ರಥದ ಚಕ್ರಕ್ಕೆ ಸಿಲುಕಿ ಭದ್ರತಾ ಸಿಬ್ಬಂದಿ ಸಾವು
ಕಲಬುರಗಿ.ಮಾ೩೧:ಶ್ರೀ ಶರಣಬಸವೇಶ್ವರರ ೨೦೨ನೇ ಜಾತ್ರಾ ಮಹೋತ್ಸವದಲ್ಲಿ ರಥದ ಚಕ್ರಕ್ಕೆ ಸಿಲುಕಿ ಓರ್ವ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು, ಇನ್ನೋರ್ವ ಗಾಯಗೊಂಡಿದ್ದಾರೆ.
ರಥದ ಚಕ್ರಕ್ಕೆ ಸಿಲುಕಿ ಓರ್ವ ಗೃಹರಕ್ಷಕ ದಳದ ಸಿಬ್ಬಂದಿ ಮೃತಪಟ್ಟಿದ್ದು, ಇನ್ನೋರ್ವ ಗಾಯಗೊಂಡಿದ್ದಾರೆ. ಬೀದರ್ ಜಿಲ್ಲೆಯ ಚಿಟಗುಪ್ಪಾ ಘಟಕದ ಗೃಹ ರಕ್ಷಕ ದಳದ ಸಿಬ್ಬಂದಿ ಅಶೋಕರೆಡ್ಡಿ ಗಾಯಗೊಂಡ ವ್ಯಕ್ತಿಯಾಗಿದ್ದು, ಮೃತರನ್ನು ಚಿಟಗುಪ್ಪಾ ತಾಲ್ಲೂಕಿನ ಇಟಗಾ ಗ್ರಾಮದ ನಿವಾಸಿ ರಾಮು ವಾಲಿ ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ಸಾಂಪ್ರದಾಯಿಕ ರೀತಿಯಲ್ಲಿ ಉಚ್ಛಾಯಿ ಎಳೆಯುವಾಗ ಅಪಾರ ಸಂಖ್ಯೆಯ ಭಕ್ತರು ಸೇರಿದ್ದರು.
ಉಚ್ಛಾಯಿಯನ್ನು ಸುಗಮವಾಗಿ ಎಳೆಯುವ ಸಲುವಾಗಿ ಸುಮಾರು ೧೦೦ ಸಿಬ್ಬಂದಿಗಳನ್ನು ಭದ್ರತಾ ವ್ಯವಸ್ಥೆಗೆ ನಿಯೋಜಿಸಲಾಗಿತ್ತು. ಬಹುಸಂಖ್ಯೆಯಲಿ ಆಗಮಿಸಿದ ಭಕ್ತರನ್ನು ಬದಿಗೆ ಸರಿಸುತ್ತ ಹೋಗುವಾಗ ಮಾರ್ಗ ಮಧ್ಯದಲ್ಲಿ ರಾಮು ವಾಲಿ ಬಿದ್ದಿದ್ದಾರೆ.
ಈ ಸಂದರ್ಭದಲ್ಲಿ ಆತನ ಮೇಲೆ ಉಚ್ಛಾಯಿ ಚಕ್ರಗಳು ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ರಾಮುನನ್ನು ಆಸ್ಪತ್ರೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟದ್ದಾರೆ. ಮತ್ತೊಂದೆಡೆ ಅದೇ ಉಚ್ಛಾಯಿ ಚಕ್ರಕ್ಕೆ ಅಶೋಕ ರೆಡ್ಡಿ ಅವರ ಕಾಲು ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಪೊಲೀಸರು ಮಾಹಿತಿ ನೀಡಿದ್ದಾರೆ.