ಬಂಜಾರ ಸಮಾಜಕ್ಕೆ ಅವಮಾನಿಸಿಲ್ಲ: ಸಂಸದ ರಮೇಶ ಜಿಗಜಿಣಗಿ
ವಿಜಯಪುರ,ಮಾ.30:ಬಂಜಾರ ಸಮಾಜದ ಬಗ್ಗೆ ನನಗೆ ಮೊದಲಿನಿಂದಲೂ ಗೌರವ ಇದೆ. ಬಂಜಾರ ಸಮಾಜದವರು ಯಾರು? ಅವರ ವೋಟ್ ನನಗೆ ಬೇಡ ಎಂದು ಎಲ್ಲಿಯೂ ಹೇಳಿಕೆ ನೀಡಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನ ಕೆಲವರು ದುರುದ್ದೇಶದಿಂದ ತಪ್ಪು ಸಂದೇಶವನ್ನು ಬಿತ್ತುತ್ತಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಬಂಜಾರ ಸಮಾಜದ ಬಿಜೆಪಿ ಟಿಕೆಟ್ ಆಕಾಂಕ್ಷಿಯೊಬ್ಬರು ಪಕ್ಷದ ಕಚೇರಿಗೆ ಮುತ್ತಿಗೆ ಹಾಕಿ ನನ್ನ ವಿರುದ್ಧ ಪ್ರತಿಭಟನೆ ನಡೆಸಿ ಅನಗತ್ಯ ಆರೋಪ ಮಾಡಿರುವ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡುತ್ತಿದ್ದೆ. ಆಗ ನಾನು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರು ನಮ್ಮ ಜಿಲ್ಲೆಯವರಲ್ಲ ನೆರೆಯ ಬಾಗಲಕೋಟೆ ಜಿಲ್ಲೆಯಿಂದ ಕರೆತಂದಿದ್ದರು. ಅಭ್ಯರ್ಥಿ ಬದಲಿಸಿ ಎಂದು ಈಗ ಹೇಳುವ ಬದಲು ಪಕ್ಷಕ್ಕಾಗಿ ಶ್ರಮಿಸಿದರೆ ಭವಿಷ್ಯದಲ್ಲಿ ಅವರಿಗೆ ಅವಕಾಶಗಳು ಲಭಿಸುತ್ತವೆ ಎಂದು ಹೇಳಿಕೆ ನೀಡಿದ್ದೇನೆ ಹೊರತು ಬಂಜಾರಾ ಸಮುದಾಯಕ್ಕೆ ಅವಮಾನ ಮಾಡಿಲ್ಲ ಎಂದು ತಿಳಿಸಿದರು.
ನನ್ನ ರಾಜಕೀಯ ಜೀವನದಲ್ಲಿ ಇದುವರೆಗೆ ಯಾವುದೇ ಸಮಾಜದವರಿಗೂ ಅನ್ಯಾಯ ಮಾಡಿಲ್ಲ. ಅವಮಾನ ಮಾಡಿಲ್ಲ. ಎಲ್ಲ ಸಮಾಜದವರನ್ನು ಹೆಗಲ ಮೇಲೆ ಹೊತ್ತುಕೊಂಡು ಗೌರವದಿಂದ ನಡೆದುಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್‍ನವರ ದುರುದ್ದೇಶದ ರಾಜಕೀಯ ಅಪಪ್ರಚಾರಕ್ಕೆ ಬಂಜಾರ ಸಮಾಜದವರು ಕಿವಿಗೊಡಬಾರದು. ಸಮಾಜದೊಂದಿಗೆ ಸದಾಕಾಲ ಇರುತ್ತೇನೆ ಎಂದು ತಿಳಿಸಿದರು.