ತುಂಗಕ್ಕೆ ಏರುವುದರಲ್ಲಿ ಸಂಶಯವಿಲ್ಲ ಎಂದು ಹೇಳಿ ಶ್ರೀ ರಂಭಾಪುರಿ ಪೀಠದಿಂದ ಹಸಿರು ಮಡಿ, ಸ್ಮರಣಿಕೆಯನ್ನು ಕವಲೇದುರ್ಗ ಶ್ರೀಗಳಿಗೆ ನೀಡಿ ಅಶೀರ್ವದಿಸಿದರು.ನೇತೃತ್ವ ವಹಿಸಿದ ಕವಲೇದುರ್ಗದ ಭುವನಗಿರಿ ಸಂಸ್ಥಾನ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಗುರುವಿನ ಅಂತ:ಕರಣದ ಆಶೀರ್ವಾದದಿಂದ ಏನೆಲ್ಲ ಸಾಧಿಸಲು ಸಾಧ್ಯವಾಗುತ್ತದೆ. ಕೃಷಿ ಜೀವನ ಋಷಿ ಜೀವನ ತತ್ವದಡಿಯಲ್ಲಿ ಇಲ್ಲಿನ ಗುರುಕುಲ ನಡೆಯುತ್ತಿದೆ. ಶ್ರೀ ರಂಭಾಪುರಿ ಜಗದ್ಗುರುಗಳ ಕೃಪಾಶೀರ್ವಾದದಿಂದ ಶ್ರೀ ಮಠ ಅಭಿವೃದ್ಧಿ ಹೊಂದುತ್ತದೆ. ಭವಿಷ್ಯತ್ತಿನ ದಿನಗಳಲ್ಲಿ ಶ್ರೀ ಮಠದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆಸುವ ಸಂಕಲ್ಪ ತಮ್ಮದಾಗಿದೆ ಎಂದರು. ಮಳಲಿಮಠದ ಡಾ.ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ಕೊಣಂದೂರಿನ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಹರಪನಹಳ್ಳಿ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಲತಾ-ಕೆ.ಆರ್.ಪ್ರಕಾಶ ದಂಪತಿಗಳು, ಹಾಲಪ್ಪಗೌಡರು, ಗುರುಮೂರ್ತಿ ನಾಯಕ, ಪಾಂಡಣ್ಣ, ರಾಘವೇಂದ್ರ, ವಿಘ್ನೇಶ್ವರ ಸೊಲ್ಲಾಪುರಮಠ, ಪ್ರಶಾಂತ ರಿಪ್ಪನ್‌ಪೇಟೆ, ಯುವರಾಜಗೌಡ, ಸಿ.ಎಚ್.ಬಾಳನಗೌಡ್ರ, ವರ್ತೇಶಗೌಡ್ರು, ಬಸವರಾಜ ರಿಪ್ಪನ್‌ಪೇಟೆ ಸೇರಿದಂತೆ ಅನೇಕ ಗಣ್ಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು. ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಭಕ್ತ ಸಂಕುಲಕ್ಕೆ ಶುಭ ಹಾರೈಸಿದರು. ಆಗಮಿಸಿದ ಸಮಸ್ತರಿಗೂ ಅನ್ನ ದಾಸೋಹ ನೆರವೇರಿತು.