ಶಿಕಾರಿಪುರದಲ್ಲಿ ಮತದಾನ ಜಾಗೃತಿ ರಥಕ್ಕೆ ಚಾಲನೆ
ಶಿವಮೊಗ್ಗ, ಏ.2: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ, ಪುರಸಭೆ ಶಿಕಾರಿಪುರ ಇವರ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮ ಅಂಗವಾಗಿ ಇಂದು ವಿನೂತನ ಮತದಾನ ಜಾಗೃತಿ ರಥಕ್ಕೆ ಸಹಾಯಕ ಚುನಾವಣಾಧಿಕಾರಿ ರವಿ ಬಂಗಾರಪ್ಪನವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡ ನೂರರಷ್ಟು ಮತದಾನ ಮಾಡುವ ಮೂಲಕ ರಾಜ್ಯದಲ್ಲಿಯೇ ಅತಿ ಹೆಚ್ಚು ಮತದಾನ ನಡೆದ ತಾಲ್ಲೂಕು ಎಂಬ ಹೆಗ್ಗಳಿಕೆಗೆ ಪಾತ್ರರಾಗಬೇಕು ಎನ್ನುವ ಉದ್ದೇಶದಿಂದ ಮತದಾನ ಜಾಗೃತಿ ರಥದ ಮೂಲಕ ಚುನಾವಣಾ ಆಯೋಗದ ಎಲ್ಲಾ ರೀತಿಯ ಆಪ್‍ಗಳ ಬಗ್ಗೆ ಮಾಹಿತಿಯನ್ನು ಅಳವಡಿಸಲಾಗಿದೆ.  ಸಾರ್ವಜನಿಕರು ಈ ಆಪ್‍ಗಳನ್ನು ಡೌನ್ಲೋಡ್ ಮಾಡಿಕೊಂಡು ಚುನಾವಣೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು ಹಾಗೂ ದೂರುಗಳನ್ನು ಸಹ ದಾಖಲಿಸಬಹುದಾಗಿದ್ದು, ಪ್ರತಿಯೊಬ್ಬರು ಮತದಾನವನ್ನು ಮಾಡುವ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ರಕ್ಷಣೆ ಮಾಡಬೇಕಾಗಿದೆ ಎಂದರು.ಈ ಸಂದರ್ಭದಲ್ಲಿ ತಹಶೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಮಾತನಾಡಿ ಇಂದಿನಿಂದ ಮತದಾನ ನಡೆಯುವ ದಿನಾಂಕದವರೆಗೂ ಪ್ರತಿದಿನ ಶಿಕಾರಿಪುರ ಪಟ್ಟಣದ ಎಲ್ಲಾ ವಾರ್ಡ್‍ಗಳಲ್ಲಿಯೂ ಈ ಜಾಗೃತಿ ರಥ ಸಂಚರಿಸಲಿದ್ದು, ಸಾರ್ವಜನಿಕರು ಅಗತ್ಯ ಮಾಹಿತಿಯನ್ನು ಪಡೆದುಕೊಂಡು ಪ್ರತಿಯೊಬ್ಬರು ಮತದಾನ ಮಾಡಿ ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಭರತ್, ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ಪುರಸಭೆಯ ವ್ಯವಸ್ಥಾಪಕ ರಾಜ್ ಕುಮಾರ್, ಸಮುದಾಯ ಸಂಘಟನಾ ಅಧಿಕಾರಿ ವೀರಭದ್ರಯ್ಯ. ಕಂದಾಯ ಅಧಿಕಾರಿ ಪರಶುರಾಮ್, ಹೊನ್ನಾಳಿ ಸುರೇಶ್, ಹಿರಿಯ ಅರೋಗ್ಯ ಅಧಿಕಾರಿ ನವಾಜ್, ಪುರಸಭಾ ಸಿಬ್ಬಂದಿಗಳಾದ ಅಶ್ವತ್. ದೇವರಾಜ್. ರಾಘವೇಂದ್ರ. ಅರ್ಚಕ ವೆಂಕಟೇಶ್ ಮತ್ತು ಸಾರ್ವಜನಿಕರು ಉಪಸ್ಥಿರಿದ್ದರು.