ಶರಣಬಸವೇಶ್ವರ ಉಚ್ಚಾಯಿ ಸಂದರ್ಭದಲ್ಲಿ ಹೋಮ್‌ಗಾರ್ಡ್‌ ಸಾವು: ರಥೋತ್ಸವಕ್ಕೆ ಹೆಚ್ಚಿನ ಬಂದೋಬಸ್ತ್‌ ಒದಗಿಸಿ ಜನರನ್ನು ನಿಯಂತ್ರಿಸಲು ಶಾಸಕ ಅಲ್ಲಂಪ್ರಭು ಪಾಟೀಲ್‌ ಕರೆ
ಕಲಬುರಗಿ:ಮಾ.29:ಐತಿಹಾಸಿಕ ಶರಣಬಸವೇಶ್ವರರ ರಥೋತ್ಸವದ ಸಂದರ್ಭದಲ್ಲಿ ಶುಕ್ರವಾರ ನಡೆದಿರುವ ಉಚ್ಚಾಯಿಯಲ್ಲಿ ಜನರ ನೂಗು ನುಗ್ಗಲು ನಿಯಂತ್ರಿಸಲು ಹೋಗಿ ಹೋಮ್‌ಗಾರ್ಡ್ ಸಿಬ್ಬಂದಿ ರಾಮು ಚಿಟಗುಪ್ಪಎಂಬುವವರ ಸಾವು, ಅಶೋಕ ರೆಡ್ಡಿ ಚಿಟಗುಪ್ಪ ಸೇರಿದಂತೆ ಮೂವರು ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಕಲಬುರಗಿ ದಕ್ಷಿಣ ಶಾಸಕ ಅಲ್ಲಂಪ್ರಭು ಪಾಟೀಲ್‌ ಅವರು ಉಚ್ಚಾಯಿಯಲ್ಲೇ ಹೀಗಾದರೆ ಮಾ. 30 ರ ಶನಿವಾರ ಸಂಜೆಯ ಮುಖ್ಯ ರಥೋತ್ಸವಕ್ಕೆ ಇನ್ನೂ ಹೆಚ್ಚಿನ ಜನ ಸೇರೋದರಿಂದ ಬಿಗಿ ಭದ್ರತೆ ಒದಗಿಸಿ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಈಗಾಗಲೇ ನಾನು ನಗರ ಪೊಲೀಸ್‌ ಕಮೀಶ್ನರ್‌ ಚೇತನ್‌ ಅವರಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಯಾಕೆ ಇಂತಹ ದುರಂತ ಸಂಭವಿಸಿತು ಎಂಬುದರ ಸವಿಸ್ತಾರ ತನಿಖೆಗೂ ಸೂಚಿಸಿದ್ದೇನೆ. ಇಂತಹ ಘಟನೆ ಸಂಭವಿಸಬಾರದು. ರಥೋತ್ಸವದಲ್ಲಿ ಇನ್ನೂ ಹೆಚ್ಚು ಜನ ಬರೋದರಿಂದ ಭದ್ರತೆ ಬಿಗಿ ಗೊಳಿಸುವಂತೆ ಸೂಚಿಸಿದ್ದಾಗಿ ಹೇಳಿದ್ದಾರೆ.
ಈ ಘಟನೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆಯವರ ಗಮನಕ್ಕೆ ತರಲಾಗಿದೆ. ಅವರು ಕೂಡಾ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ತಕ್ಷಣ ಕಲಬುರಗಿಗೆ ರಥೋತ್ಸವ ಭದ್ರತೆಗೆ ಅಗತ್ಯ ಹಾಗೂ ಹೆಚ್ಚಿನ ಭದ್ರತೆಗೆ ಪೊಲೀಸ್‌, ಹೋಮ್‌ಗಾರ್ಡ್‌ ಸಿಬ್ಬಂದಿಗೆ ನಿಯೋಜಿಸುವಂತೆ ಸೂಚಿಸಿದ್ದಾರಂದು ಶಾಸಕ ಅಲ್ಲಂಪ್ರಭು ಪಾಟೀಲ್‌ ಹೇಳಿದ್ದಾರೆ.
ಶರಣಬಸವೇಶ್ವರರು ಕಲಬುರಗಿ ಜನರ ಆರಾಧ್ಯ ದೈವ. ಇವರ ರಥೋತ್ಸವ- ಉಚ್ಚಾಯಿ ಸಂಭ್ರಮ ಸಂಭ್ರಮದಿಂದಲೇ ಕೂಡಿರಬೇಕೇ ವಿನಹಃ ಇಂತಹ ಅಹಿತಕರ ಘಟನೆಗಳು ಸಂಭವಿಸಬಾರದು. ಭಕ್ತರು ಸಹ ಶಾಂತಿ ಕಾಪಾಡಿಕೊಂಡು ಇರಬೇಕು. ದೇವರ ದರುಶನಕ್ಕೆ ತಾಳ್ಮೆಯಿಂದ ಇರಬೇಕು . ಆ ಮೂಲಕ ಶರಣರ ಕೃಪೆಗೆ ಪಾತ್ರರಾಗಬೇಕು ಎಂದು ಶಾಸಕ ಅಲ್ಲಂಪ್ರಭು ಪಾಟೀಲ್‌ ಹೇಳಿದ್ದಾರೆ.