ಜಗದ ಸಂತ ಶಿವಕುಮಾರ ಶ್ರೀಗಳ ತತ್ವಾದರ್ಶ ಇಂದಿಗೂ ಪ್ರಸ್ತುತ:ಸಂತೋಷ ಬಂಡೆ
ವಿಜಯಪುರ,ಏ.1: ಕಾಯಕ ದಾಸೋಹದ ಮೂಲಕ ವಿಶ್ವಕ್ಕೆ ಬಸವ ತತ್ವ ಸಾರಿದ ಮಹಾನ್ ಶಕ್ತಿ ಶಿವಕುಮಾರ ಸ್ವಾಮೀಜಿ ಅವರು ಅನ್ನ,ಅಕ್ಷರ,ಆಶ್ರಯ ನೀಡಿ ಎಲ್ಲರ ಮನಗೆದ್ದು, ಅಸಂಖ್ಯಾತ ಮಕ್ಕಳ ಭವಿಷ್ಯ ಕಲ್ಪಿಸಿದ ನಡೆದಾಡುವ ದೇವರಾಗಿದ್ದಾರೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ತಾಲೂಕಿನ ನಾಗಠಾಣ ಗ್ರಾಮದಲ್ಲಿ ಡಾ. ಶಿವಕುಮಾರ ಸ್ವಾಮಿಜಿಯವರ 117 ನೇ ಜಯಂತಿ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಅಕ್ಷರ ಜ್ಞಾನದ ಜೊತೆಗೆ ಬದುಕಿಗೆ ಅಗತ್ಯವಾದ ಶಿಕ್ಷಣವನ್ನೂ ಸ್ವಾಮೀಜಿ ಅವರು ಮಕ್ಕಳಿಗೆ ಕಲಿಸಿದ್ದಾರೆ. ಮಠದ ಹೊಲ-ತೋಟಗಳಲ್ಲಿ ಮತ್ತು ಕೃಷಿ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವ ಮೂಲಕ ಅವರಿಗೆ ಕಾಯಕ ಮತ್ತು ಶ್ರಮ ಸಂಸ್ಕøತಿಯ ಪಾಠಗಳನ್ನು ಪ್ರಾಯೋಗಿಕವಾಗಿ ಹೇಳಿಕೊಟ್ಟಿದ್ದಾರೆ ಎಂದು ಹೇಳಿದರು.
ಪಿಕೆಪಿಎಸ್ ನಿರ್ದೇಶಕ ಪ್ರಭಾಕರ ಅರಕೇರಿ ಮಾತನಾಡಿ, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರು ಹಾಕಿಕೊಟ್ಟ ಮಾರ್ಗ, ತೋರಿದ ದಾರಿ ಅನುಪಮವಾದದ್ದು. ಅತ್ಯಂತ ಸರಳ ಹಾಗೂ ಸಾರ್ಥಕತೆಯ ಬದುಕು ನಡೆಸಿದ ಅವರ ಜೀವನ ಎಲ್ಲರಿಗೂ ಸ್ಪೂರ್ತಿದಾಯಕ ಎಂದು ಹೇಳಿದರು.
ಚಂದ್ರಕಾಂತ ಬಿರಾದಾರ ಮಾತನಾಡಿ, ಜ್ಞಾನ ಎನ್ನುವುದು ಬಹಳ ಪವಿತ್ರ. ಅದು ಅಮೂಲ್ಯ ರತ್ನ, ಯಾರು ನಿಜವಾದ ಜ್ಞಾನ ಸಂಪಾದನೆ ಮಾಡಿ, ನಿಜವಾದ ಜ್ಞಾನಿಯಾಗುತ್ತಾನೋ ಅವನೇ ನಿಜವಾದ ಶ್ರೀಮಂತ ಎಂಬ ಅವರ ನುಡಿ ಇಂದಿನ ಪೀಳಿಗೆಗೆ ಆದರ್ಶಪ್ರಾಯವಾಗಿದೆ ಎಂದು ಹೇಳಿದರು.
ಗ್ರಾಮಸ್ಥರಾದ ಹನಮಂತ ಹಂಡಿ,ಚಂದು ರೂಗಿ, ಹನಮಂತ ಬಗಲಿ, ಶ್ರೀಶೈಲ ರಾಂಪುರ, ಮಲ್ಲಿಕಾರ್ಜುನ ಶಿರಕನಹಳ್ಳಿ, ರಮೇಶ ಮಸಳಿ, ಮಲ್ಲಿಕಾರ್ಜುನ ಸಮಗೊಂಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.